ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ
ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಇಡೀ ಮಾನವ ಕುಲವೇ ನಾಚುವಂತಹ ಅಮಾನವೀಯ ಘಟನೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಬರ್ಬರ ಕೊಲೆ ಮಾಡಿದ್ದ. ಈ ಘಟನೆ ಇಡೀ ದೇಶಾದ್ಯಂತ ದೊಡ್ಡ ಸದ್ದು ಮಾಡಿದೆ. ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆ ದಲಿತ ಕುಟುಂಬ ಲಿಂಗದೀಕ್ಷೆ ಪಡೆದುಕೊಂಡು ಬಸವತತ್ವ ಪಾಲಿಸುತ್ತಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ, (ಡಿಸೆಂಬರ್ 27): ಇದೇ ಡಿಸೆಂಬರ್ 21ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ (Hubballi Honour Killing Case) ದೇಶವೇ ಬೆಚ್ಚಿಬೀಳಿಸಿದೆ. ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ (Dalit Family )ವಿವೇಕಾನಂದ (vivekananda) ಎನ್ನುವ ಯುವಕನನ್ನು ಮೇಲ್ಜಾತಿಯ ಯುವತಿ ಮಾನ್ಯ ಪ್ರೀತಿಸಿ ಮದ್ವೆಯಾಗಿದ್ದು, ಇದು ಮಾನ್ಯಳ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಮಾನ್ಯಳ ತಂದೆ, ಯುವಕನ ಮನೆಗೆ ನುಗಿದ್ದು, ಆರು ತಿಂಗಳು ಗರ್ಭಿಣಿ ಎನ್ನುವುದನ್ನು ನೋಡದೇ ಮಾನ್ಯಳನ್ನು ಕೊಚ್ಚಿ ಕೊಂದಿದ್ದಾನೆ. ಆದ್ರೆ, ಇದೀಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ಮೇಲ್ಜಾತಿ ಯುವತಿಯನ್ನು ಮದುವೆ ಆಗಿರುವುದಕ್ಕೆ ವಿವೇಕಾಂನದ ದಲಿತ ಸಮುದಾಯವಾಗಿದ್ದರೂ ಸಹ ಲಿಂಗದೀಕ್ಷೆ ಪಡೆದುಕೊಂಡಿದ್ದು, ಬಸವ ತತ್ವ ಪಾಲನೆ ಮಾಡುತ್ತಿತ್ತು ಎನ್ನುವುದನ್ನು ಸ್ವತಃ ಸಚಿವ ಸಂತೋಷ್ ಲಾಡ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬಸವತತ್ವ ಪಾಲಿಸುತ್ತಿರುವ ದಲಿತ ಕುಟುಂಬ
ಹೌದು.. ಇಂದು (ಡಿಸೆಂಬರ್ 27) ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ಕುಟುಂಬಸ್ಥರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಕುಟುಂಬಕ್ಕೆ ತಮ್ಮ ವ್ಯಯಕ್ತಿಕವಾಗಿ ಎರಡುವರೆ ಲಕ್ಷ ಪರಿಹಾರ ನೀಡಿದರು. ಬಳಿಕ ಘಟನೆ ನಡೆದ ಇನಾಂವೀರಾಪುರ ಗ್ರಾಮಕ್ಕೆ ತೆರಳಿ ವಿವೇಕಾನಂದ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಇನ್ನು ಇದೇ ವೇಳೆ ವಿವೇಕಾನಂದ ಕುಟುಂಬ ಬಸವತತ್ವ ಪಾಲಿಸುತ್ತಿದ್ದಿದ್ದನ್ನು ನೋಡಿ ಅಚ್ಚರಿಯಾಗಿದ್ದಾರೆ.
ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ದಲಿತ ಸಮುದಾಯದ ಕುಟುಂಬ, ತಮ್ಮ ಮನೆಯಲ್ಲಿ ಬಸವಣ್ಣ ಮತ್ತು ಅಂಬೇಡ್ಕರ ಭಾವಚಿತ್ರ ಇಟ್ಟುಕೊಂಡಿದ್ದಾರೆ. ಬಸವತತ್ವ ಪಾಲನೆ ಮಾಡಿದ್ದಾರೆ. ಇಂತಹ ಕುಟುಂಬದ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆಯೇ ಬರ್ಬರ ಕೊಲೆ ಮಾಡಿದ್ದು ದುರ್ದೈವದ ಸಂಗತಿಯಾಗಿದೆ. ಮನುಷ್ಯತ್ವ ಬಿಟ್ಟು ಯಾರು ಬದುಕಬಾರದು ಎಂದರು.
ಇನಾಂವೀರಾಪುರ ಗ್ರಾಮದ ಲಿಂಗಾಯತ ಸಮುದಾಯದ ಮಾನ್ಯಾ ಮತ್ತು ಅದೇ ಗ್ರಾಮದ ದಲಿತ ಸಮುದಾಯದ ವಿವೇಕಾನಂದ್ ಕಳೆದ ಜೂನ್ ನಲ್ಲಿ ಮದುವೆಯಾಗಿದ್ದರು. ಇದು ಮಾನ್ಯಾ ತಂದೆ ಪ್ರಕಾಶಗೌಡ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಡಿಸೆಂಬರ್ 21 ರಂದು ಆರು ತಿಂಗಳ ಗರ್ಭಿಣಿ ಮಗಳನ್ನು ಕೊಲೆ ಮಾಡಿದ್ದ.ಜೊತೆಗೆ ವಿವೇಕಾನಂದ ಕುಟುಂಬದ ಮೇಲೆ ಕೂಡಾ ಮಾರಣಾಂತಿಕ ಹಲ್ಲೆಯಾಗಿತ್ತು.
ಗ್ರಾಮದಲ್ಲಿ ಭಯದ ವಾತಾರವಣ
ಘಟನೆ ನಡೆದು ಒಂದು ವಾರವಾದರೂ ಸಹ ಇನಾಂವೀರಾಪುರ ಗ್ರಾಮದಲ್ಲಿ ಭಯದ ವಾತಾರವಣ ಕಡಿಮೆಯಾಗಿಲ್ಲ. ಇತ್ತ ವಿವೇಕಾನಂದ ಕುಟುಂಬ ಆಸ್ಪತ್ರೆಯಲ್ಲಿದ್ದರೆ, ಆರೋಪಿ ಪ್ರಕಾಶಗೌಡ್ ಮತ್ತು ಆತನ ಅನೇಕ ಸಂಬಂಧಿಗಳು ಜೈಲಿನಲ್ಲಿದ್ದಾರೆ. ಇನ್ನು ಅನೇಕರು ಗ್ರಾಮ ಬಿಟ್ಟು ಹೋಗಿದ್ದು, ಪ್ರಕಾಶಗೌಡ ಮನೆಗೆ ವಾರದಿಂದ ಬಿದ್ದಿರೋ ಬೀಗ ತಗೆದಿಲ್ಲ. ಇನ್ನೊಂದೆಡೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುರೆದಿದೆ. ಹೀಗಾಗಿ ಗ್ರಾಮದ ಜನರು ಯಾರು ಕೂಡ ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲದೇ ಹೊರಗಡೆ ಬರಲು ಸಹ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಇನಾಂವೀರಾಪುರ ಗ್ರಾಮದಲ್ಲಿ ಇನ್ನು ಆತಂಕದ ವಾತಾವರಣವಿದೆ. ಈ ನಿಟ್ಟಿನಲ್ಲಿ ಪೊಲೀಸರು ವಿವೇಕಾನಂದ ಕುಟುಂಬಕ್ಕೆ ಸೂಕ್ತ ಬಂದೂಬಸ್ತ್ ನೀಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



