
ಬೆಂಗಳೂರು, ಏಪ್ರಿಲ್ 18: ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ (Hubballi 5 Year Old Girl Murder) ಮಾಡಿದ್ದ ಆರೋಪಿ ರಿತೇಶ್ ಕುಮಾರ್ ಹುಬ್ಬಳ್ಳಿ ಪೊಲೀಸರ (Hubballi Police) ಗುಂಡಿಗೆ ಮೃತಪಟ್ಟಿದ್ದಾನೆ. ಈ ಪ್ರಕರಣ ನಡೆದ ಬೆನ್ನಲ್ಲೇ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ಅಲರ್ಟ್ ಆಗಿದೆ. ವಲಸಿಗ ಕಾರ್ಮಿಕರ ಲೆಕ್ಕ ಪರಿಶೀಲನೆಗೆ ಇಳಿದ ಇಲಾಖೆಗೆ ಅಚ್ಚರಿಯ ಮಾಹಿತಿ ತಿಳಿದಿದೆ. ರಾಜ್ಯದಲ್ಲಿ ಎಷ್ಟು ಜನ ವಲಸಿಗ ಕಾರ್ಮಿಕರಿದ್ದಾರೆ? ಅವರ ಹಿನ್ನೆಲೆ ಏನು? ಎಂಬಿತ್ಯಾದಿ ಮಾಹಿತಿಗಳನ್ನು ನೀಡುವಂತೆ ಗೃಹ ಇಲಾಖೆ ಆದೇಶಿಸಿತ್ತು. ಈ ವೇಳೆ ಲೆಕ್ಕಪರಿಶೀಲನೆ ಮಾಡಿದ ಅಧಿಕಾರಿಗಳಿಗೆ ಅಚ್ಚರಿಯ ವಿಚಾರ ತಿಳಿದಿದೆ.
ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರಿದ್ದಾರೆ. ಆದರೆ, ಇದುವರೆಗೆ ನೋಂದಣಿಯಾಗಿದ್ದು ಕೇವಲ 46 ಸಾವಿರ ಕಾರ್ಮಿಕರು ಮಾತ್ರ. ಈ ನಡುವೆ ರಾಜ್ಯದಲ್ಲಿ ವಲಸಿಗ ಕಾರ್ಮಿಕರಿಂದ ಕ್ರೈಂ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ವಲಸಿಗರ ಪತ್ತೆ ಕಾರ್ಯ ಪೊಲೀಸ್ ಇಲಾಖೆಗೆ ಕಷ್ಟಕರವಾಗಿದೆ. ಅಪರಾಧಿಗಳನ್ನು ಪತ್ತೆ ಹಚ್ಚುವುದು ತಲೆನೋವಾಗಿ ಪರಿಣಮಿಸಿದೆ.
ಹೀಗಾಗಿ, ವಲಸೆ ಕಾರ್ಮಿಕರ ಮೇಲೆ ನಿಗಾ ಇಟ್ಟಿರುವ ಇಲಾಖೆ, ಕಾರ್ಮಿಕರ ಹಿನ್ನೆಲೆ, ಆಧಾರ್ ಕಾರ್ಡ್ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಇದಕ್ಕಾಗಿ 43 ವ್ಯಾನ್ಗಳ ಕಾಲರ್ಯಚರಣೆಗೆ ಪ್ಲ್ಯಾನ್ ಮಾಡಿದೆ.
ವಲಸಿಗ ಕಾರ್ಮಿಕರು ಕೆಲಸಕ್ಕೆಂದು ರಾಜ್ಯಕ್ಕೆ ಆಗಮಿಸಿದರೇ, ಮೊದಲಿಗೆ ನೋಂದಣಿ ಆಗಬೇಕು. ಕಾರ್ಮಿಕರು ತೊರೆಯುವ ರಾಜ್ಯ, ಹೋಗುವ ರಾಜ್ಯ ಎರಡು ಕಡೆ ಕೂಡ ಕಡ್ಡಾಯವಾಗಿ ಹೆಸರು ನೋಂದಯಿಸಬೇಕು. ಇ ಪೋರ್ಟಲ್ ಆ್ಯಪ್ನಲ್ಲಿ ನೋಂದಣಿ ಮಾಡಿಸಬೇಕು. ಆದರೆ 2023 ಅಕ್ಟೋಬರ್ನಿಂದ 2025ರ ಏಪ್ರಿಲ್ ತನಕ ಕೇವಲ 46,616 ಜನ ಮಾತ್ರ ನೋಂದಾಯಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಮಿಕ ಮುಖಂಡ ಶೈಲೇಶ್ ಪೂಜಾರಿ ಮಾತನಾಡಿ, ಏನಾದರು ಅನಾಹುತ ನಡೆದರೆ ಮಾತ್ರ ಸರ್ಕಾರ ಕಾರ್ಮಿಕರ ಸಂಖ್ಯೆ ಮತ್ತು ಪರಿಶೀಲನೆ ಮಾಡಲು ಮುಂದಾಗುತ್ತದೆ. ನಂತರ ಸುಮ್ಮನಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಲಕಿಯನ್ನು ಕೊಲೆಗೈದಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನ, ಪೊಲೀಸ್ ಗುಂಡಿಗೆ ಬಲಿ
ಒಟ್ಟಿನಲ್ಲಿ ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಇದರಿಂದ ಎಚ್ಚೆತ್ತು ಕೊಂಡಿರುವ ಇಲಾಖೆ ಇದೀಗ ವಲಸೆ ಕಾರ್ಮಿಕರ ಸಂಖ್ಯೆ ಮತ್ತು ಪರಿಶೀಲನೆ ಮಾಡಿ ಗೃಹ ಇಲಾಖೆಗೆ ನೀಡಲು ಮುಂದಾಗಿದೆ.