
ಬೆಂಗಳೂರು, ಮಾರ್ಚ್ 5: ಇಸ್ರೇಲ್-ಇರಾನ್ ಸಂಘರ್ಷದಿಂದ (Israel-Iran Conflict) ಉಂಟಾಗಿರುವ ಗಲ್ಫ್ ಯುದ್ಧದ ಭೀತಿಯು ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ. ಇದರ ಪರಿಣಾಮ ಭಾರತದ, ಅದರಲ್ಲೂ ಕರ್ನಾಟಕದ ಜನಸಾಮಾನ್ಯರ ಮೇಲೆ ನೇರವಾಗಿ ಬೀರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಿಶೇಷವಾಗಿ ಅಡುಗೆ ಎಣ್ಣೆ ಮತ್ತು ಮೊಟ್ಟೆ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗಿದೆ. ಬೆಂಗಳೂರಿನಲ್ಲಿ (Bangalore) ಅಡುಗೆ ಎಣ್ಣೆಯ ದರ (Cooking Oil Prices) ಲೀಟರ್ಗೆ 5 ರೂಪಾಯಿ ಏರಿಕೆಯಾಗಿದೆ. ತರಗುಪೇಟೆಯ ಅಡುಗೆ ಎಣ್ಣೆ ವರ್ತಕ ಸತೀಶ್ ಪ್ರಕಾರ, ಕಳೆದ ಮೂರ್ನಾಲ್ಕು ದಿನಗಳಿಂದ ಬೇಡಿಕೆಗೆ ತಕ್ಕಂತೆ ಎಣ್ಣೆ ಸರಬರಾಜು ಆಗುತ್ತಿಲ್ಲ.
ಮುಂದಿನ 10 ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಎಣ್ಣೆ ಲಭ್ಯವಾಗುವುದು ಕಷ್ಟ ಎಂದು ಕಂಪನಿಗಳು ಕೂಡ ಹೇಳಿವೆ. ಜಾಗತಿಕ ಯುದ್ಧಗಳಿಂದಾಗಿ ಪೂರೈಕೆ ಸರಪಳಿಗೆ ಅಡ್ಡಿಯಾಗಿದ್ದು, ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಕೆಂಪು ಸಮುದ್ರದಲ್ಲಿನ ದಾಳಿಗಳಿಂದಾಗಿ, ಹಡಗುಗಳು ಆಫ್ರಿಕಾ ಮೂಲಕ 45 ದಿನಗಳ ಹೆಚ್ಚುವರಿ ಪ್ರಯಾಣವನ್ನು ಕೈಗೊಳ್ಳಬೇಕಾಗಿದೆ. ಈ ವಿಳಂಬದಿಂದಾಗಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್ಗೆ 200 ರಿಂದ 250 ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಿನ ಪರಿಸ್ಥಿತಿ ಮುಂದುವರೆದರೆ, ದಾಸ್ತಾನು ಕೊರತೆಯಿಂದ ಜನಸಾಮಾನ್ಯರು ಹೆಚ್ಚಿನ ಬೆಲೆ ತೆರಬೇಕಾಗಲಿದೆ.
ಯುದ್ಧದ ಪರಿಣಾಮ ಮೊಟ್ಟೆ ಉದ್ಯಮದ ಮೇಲೂ ಬೀರಿದೆ. ಭಾರತದಿಂದ ಮಧ್ಯಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ಗೆ ಪ್ರತಿತಿಂಗಳು ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಯುದ್ಧದ ಭೀತಿಯಿಂದ ಈ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಇರಾನ್ನಿಂದ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಘರ್ಷಗಳಿಂದಾಗಿ ಸಾಗಣೆ ದೊಡ್ಡ ಸವಾಲಾಗಿದೆ.
ರಫ್ತು ನಿಲುಗಡೆಯಿಂದಾಗಿ ಉತ್ಪಾದನೆಯಾದ ಮೊಟ್ಟೆ ಇಲ್ಲೇ ಉಳಿದುಕೊಂಡಿದೆ. ಇದು ಉತ್ಪಾದಕರಿಗೆ ಭಾರಿ ನಷ್ಟವನ್ನುಂಟು ಮಾಡಿದೆ. ಬೇಸಿಗೆಯಲ್ಲಿ ಮೊಟ್ಟೆಗಳ ಬಳಕೆ ಕಡಿಮೆಯಾಗುವುದರಿಂದ ಈಗಾಗಲೇ ದಾಸ್ತಾನು ಹೆಚ್ಚಾಗಿರುತ್ತದೆ. ಯುದ್ಧದ ಪರಿಣಾಮದಿಂದ ರಫ್ತು ಕೂಡ ನಿಂತುಹೋಗಿರುವುದು ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಮುಂದಿನ ದಿನಗಳಲ್ಲಿ ಮೊಟ್ಟೆಯ ಬೆಲೆ ಕುಸಿಯುವ ಸಾಧ್ಯತೆಯಿದೆ. ಯುದ್ಧ ಮುಂದುವರೆದರೆ, ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಇನ್ನಷ್ಟು ನಷ್ಟ ಉಂಟಾಗುವ ಭೀತಿಯಿದೆ.
ಇದನ್ನೂ ಓದಿ: ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ಗೆ ಎದುರಾಯ್ತು ಸಂಕಷ್ಟ
ಒಟ್ಟಾರೆ, ಜಾಗತಿಕ ಸಂಘರ್ಷಗಳು ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಆರ್ಥಿಕತೆ ಮತ್ತು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು