ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ: 3ನೇ ಹಂತದ ಮೆಟ್ರೋ ಮಾರ್ಗ ಕೈಗೆತ್ತಿಕೊಳ್ಳಲು‌ ಸಂಪುಟ ಒಪ್ಪಿಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2024 | 6:37 PM

ಸಂಪುಟ ಸಭೆ ಅಂತ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ‌ ಸಚಿವ ಕೃಷ್ಣಬೈರೇಗೌಡ, ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಬೇಕು ಅಂತ ತೀರ್ಮಾನ ಆಗಿದೆ. ಬೆಂಗಳೂರಿನಲ್ಲಿ ಅವಶ್ಯಕತೆಗಳು ಬೆಳೆಯುತ್ತಿದೆ. ಸಂಚಾರದ್ದೇ ದೊಡ್ಡ ಸಮಸ್ಯೆ ಆಗಿದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸುವುದಕ್ಕೆ ಮೆಟ್ರೋ ಒಂದೇ ಪರ್ಯಾಯ ಮಾರ್ಗ ಎಂದಿದ್ದಾರೆ.

ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ: 3ನೇ ಹಂತದ ಮೆಟ್ರೋ ಮಾರ್ಗ ಕೈಗೆತ್ತಿಕೊಳ್ಳಲು‌ ಸಂಪುಟ ಒಪ್ಪಿಗೆ
ಸಚಿವ ಕೃಷ್ಣಭೈರೇಗೌಡ
Follow us on

ಬೆಂಗಳೂರು, ಮಾರ್ಚ್​​​ 14: ವಿಧಾನಸೌಧದಲ್ಲಿ ಸತತ 3 ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಅಂತ್ಯವಾಗಿದೆ. ಬಳಿಕ ಕಂದಾಯ‌ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಬೇಕು ಅಂತ ತೀರ್ಮಾನ ಆಗಿದೆ. ಕೆಂಗಲ್ ಹನುಮಂತಯ್ಯ ಪ್ರತಿಯ ರಸ್ತೆಯ ಪಕ್ಕದಲ್ಲಿ‌ ಸ್ಥಾಪನೆ ಆಗಲಿದೆ. ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.

ಕಲ್ಲು, ಲೋಹದ ಪ್ರತಿಮೆಗೆ ಎಲ್ಲದಕ್ಕೂ ಹಣ ಬೇಕಾಗುತ್ತದೆ. ಏರ್ಪೋರ್ಟ್​​ನಲ್ಲಿ ಕೆಂಪೇಗೌಡ ಪ್ರತಿಮೆಗೆ 40-60 ಕೋಟಿ ರೂ. ಆಗಿತ್ತು. ಬೆಂಗಳೂರಿನಲ್ಲಿ ಅವಶ್ಯಕತೆಗಳು ಬೆಳೆಯುತ್ತಿದೆ. ಸಂಚಾರದ್ದೇ ದೊಡ್ಡ ಸಮಸ್ಯೆ ಆಗಿದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸುವುದಕ್ಕೆ ಮೆಟ್ರೋ ಒಂದೇ ಪರ್ಯಾಯ ಮಾರ್ಗ. ಭವಿಷ್ಯದ ಅವಶ್ಯಕತೆ ಗಮನದಲ್ಲಿ ಇಟ್ಟುಕೊಂಡು‌ ಫೇಸ್ 3 ಒಪ್ಪಿಗೆ ನೀಡಿದೆ. ಎರಡು ಮಾರ್ಗಗಳಿಗೆ ಒಪ್ಪಿಗೆ ನೀಡಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಎಲ್ಲೆಲ್ಲಿ ಯಾರಿಂದ ಬಂಡಾಯ? ಇಲ್ಲಿದೆ ವಿವರ

ಜೆಪಿ ನಗರ, ಸಿಲ್ಕ್ ಬೋರ್ಡ್​​ನಿಂದ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್​​ನಿಂದ ಹೆಬ್ಬಾಳ ಮೇಲ್ಸೇತುವವರೆಗೆ ಬಂದಿದೆ. ಸುಮಾರು 35.5 ಕಿ.ಲೋ ಮೀಟರ್​ವರೆಗೆ ನಡೆಯಲಿದೆ. ಮೂರನೇ ಹಂತದ 15,611 ಕೋಟಿ‌ ರೂ. ವೆಚ್ಚದಲ್ಲಿ‌ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಸಂಪುಟ ಸಭೆಯ ಪ್ರಮುಖ ಅಂಶಗಳು

  1. ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಓಪನ್​​ಗೆ ಒಪ್ಪಿಗೆ. ಕಡಬ ವೆಟರ್ನರಿ‌ ಕಾಲೇಜಿನ ಅಭಿವೃದ್ದಿಗೆ 163 ಕೋಟಿ ರೂ. ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹೊಸ ಹಾಸ್ಟೆಲ್​ ಸ್ಥಾಪನೆಗೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ.
  2. ರೈತರ ಉತ್ಪಾದನೆ, ಲಾಭಾಂಶ ಜಾಸ್ತಿ ಆಗಬೇಕು. ಬೆಳೆ ಸಂರಕ್ಷಣೆ, 67 ಕೋಟಿ‌ ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ‌ ಇನ್ನೊವೇಷನ್ ಸೆಂಟರ್ ಮಾಡಲು‌ ತೀರ್ಮಾನ ಆಗಲಿದೆ. ಬೆಂಗಳೂರಿನಲ್ಲೇ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೊಡುತ್ತೇವೆ ಎಂದಿದ್ದಾರೆ.
  3. ಕೆಂಪೇಗೌಡ ಲೇಔಟ್​ಗಳ ಸೈಟ್​​ಗಳನ್ನ‌ ಲೀಸ್ ಆಧಾರವಾಗಿ ಕೊಟ್ಟಿದ್ದಾರೆ. ಕೆಲವರು ಕಂತುಗಳನ್ನ ಕಟ್ಟೋಕೆ ಆಗಿಲ್ಲ. ಬಿಡಿಎಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಅಲಾಟ್ಮೆಂಟ್ ಆದವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಮನವಿ ಮಾಡಿದ್ದಾರೆ. ಬಾಕಿ‌ ಹಣ ಪಾವತಿಸಿದವರಿಗೆ ಕೊಡಲಿದ್ದೇವೆ. ಲೀಜ್ ಅಂಡ್ ಸೇಲ್‌ ಮಾಡಿಕೊಡಲು‌ ಸಂಪುಟ ಒಪ್ಪಿಗೆ ನೀಡಿದ್ದು, ಮೂರು‌ ತಿಂಗಳ ಕಾಲಾವಕಾಶ ಕೊಡಲಾಗುತ್ತೆ. 12% ಬಡ್ಡಿ‌ ಪಾವತಿಸಬೇಕಾಗುತ್ತೆ ಎಂದರು.
  4. PSI ನೇಮಕಾತಿ ಹಗರಣ ಸಂಬಂಧ ಬಿ.ವೀರಪ್ಪ ಸಮಿತಿ ರಚಿಸಿದ್ವಿ. ಈ ಸಂಬಂಧ ಬಿ.ವೀರಪ್ಪ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಸರ್ಕಾರಿ, ಖಾಸಗಿ ವ್ಯಕ್ತಿಗಳು ಸೇರಿ 113 ಜನರು ಭಾಗಿ ಎಂದು ವರದಿ ನೀಡಲಾಗಿದೆ. ಪ್ರಕರಣ ಸಂಬಂಧ ಎಸ್​ಟಿಐ ರಚಿಸಬೇಕೆಂದು ವೀರಪ್ಪ ಹೇಳಿದ್ದಾರೆ. ಹೆಚ್ಚುವರಿ ತನಿಖೆಗಾಗಿ ಎಸ್​ಐಟಿ‌ ರಚಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
  5. ಜಾತಿ ಗಣತಿ ವರದಿ ಮತ್ತು ಸಿಎಎ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ.
  6. ಕೆ.ಆರ್.ಪುರದ ಎನ್‌ಜಿಎಫ್​ನಲ್ಲಿ‌ಇರುವ ಜಾಗದಲ್ಲಿ ನಾನಾ ಪ್ರಪೋಸಲ್​ಗಳು ಬಂದಿವೆ. 65 ಎಕರೆ ಜಾಗ ಇದೆ. ಆ ಭಾಗದಲ್ಲಿ ದೊಡ್ಡ ಪಾರ್ಕ್ ಇಲ್ಲ. ಟ್ರೀ ಪಾರ್ಕ್ ಮಾಡ್ಬೇಕು, ವಾಕಿಂಗ್, ಸೈಕಲ್ ಟ್ರಾಕ್, ಆಟದ ಮೈದಾನ ಇರಲಿದೆ. ಕೈಗಾರಿಕಾ ಇಲಾಖೆ ವತಿಯಿಂದ ಕೆಲಸ ಆಗಲಿದೆ. ಟ್ರೀ ಪಾರ್ಕ್​​ಗೆ ಒಟ್ಟು 11 ಕೋಟಿ ರೂ. ವೆಚ್ಚ ಆಗಬಹುದೆಂದು‌ ಅಂದಾಜಿಸಲಾಗಿದೆ. 1500 ಕೋಟಿ ರೂ ಬೆಲೆ ಬಾಳುವ ಜಾಗ ಸಾರ್ವಜನಿಕರಿಗೆ ಮೀಸಲಿಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:37 pm, Thu, 14 March 24