ಇನ್ನೂ ನಿಂತಿಲ್ಲ ಆಸ್ಪತ್ರೆಗಳ ಧನದಾಹ.. ಹಣ ಕೊಟ್ರೆ ಮಾತ್ರ ಮೃತ ದೇಹ ಕೊಡೋದು ಅಂತಿವೆ ಕರಾಳ ಆಸ್ಪತ್ರೆಗಳು

|

Updated on: May 11, 2021 | 3:03 PM

ಕಿಡ್ನಿ ವೈಫಲ್ಯ ಅಂತ ಅಪ್ಪ ಆಸ್ಪತ್ರೆಗೆ ದಾಖಲಾದ್ರು ಆದ್ರೆ ನಿನ್ನೆ ರಾತ್ರಿ ಏಕಾಏಕಿ ಮೃತಪಟ್ಟಿದ್ದಾರೆ ಅಂತ ಆಸ್ಪತ್ರೆಯವರು ಹೇಳಿದ್ರು. ಈಗ 3 ಲಕ್ಷ ಹಣ ಕೊಟ್ರೆ ಮಾತ್ರ ಬಾಡಿ ಕೊಡ್ತಿವಿ ಅಂತ ಸತಾಯಿಸ್ತಿದ್ದಾರೆ ಅಂತ ಪುತ್ರ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ನಿಂತಿಲ್ಲ ಆಸ್ಪತ್ರೆಗಳ ಧನದಾಹ.. ಹಣ ಕೊಟ್ರೆ ಮಾತ್ರ ಮೃತ ದೇಹ ಕೊಡೋದು ಅಂತಿವೆ ಕರಾಳ ಆಸ್ಪತ್ರೆಗಳು
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಗೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಇದರ ನಡುವೆ ತಮ್ಮವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನರ ಆಕ್ರಂದನ ಕೇಳಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವವರು ಹೆಣದ ಮೇಲೆ ಹಣ ಮಾಡಲು ಹೊರಟಿದ್ದಾರೆ. ಆಸ್ಪತ್ರೆ, ಆ್ಯಂಬುಲೆನ್ಸ್ ಸಿಬ್ಬಂದಿ ಹೆಜ್ಜೆ ಹೆಜ್ಜೆಗೂ ಹಣ ಪೀಕುತ್ತಿದ್ದಾರೆ ಎಂದು ಕುಟುಂಬಸ್ಥರು ದುಃಖ ತೋಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದೂ ಕೂಡ ಬೆಂಗಳೂರಿನಲ್ಲಿ ಕೆಲ ಸಂಗತಿಗಳು ನಡೆದಿವೆ.

ಮೃತ ದೇಹ ಪಡೆಯಲು ಹಣವಿಲ್ಲದೆ ಕಣ್ಣೀರಿಟ್ಟ ಕುಟುಂಬಸ್ಥರು
ಮೃತ ದೇಹ ಕೊಡಲು 4,10,000 ಬಿಲ್ ಪಾವತಿಸುವಂತೆ ಆಸ್ಪತ್ರೆ ಸಿಬ್ಬಂದಿ ಪಟ್ಟು ಹಿಡಿದಿದ್ದು ಕುಟುಂಬಸ್ಥರು ಅಷ್ಟೊಂದು ಹಣ ಎಲ್ಲಿಂದ ತರೋದು ಎಂದು ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ಸುಪ್ರ ಆಸ್ಪತ್ರೆಯಲ್ಲಿ ಕಳೆದ 8 ದಿನಗಳಿಂದ 40 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಮೃತ ಸೋಂಕಿತನ ಕುಟುಂಬಸ್ಥರು ತಮ್ಮ ಒಡವೆ, ಆಸ್ತಿ, ಮನೆ ಮಾರಿ ಮೂರು ಲಕ್ಷ ಹಣ ಕಟ್ಟಿದ್ದಾರೆ. ಈ ವೇಳೆ ವೈದ್ಯರು ಎಲ್ಲಾ ಚಿಕಿತ್ಸೆ ನಡೆಯುತ್ತಿದೆ. ರೋಗಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ನಿನ್ನೆ ತಡ ರಾತ್ರಿ ಕೊರೊನಾ ಸೋಂಕಿತ ವ್ಯಕ್ತಿ ಏಕಾಏಕಿ ಮೃತಪಟ್ಟಿದ್ದಾರೆ.

ಈಗ ಆಸ್ಪತ್ರೆ ಸಿಬ್ಬಂದಿ ಮೃತ ದೇಹ ಪಡೆಯಲು 4 ಲಕ್ಷ ರೂ ಪಾವತಿಸಲು ಹೇಳುತ್ತಿದ್ದಾರಂತೆ. ಹೀಗಾಗಿ ಕುಟುಂಬಸ್ಥರು ನಾವು ನಮ್ಮ ಮನೆ, ಆಸ್ತಿ ಎಲ್ಲವನ್ನೂ ಮಾರಿದ್ದೇವೆ. ನಮ್ಮ ಬಳಿ ಏನು ಇಲ್ಲ ದಯವಿಟ್ಟು ಬಾಡಿ ಕೊಡಿ ಎಂದು ಕಂಗಲಾಚಿ ಕಣ್ಣೀರಿಡುತ್ತಿದ್ದಾರೆ. ಹಣ ಪಾವತಿಸಲಾಗದೆ ದೇಹವೂ ಪಡೆಯಲಾಗದೆ ಆಸ್ಪತ್ರೆ ಮುಂಭಾಗವೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅಪ್ಪನ ಮೃತದೇಹ ಕೊಡ್ತಿಲ್ಲ ಅಂತ ಪುತ್ರನ ಅಳಲು
ಯಶವಂತಪುರದ ಎನ್ಯು ಆಸ್ಪತ್ರೆಲಿ ಕಿಡ್ನಿ ವೈಫಲ್ಯ ಹಿನ್ನೆಲೆಯಲ್ಲಿ ಅಡ್ಮಿಟ್ ಆಗಿದ್ದ ತಂದೆಯ ದೇಹ ಪಡೆಯಲು ಆಸ್ಪತ್ರೆಯವರು ಮೂರು ಲಕ್ಷ ಹಣ ಕೇಳುತ್ತಿದ್ದಾರೆ ಎಂದು ಮೃತ ವ್ಯಕ್ತಿಯ ಮಗ ಕಣ್ಣೀರಿಟ್ಟಿದ್ದಾರೆ.

ಕಿಡ್ನಿ ವೈಫಲ್ಯ ಅಂತ ಅಪ್ಪ ಆಸ್ಪತ್ರೆಗೆ ದಾಖಲಾದ್ರು ಆದ್ರೆ ನಿನ್ನೆ ರಾತ್ರಿ ಏಕಾಏಕಿ ಮೃತಪಟ್ಟಿದ್ದಾರೆ ಅಂತ ಆಸ್ಪತ್ರೆಯವರು ಹೇಳಿದ್ರು. ಈಗ 3 ಲಕ್ಷ ಹಣ ಕೊಟ್ರೆ ಮಾತ್ರ ಬಾಡಿ ಕೊಡ್ತಿವಿ ಅಂತ ಸತಾಯಿಸ್ತಿದ್ದಾರೆ ಅಂತ ಪುತ್ರ ಅಳಲು ತೋಡಿಕೊಂಡಿದ್ದಾರೆ. ಸದ್ಯ ಪುತ್ರ ಸಂಪತ್ ಅಷ್ಟು ಹಣ ಕೋಡೋಕೆ ಆಗಲ್ಲ ಬಾಡಿ ಕೊಡಿ ಅಂತ ಬೇಡಿಕೊಳ್ತಿದ್ದಾರೆ. ಆಸ್ಪತ್ರೆಯವರು ಮಾತ್ರ ಕೊವಿಡ್ನಿಂದ ಸತ್ತಿದ್ದಾರೆ ಎಂದು ಮೃತ ದೇಹ ಕೊಡಲು ಸತಾಯಿಸುತ್ತಿದ್ದಾರಂತೆ. ಅಗಲಿದ ತಂದೆಯ ಮೃತ ದೇಹ ಪಡೆಯಲು ಮಗ ಪರದಾಡುತ್ತಿದ್ದಾರೆ.

ಸಂತೋಷವಾಗಿದ್ದ ಸಂಸಾರಕ್ಕೆ ವಿಲನ್ ಆದ ಕೊರೊನಾ
ಇನ್ನು ಮತ್ತೊಂದೆಡೆ ಮಹಾಮಾರಿ ಕೊರೊನಾ 3 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದೆ. ನೆಮ್ಮದಿಯ ಸುಖ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. ಬಣ್ಣ ಬಣ್ಣದ ಕನಸುಗಳನ್ನ ಹೊತ್ತು ಮದುವೆಯಾಗಿದ್ದ
ಭುವನಶ್ರೀ (30) ಕೊರೊನಾಗೆ ಬಲಿಯಾಗಿದ್ದಾರೆ.

ಮೃತ ಸೋಂಕಿತ ಮಹಿಳೆ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು. ಪತಿ ಶಿವಕುಮಾರ್ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸೆಕ್ರೆಟರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಪತ್ನಿಗೆ ಸೋಂಕು ದೃಢವಾದ ಬಳಿಕ ಎಷ್ಟೇ ಪ್ರಯತ್ನ ಪಟ್ಟರೂ ಯಶವಂತಪುರದ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಕ್ಕಿಲ್ಲ. ಬಳಿಕ ಚೈತನ್ಯ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತೆ. ಆದ್ರೆ ಅಲ್ಲಿ ರೆಮ್ಡಿಸಿವಿರ್ ಇರೋದಿಲ್ಲ. ಕೊನೆಗೆ ಚಿಕಿತ್ಸೆಗೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾರೆ.

ಸರ್ಕಾರದ ಅವ್ಯವಸ್ಥೆ ವಿರುದ್ಧ ಪತಿ ಕಿಡಿಕಾರಿದ್ದು ಚಿತಾಗಾರಗಳಲ್ಲಿ ಉಚಿತ ಊಟ ವ್ಯವಸ್ಥೆ, ನೀರಿನ ಸೌಲಭ್ಯವನ್ನ ಸರ್ಕಾರ ಕಲ್ಪಿಸುತ್ತೆ. ಇದರ ಬದಲು ಗಂಭೀರ ಸ್ಥಿತಿಯಲ್ಲಿರುವ ಪ್ರಾಣ ಉಳಿಸಲು ಉಚಿತ ಬೆಡ್ ವ್ಯವಸ್ಥೆ ಮಾಡಿ. ಸಾವಿನಲ್ಲೂ ರಾಜಕೀಯ ಮಾಡ್ಬೇಡಿ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲೇ ಇದ್ದುಬಿಟ್ರೆ ಕೊರೊನಾದಿಂದ ಅಲ್ಲ, ಹಸಿವಿನಿಂದ ಸಾಯ್ತೇವೆ: ಮಂಡ್ಯ ಮಹಿಳೆ ಅಳಲು