AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಣಗಾಪುರದ ದತ್ತನ ದರ್ಶನಕ್ಕೆ ಬಂದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ

ಆತ ಅಪಾರ ದೈವ ಭಕ್ತ, ಒಂದು ಸಾರಿ ದೇವಸ್ಥಾನಗಳಿಗೆ ಎಂದು ಹೊರಟರೆ ಒಂದೊಂದು ವಾರಗಳ ಕಾಲ ನಾನಾ ದೇವಸ್ಥಾನಗಳಿಗೆ ಓಡಾಡಿ ದೇವರ ದರ್ಶನ ಪಡೆಯುತ್ತಿದ್ದ. ಅದರಂತೆ ಮೊನ್ನೆ(ಜೂ.26) ಆತ ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತನ ದೇವಸ್ಥಾನಕ್ಕೆ ಆಗಮಿಸಿ ದತ್ತನ ದರ್ಶನ ಪಡೆದಿದ್ದ. ಬಳಿಕ ಸಂಗಮದಲ್ಲಿ ವಾಸವಾಗಿದ್ದ ಆತ ಬೆಳಗಾಗುವಷ್ಟರಲ್ಲೆ ಸಂಗಮದ ಪಕ್ಕದಲ್ಲಿರುವ ಜಮೀನಿನಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ.

ಗಾಣಗಾಪುರದ ದತ್ತನ ದರ್ಶನಕ್ಕೆ ಬಂದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ
ಮೃತ ಮಹೇಶ್​
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2024 | 7:32 PM

ಕಲಬುರಗಿ, ಜೂ.28: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲುಕಿನ ಗಾಣಗಾಪುರ(Ganagapura)ದಲ್ಲಿ ನಡೆದಿದೆ. ಅಂದಹಾಗೆ ಇಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾಗಿರುವ ಯುವಕನ ಹೆಸರು ಮಹೇಶ್ ಕೋಲತೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಿವಾಸಿಯಾದ ಇತ, ವೃತ್ತಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದವ, ಮಹಾರಾಷ್ಟ್ರದ ಹಲವೆಡೆ ಅಡ್ಡಾಡಿದ್ದ. ಬಳಿಕ ಕಲಬುರಗಿ ಜಿಲ್ಲೆಯ ಅಫಜಲಪುರಕ್ಕೆ ಬಂದು, ಇಲ್ಲಿನ ಪ್ರಸಿದ್ದ ಗಾಣಗಾಪುರದ ದತ್ತನ ದರ್ಶನ ಪಡೆದುಕೊಂಡು ಕುಟುಂಬಸ್ಥರಿಗೆ ಕರೆ ಮಾಡಿ ತಾನು ಗಾಣಗಾಪುರದಲ್ಲಿ ಇರೋದಾಗಿ ಹೇಳಿದ್ದ.

ಗಾಣಗಾಪುರದ ಸಂಗಮದಲ್ಲಿದ್ದ ಮಹೇಶ್​ನನ್ನ ಅದ್ಯಾರೋ ದುಷ್ಕರ್ಮಿಗಳು ಸಂಗಮ ಪಕ್ಕದಲ್ಲೆ ಇರುವ ಜಮೀನಿನಲ್ಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕ ಜಮೀನಿಗೆ ಬಂದಾಗಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಉಡುಪಿಯಲ್ಲಿ ಗಗನಸಖಿ ಸೇರಿ ನಾಲ್ವರ ಕೊಲೆ ಕೇಸ್; ಆರೋಪಿ ಜಾಮೀನು ಅರ್ಜಿ ವಜಾ

ಇನ್ನು ಕೊಲೆಯಾದ ಮಹೇಶ್ ಈ ಹಿಂದೆಯೂ ಕೂಡ ಒಂದೊಂದು ಸಾರಿ ಮನೆ ಬಿಟ್ಟು ಹಲವು ವಾರಗಳ ಕಾಲ ವಾಪಸ್ ಮನೆಗ ಬರ್ತಿರಲಿಲ್ಲವಂತೆ. ಮನೆಯಿಂದ ಹೋದವನು ಮಹಾರಾಷ್ಟ್ರದ ಕೊಲ್ಲಾಪುರ ಮುಕಾಂಬಿಕ, ತುಳಾಜಪುರದ ಅಂಭಾಭವಾನಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದನಂತೆ. ಈ ಬಾರಿಯೂ ಕೂಡ ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟವನು ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾನೆ. ಬಳಿಕ ಗಾಣಗಾಪುರಕ್ಕೆ ಬಂದು ದರ್ಶನ ಪಡೆದು, ತಾಯಿಗೆ ಕರೆ ಮಾಡಿ ಹೇಳಿದ್ದಾನೆ.

ಆದ್ರೆ, ಗಾಣಗಾಪುರದಲ್ಲಿರುವ ಮಹೇಶ್​ನನ್ನ ಅದ್ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮಹೇಶ್ ನನ್ನ ಯಾರು ಕೊಲೆ ಮಾಡಿದರೂ, ಯಾವ ಕಾರಣಕ್ಕೆ ಕೊಲೆ ಮಾಡಿದ್ರು ಎನ್ನುವುದು ಮಾತ್ರ ನಿಗೂಢವಾಗಿದೆ. ಯಾಕಂದರೆ ಮಹಾರಾಷ್ಟ್ರ ಮೂಲದ ಮಹೇಶ್​ಗೆ ಇಲ್ಲಿ ಯಾರು ಶತ್ರುಗಳಿರಲಿಲ್ಲ. ಮತ್ತೊಂದೆಡೆ ಹಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ಹೇಳುವುದಕ್ಕೆ ಆತ ತನ್ನ ಬಳಿ ಹೆಚ್ಚಿನ ಹಣವನ್ನು ಕೂಡ ಇಟ್ಟುಕೊಂಡು ಓಡಾಡುತ್ತಿರಲಿಲ್ಲವಂತೆ. ಹಾಗಾಗಿ ಕೊಲೆಯ ಹಿಂದಿನ ಕಾರಣ ಮಾತ್ರ ನಿಗೂಢವಾಗಿದೆ.

ಈ ಸಂಬಂಧ ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್​ ದಾಖಲಿಸಿಕೊಂಡ ಪೊಲೀಸರು, ಮಹೇಶ್ ಗಾಣಗಾಪುರದಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎನ್ನುವುದರ ಕುರಿತು ಸಿಸಿಟಿವಿ ಮಾಹಿತಿ ಕಲೆ ಹಾಕೋದಕ್ಕೆ ಮುಂದಾಗಿದ್ದಾರೆ. ಜೊತೆಗೆ ಆತ ಯಾರಿಗೆಲ್ಲಾ ಕಾಲ್ ಮಾಡಿದ್ದ, ಆತನಿಗೆ ಯಾರೆಲ್ಲ ಕಾಲ್ ಮಾಡಿದ್ದರೂ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕೋದಕ್ಕೆ ಮುಂದಾಗಿದ್ದಾರೆ. ಈ ಮಹೇಶ್​ನನ್ನ ಪುಣೆ ಜಿಲ್ಲೆಯವರು ಯಾರಾದರೂ ಫಾಲೋ ಮಾಡಿಕೊಂಡು ಬಂದು ಇಲ್ಲಿ ಕೊಲೆ ಮಾಡಿದ್ರಾ ಎನ್ನುವ ಅನುಮಾನ ಕೂಡ ಪೊಲೀಸರಲ್ಲಿ ಕಾಡುತ್ತಿದೆ. ಹೀಗಾಗಿಯೆ ಪೊಲೀಸರು ಈ ಕೊಲೆ ಪ್ರಕರಣವನ್ನ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸೋದಕ್ಕೆ ಮುಂದಾಗಿದ್ದಾರೆ. ತನಿಖೆಯ ಬಳಿಕ ಕೊಲೆಗೆ ಕಾರಣ ಏನು?, ಕೊಲೆಗಾರರು ಯಾರು ಎನ್ನುವುದು ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ