ಹುಬ್ಬಳ್ಳಿಯಲ್ಲಿ ಬಾಲಕನ ಮೇಲೆ ಪಿಟ್​ಬುಲ್ ನಾಯಿ ದಾಳಿ

ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕನ ಮೇಲೆ ಹುಬ್ಬಳ್ಳಿ ಪಾಲಿಕೆ ಮಾಜಿ ಕಾರ್ಪೊರೇಟರ್ ಸಂಬಂಧಿಕರು ಸಾಕಿದ ಪಿಟ್​ಬುಲ್ ನಾಯಿ ದಾಳಿ ನಡೆಸಿದೆ. ಇತ್ತ ಮಹಾನಗರ ಪಾಲಿಕೆ ಮಾತ್ರ ಇದ್ಯಾವುದು ಗೊತ್ತಿಲ್ಲ ಅನ್ನೋ ತರಹ ವರ್ತಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಬಾಲಕನ ಮೇಲೆ ಪಿಟ್​ಬುಲ್ ನಾಯಿ ದಾಳಿ
ಹುಬ್ಬಳ್ಳಿಯಲ್ಲಿ ಬಾಲಕನ ಮೇಲೆ ಪಿಟ್​ಬುಲ್ ನಾಯಿ ದಾಳಿ
Edited By: Rakesh Nayak Manchi

Updated on: Nov 29, 2022 | 2:51 PM

ಹುಬ್ಬಳ್ಳಿ: ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ದೇಶದ ವಿವಿಧ ಕಡೆಗಳಲ್ಲಿ ಪಿಟ್​ಬುಲ್ ನಾಯಿ (Pit Bull Dog) ಸಾಕುವುದನ್ನು ನಿಷೇಧ ಮಾಡಲಾಗಿದೆ. ಆದರೆ ಹುಬ್ಬಳ್ಳಿ ಪಾಲಿಕೆ ಮಾಜಿ ಕಾರ್ಪೊರೇಟರ್ ಸಂಬಂಧಿಕರೊಬ್ಬರ ಮನೆಯಲ್ಲಿ ಇಂತಹ ನಾಯಿಯನ್ನು ಸಾಕಿದ್ದು, ಇದೀಗ ಆ ನಾಯಿ ಬಾಲಕನ ಮೇಲೆ ದಾಳಿ (Pit bull dog attack) ನಡೆಸಿ ಗಾಯಗೊಳಿಸಿದೆ. ನಗರದ ಬಂಕಾಪೂರ ಚೌಕ್​ನಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಪವನ್ ದೊಡ್ಡಮನಿಯನ್ನು ಕಿಮ್ಸ್ ಆಸ್ಪತ್ರೆಗೆ (KIMS Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಹಾನಗರ ಪಾಲಿಕೆ ಮಾತ್ರ ಇದ್ಯಾವುದು ಗೊತ್ತಿಲ್ಲ ಅನ್ನೋ ತರಹ ವರ್ತಿಸುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ನಗರದ ಬಂಕಾಪುರ ಚೌಕ್ ಬಳಿ ತಾಂಡಾ ನಿವಾಸಿಯಾಗಿರುವ ಪವನ್ ಬಂಕಾಪುರ ಚೌಕ್ ಬಳಿ ಪ್ರತಿನಿತ್ಯದಂತೆ ಟ್ಯೂಷನ್​ಗೆ ಹೋಗಿ ಬರುತ್ತಿದ್ದಾಗ ಮಾಜಿ ಕಾರ್ಪೊರೇಟರ್ ಸಂಬಂಧಿಯೊಬ್ಬರು ಸಾಕಿದ ಪೀಟ್ ಬುಲ್ ನಾಯಿಯೊಂದು ಬಾಲಕನ ಮೇಲೆ ಏಕಾಏಕಿ ಏರಗಿ ಮಾರಣಾಂತಿಕ ದಾಳಿ ಮಾಡಿದೆ. ನಾಯಿ ಬಾಲಕನ ತಲೆ, ಕೈ ಹಾಗೂ ಕಾಲಿಗೆ ಗಂಭೀರವಾಗಿ ಕಡಿದಿದ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಳು ಹೊಲಿಗೆ ಹಾಕಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Hassan: ಜನರಲ್ಲಿ ಹೆಚ್ಚಾಗ್ತಿದೆ ಶ್ವಾನ ಪ್ರೀತಿ, ಅದಕ್ಕೆ ಹಾಸನದಲ್ಲಿ ನಡೆದ ಈ ಡಾಗ್ ಷೋ ಸಾಕ್ಷಿ! ಫೋಟೊ ಗ್ಯಾಲರಿ

ಇನ್ನೂ ಘಟನೆ ನಡೆಯುತ್ತಿದ್ದಂತೆ ನಾಯಿ ಮಾಲೀಕರು ಮನೆ ಬಿಟ್ಟು ಹೋಗಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಗುರುಸಿದ್ದಪ್ಪ ಚನ್ನೋಜಿ ಅವರ ಸಂಭಂದಿಕರು ಪೀಟಬುಲ್ ನಾಯಿ ಸಾಕಿದ್ದರು. ಯಾವಾಗ (ನವೆಂಬರ್ 27) ನಾಯಿ ಬಾಲಕನ ಮೇಲೆ ದಾಳಿ ಮಾಡಿತೋ ಅಂದು ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾರೆ. ಇತ್ತ ನಾಯಿ ದಾಳಿಗೆ ಒಳಗಾದ ಪವನ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದರೂ ಸೌಜನ್ಯಕ್ಕೂ ಬಂದು ಮಾತಾಡಿಸಿಲ್ಲ. ಘಟನೆಯಾದ ರಾತ್ರಿಯೇ ಮನೆಗೆ ಬೀಗ ಹಾಕಿ ನಾಯಿ ಸಮೇತ ಕಾಲ್ಕಿತ್ತಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ದಾಳಿ ಮಾಡಿದ ಪೀಟ್​ಬುಲ್ ನಾಯಿಯನ್ನು ಯಾವಾಗಲೂ ಯಜಮಾನರು ಹೊರಗಡೆ ಬಿಟ್ಟಿರುತಾರಂತೆ. ಈ ಬಗ್ಗೆ ನಾಯಿಯ ಮಾಲಕರಿಗೆ ಸಾಕಷ್ಟು ಬಾರಿ ಹೇಳಿದರು ಕೂಡಾ ಮಾಲೀಕರು ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿ ತೋರಿದ್ದರಂತೆ. ನಿನ್ನೆ ಕೇವಲ ಪವನ್ ಮಾತ್ರ ಅಲ್ಲ ಐದಾರು ಜನರ ಮೇಲೆ ದಾಳಿ ಮಾಡಲು ಪೀಟಬುಲ್ ಮುಂದಾಗಿತ್ತಂತೆ. ಕೆಲವರು ನಾಯಿ ದಾಳಿಯಿಂದ ಬಚಾವಾಗಿದ್ದಾರೆ.

“ಪಿಟ್​ಬುಲ್ ನಾಯಿ ಹಲವರ ಮೇಲೆ ದಾಳಿ ನಡೆಸಿತ್ತು. ನಾನು ಸುರಕ್ಷಿತ ಸ್ಥಳಕ್ಕೆ ಹಾರಿದ್ದರಿಂದ ನಾಯಿಯ ಕಡಿತದಿಂದ ಪಾರಾಗಿದ್ದೇನೆ. ಇದೇ ಸಮಯದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿಗೆ ಮುಂದಾದಾಗ ಅವರು ನಾಯಿಗೆ ಹೊಡೆದಿದ್ದು, ಬಳಿಕ ನಾಯಿ ಓಡಿದೆ.” – ರಾಕೇಶ್, ನಾಯಿ ದಾಳಿಯಿಂದ ಪಾರಾದವರು

ಈ ಪೀಟ್​ಬುಲ್ ತಳಿಯ ನಾಯಿ ಅತಿ ಸಿಟ್ಟಿನಲ್ಲಿರುವ ತಳಿಯಾಗಿರುವ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಈ ತಳಿಯ ನಾಯಿಯನ್ನು ಸಾಕುವುದು ನಿಷೇಧಿಸಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ತಳಿಯ ನಾಯಿಗಳಿಗೆ ಯಾವುದೇ ರೀತಿಯಾದ ನಿಷೇಧ ಇಲ್ಲದ ಹಿನ್ನೆಲೆ ಈ ನಾಯಿಯನ್ನು ಕೆಲವರು ಸಾಕುತ್ತಿದ್ದು, ಕೆಲವು ಬಾರಿ ಮಾಲಕರ ನಿರ್ಲಕ್ಷ್ಯದಿಂದ ಈ ರೀತಿಯಾದ ಅವಘಡಗಳು ನಡೆಯುತ್ತಲಿವೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಾಯಿ ಹಾವಳಿ ಹೆಚ್ಚಾಗಿದ್ದು ಇನ್ನಾದರೂ ಮಹಾನಗರ ಪಾಲಿಕೆಯವರು ಸೂಕ್ತ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us