ಧಾರವಾಡದಲ್ಲಿ‌ ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆ: ಕೋರ್ಟ್ ಎಂಬ ಕಲ್ಪನೆ ಕಂದಮ್ಮಗಳಲ್ಲಿ ಬಾರದಂತೆ ವ್ಯವಸ್ಥೆ

ಮಕ್ಕಳಿಗೆ ನ್ಯಾಯಾಲಯ ಎನ್ನುವ ಆತಂಕ ಬರಬಾರದು ಎನ್ನುವುದು ಮತ್ತು ಮಕ್ಕಳಿಗೆ ಪದೇ ಪದೇ ಆರೋಪಿಗಳು ಕಾಣಬಾರದು ಎನ್ನುವುದೇ ಈ ನ್ಯಾಯಾಲಯದ ಮುಖ್ಯ ಉದ್ದೇಶ. ಇಲ್ಲಿಗೆ ಬಂದರೆ ಮಕ್ಕಳಿಗೆ ತಾವು ಮನೆಯಲ್ಲಿಯೇ ಇದ್ದೇವೆ ಎನ್ನುವ ಭಾವನೆ ಬರಬೇಕು ಎನ್ನುವ ಕಾರಣಕ್ಕೆ ಪರಿಸರ ಸ್ನೇಹಿ ನ್ಯಾಯಾಯ ಆರಂಭ ಮಾಡಲಾಗಿದೆ.

ಧಾರವಾಡದಲ್ಲಿ‌ ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆ: ಕೋರ್ಟ್ ಎಂಬ ಕಲ್ಪನೆ ಕಂದಮ್ಮಗಳಲ್ಲಿ ಬಾರದಂತೆ ವ್ಯವಸ್ಥೆ
ಮಕ್ಕಳ ಸ್ನೇಹಿ ನ್ಯಾಯಾಲಯಕ್ಕೆ ಉದ್ಘಾಟನೆ
Updated By: ಸಾಧು ಶ್ರೀನಾಥ್​

Updated on: Feb 13, 2021 | 6:03 PM

ಧಾರವಾಡ: ರಾಜ್ಯದಲ್ಲಿ ಪೋಕ್ಸೊ ಕಾಯ್ದೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಧಾರವಾಡದಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಆರಂಭಿಸಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ ಕುಮಾರ ಅವರು ಈ ನ್ಯಾಯಾಲಯವನ್ನು ಉದ್ಘಾಟಿಸಿದ್ದು, ಸರ್ವೋಚ್ಚ ನ್ಯಾಯಾಲಯ ನಿರ್ದೇಶನದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಲ್ಲಿ ಧಾರವಾಡದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಈ ನ್ಯಾಯಾಲಯವನ್ನು ಆರಂಭಿಸಲಾಯಿತು.

ಮೊದಲ ಹಂತದಲ್ಲಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ:
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಡಿ ಈ ನ್ಯಾಯಾಲಯವನ್ನು ಆರಂಭಿಸಲಾಗಿದೆ. ಮೊದಲ ಹಂತವಾಗಿ ರಾಜ್ಯದ 10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ.

ಅದರಂತೆ ಧಾರವಾಡ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಂಡಿರುವ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಸಂತ್ರಸ್ತ ಮಗುವಿಗೆ ಪ್ರತ್ಯೇಕ ಕೊಠಡಿ, ಆರೋಪಿತನಿಗೆ ಬೇರೆ ಕೊಠಡಿ, ಮಕ್ಕಳ ಶೌಚಾಲಯ, ಅಡುಗೆ ಮನೆ, ಅಗತ್ಯವಿದ್ದಲ್ಲಿ ಮಗುವಿನ ಪಾಲಕರಿಗೆ ರಾತ್ರಿ ವೇಳೆ ಉಳಿಯಲು ಕೊಠಡಿ, ಕಟ್ಟಡ ಆವರಣದಲ್ಲಿ ಮಕ್ಕಳಿಗಾಗಿ ಆಟದ ಮೈದಾನ, ಮಕ್ಕಳ ಪಾಲಕರಿಗೆ ಪ್ರತ್ಯೇಕ ಕೊಠಡಿ, ವಿಡಿಯೋ ಕಾನ್ಪರೆನ್ಸ್ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗಾಗಿ ಗ್ರಂಥಾಲಯ, ವರ್ಣಮಾಲೆ ಅಕ್ಷರಗಳಿರುವ ಚಾಪೆ (ಮ್ಯಾಟ್)ಗಳ ವ್ಯವಸ್ಥೆ, ಫ್ರಿಡ್ಜ್, ನ್ಯಾಯಾಧೀಶರ ಕೋರ್ಟ್ ಹಾಲ್ ಹಾಗೂ ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿ, ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮಕ್ಕಳ ಆಟಿಕೆಗಳನ್ನು ನ್ಯಾಯಾಲದಲ್ಲಿ ಇರಿಸಲಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಖುದ್ದು ಪರಿಶೀಲನೆ:
ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆಯ ನಂತರ ಪ್ರತಿಯೊಂದು ಸೌಲಭ್ಯವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ, 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಮತ್ತು ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಶ್ರೀಮತಿ ಎಂ. ಪಂಚಾಕ್ಷರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಸಿ.ಜೆ.ಎಮ್. ನ್ಯಾಯಾಧೀಶ ಸಂಜಯ ಗುಡಗುಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಗೊಡ್ಸೆ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವಿ.ಡಿ.ಕಾಮರಡ್ಡಿ, ಆನಂದ ಮಗದುಮ್ ಸೇರಿದಂತೆ ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಿವಿಧ ತಾಲೂಕುಗಳ ನ್ಯಾಯಾಧೀಶರು, ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ  ಉಪಸ್ಥಿತರಿದ್ದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಉದ್ಘಾಟಿಸಿದರು

ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಮತ್ತೇನೇನಿದೆ?
ಈ ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಕರಣಗಳು ಪೋಕ್ಸೊಗೆ ಸಂಬಂಧಿಸಿದಂತೆಯೇ ಇರುತ್ತವೆ. ಮಕ್ಕಳಿಗೆ ನ್ಯಾಯಾಲಯ ಎನ್ನುವ ಆತಂಕ ಬರಬಾರದು ಎನ್ನುವುದು ಮತ್ತು ಮಕ್ಕಳಿಗೆ ಪದೇ ಪದೇ ಆರೋಪಿಗಳು ಕಾಣಬಾರದು ಎನ್ನುವುದೇ ಈ ನ್ಯಾಯಾಲಯದ ಮುಖ್ಯ ಉದ್ದೇಶ. ಇಲ್ಲಿಗೆ ಬಂದರೆ ಮಕ್ಕಳಿಗೆ ತಾವು ಮನೆಯಲ್ಲಿಯೇ ಇದ್ದೇವೆ ಎನ್ನುವ ಭಾವನೆ ಬರಬೇಕು. ಯಾವುದೇ ಕಾರಣಕ್ಕೂ ಮಕ್ಕಳಿಗೆ ನ್ಯಾಯಾಧೀಶರಾಗಲೀ, ಆರೋಪಿಗಳಾಗಲೀ ಕಾಣಬಾರದು.

ಮಕ್ಕಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಕೊಠಡಿ

ಈ ಕಾರಣಕ್ಕಾಗಿಯೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ನ್ಯಾಯಾಧೀಶರಿಗೆ ಮತ್ತು ಆರೋಪಿಗಳಿಗೆ ಕಾಣಿಸುತ್ತಾರೆ. ಆದರೆ ಇವರಾರೂ ಮಕ್ಕಳಿಗೆ ಕಾಣಿಸಲಾರರು. ಇಂತಹ ವ್ಯವಸ್ಥೆಯನ್ನು ಈ ನ್ಯಾಯಾಲಯದಲ್ಲಿ ಮಾಡಲಾಗಿದೆ. ಇನ್ನು ಗೋಡೆಗಳಿಗೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಆಟಕ್ಕೆ ಬಗೆ ಬಗೆಯ ಆಟಿಕೆ ಸಾಮಾನುಗಳನ್ನು ಇಡಲಾಗಿದೆ. ಮಕ್ಕಳು ಹಾಗೂ ಪೋಷಕರು ಮಲಗಲು ಕೂಡ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೋರ್ಟ್​ಗೆ ಬಂದಿದ್ದೇವೆ ಎನ್ನುವ ಭಾವನೆ ಬಾರದೇ ಮನೆಯಲ್ಲಿಯೇ ಇರುವ ಅನುಭವ ಇರಬೇಕು ಎನ್ನುವುದೇ ಈ ನ್ಯಾಯಾಲಯದ ಉದ್ದೇಶ.

ಪೂಜಾಕಾರ್ಯ ಪೂರ್ಣಗೊಳಿಸಿದ ನ್ಯಾಯಾಧೀಶರು

ಈ ನ್ಯಾಯಾಲಯವನ್ನು ಉದ್ಘಾಟಿಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ ಅವರು, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳ ಸ್ನೇಹಿ ನ್ಯಾಯಾಲಯ ಆರಂಭಿಸಲಾಗಿದೆ. ಮಕ್ಕಳಿಗೆ ತಾವು ಕೋರ್ಟ್​ಗೆ ಬಂದಿರುವ ಅನುಭವವಾಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಇದನ್ನು ಆರಂಭಿಸಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ಮಕ್ಕಳೇ ಸಂತ್ರಸ್ತರಾಗಿರುತ್ತಾರೆ. ಹೀಗಾಗಿ ಪದೇ ಪದೇ ಆರೋಪಿಗಳು ಈ‌ ಮಕ್ಕಳಿಗೆ ಎದುರಾಗಬಾರದು. ಮಕ್ಕಳಿಗೆ ಅಂತಾನೇ ಪ್ರತ್ಯೇಕ ಕೊಠಡಿ ಹಾಗೂ ಪ್ರತ್ಯೇಕ ಬಾಗಿಲು ಇರುತ್ತದೆ. ಆರೋಪಿಗಳಿಗಾಗಿ ಪತ್ಯೇಕ ಕೊಠಡಿ ಮತ್ತು ಪ್ರವೇಶದ ವ್ಯವಸ್ಥೆ ಇರುತ್ತದೆ. ಪೋಕ್ಸೊ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಈ ನ್ಯಾಯಾಲಯ ಮಹತ್ವದ ಪಾತ್ರವಹಿಸುತ್ತದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ ಹೇಳಿದರು.

ಇದನ್ನೂ ಓದಿ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಸೇಲ್ ಮಾಡಿದ ವೈದ್ಯ ದಂಪತಿ ವಿರುದ್ಧ ಪೋಕ್ಸೋ ಕೇಸ್