ಅತಿಥಿ ಉಪನ್ಯಾಸಕನ ಹತ್ಯೆ: ಬೈಕಿನಿಂದ ಗುದ್ದಿದ ದುಷ್ಕರ್ಮಿಗಳು, ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟರು!

ಉಪನ್ಯಾಸಕ ರವಿ ಯಾರ ತಂಟೆಗೂ ಹೋದವರಲ್ಲವಂತೆ. ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇದ್ದರಂತೆ. ಕುಸನೂರು ಸಮೀಪ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಜೊತೆ ವಾಸವಾಗಿದ್ದರು. ಮದುವೆಯಾಗಿ 3 ವರ್ಷವಾಗಿದ್ದು, ಮಗು ನಿರೀಕ್ಷೆಯಲ್ಲಿದ್ದರಂತೆ.

ಅತಿಥಿ ಉಪನ್ಯಾಸಕನ ಹತ್ಯೆ: ಬೈಕಿನಿಂದ ಗುದ್ದಿದ ದುಷ್ಕರ್ಮಿಗಳು, ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟರು!
ಅತಿಥಿ ಉಪನ್ಯಾಸಕ ರವಿ ಪಟ್ಟೇದಾರ್ ಬರ್ಬರ ಹತ್ಯೆ
ಸಾಧು ಶ್ರೀನಾಥ್​

Updated on: Apr 15, 2023 | 11:46 AM

ಆತ ಅತಿಥಿ ಉಪನ್ಯಾಸಕರಾಗಿ (Lecturer) ಕೆಲಸ ಮಾಡುತ್ತಿದ್ದ. ನೂರಾರು ಮಕ್ಕಳಿಗೆ ತಿದ್ದಿ ಬುದ್ದಿ ಹೇಳೋ ಗುರುವಿನ ಸ್ಥಾನದಲ್ಲಿದ್ದ. ಕಳೆದ ರಾತ್ರಿ ನಡೆದುಕೊಂಡು ಬರ್ತಿದ್ದ ಉಪನ್ಯಾಸಕನಿಗೆ ಹಿಂದಿನಿಂದ ಬಂದು ಬೈಕ್ ನಿಂದ ಗುದ್ದಿಸಿದ ದುಷ್ಕರ್ಮಿಗಳು, ಮಾರಕಾಸ್ತ್ರದಿಂದ ಇರಿದು ಬರ್ಬರ ಕೊಲೆ (Murder) ಮಾಡಿದ್ದಾರೆ. ಜನನಿಬಿಡ ರಸ್ತೆಯಲ್ಲಿಯೇ ಬರ್ಬರ ಕೊಲೆ ಕಲಬುರಗಿ (Kalaburagi) ಜನರು ಬೆಚ್ಚಿಬೀಳುವಂತೆ ಮಾಡಿದೆ. ಇದರಿಂದ ಮೃತನ ಕುಟುಂಬಕ್ಕಂತೂ ದಿಕ್ಕೇ ತೋಚದಂತಾಗಿದೆ. ರಸ್ತೆಯಲ್ಲಿಯೇ ಅನೇಕರು ಬಿದ್ದು ಒದ್ಡಾಡುತ್ತಿದ್ದರೆ, ಇನ್ನು ಅನೇಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅದರಲ್ಲೂ ಪತ್ನಿಗೆ ದಿಕ್ಕೇ ತೋಚದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮದುವೆಯಾಗಿ ಕೇವಲ ಮೂರು ವರ್ಷವಾಗಿತ್ತು. ಮಕ್ಕಳು ಕೂಡಾ ಇಲ್ಲ. ಆದ್ರೆ ಬಾಳಿ ಬದುಕಬೇಕಿದ್ದ ಪತಿ, ಬರ್ಬರವಾಗಿ ಕೊಲೆಯಾಗಿದ್ದ ಸುದ್ದಿ ಪತ್ನಿಗೆ ಬರಸಿಡಿಲು ಬಡಿದಂತೆ ಮಾಡಿದ್ರೆ, ಇತ್ತ ಹೆತ್ತವರಿಗೆ ಕೂಡಾ ಮಗನ ಕೊಲೆ ದೊಡ್ಡ ಶಾಕ್ ನೀಡಿದೆ.

ಹೌದು, ಕಲಬುರಗಿ ನಗರದ ಹೊರವಲಯದಲ್ಲಿರುವ ಕುಸನೂರು ಗ್ರಾಮದ ನಿವಾಸಿಯಾಗಿದ್ದ ರವಿ ಪಟ್ಟೇದಾರ್ ಅನ್ನೋ 35 ವರ್ಷದ ವ್ಯಕ್ತಿಯ ಬರ್ಬರ ಕೊಲೆಯಾಗಿದೆ. ರವಿ ಪಟ್ಟೇದಾರ್, ಚಿತ್ತಾಪುರ ಪಟ್ಟಣದಲ್ಲಿರುವ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ತಾನಾಯ್ತು ತನ್ನ ಕುಟುಂಬವಾಯ್ತು ಅಂತ ಇದ್ದ ರವಿ, ನಿನ್ನೆ ಸಹೋದರಿ ಮನೆಯಲ್ಲಿದ್ದ ತಾಯಿಯನ್ನು ಕುಸನೂರು ಗ್ರಾಮಕ್ಕೆ ಕರೆದುಕೊಂಡು ಬಂದು, ಮನೆಗೆ ಬಿಟ್ಟಿದ್ದನಂತೆ.

ಇತ್ತ ರಾತ್ರಿ ಎಂಟು ಗಂಟೆ ಸಮಯದಲ್ಲಿ ಪತ್ನಿಗೆ ಪೋನ್ ಮಾಡಿ, ಮಾತನಾಡುತ್ತಾ ತಾಯಿಗೆ ಸಮೀಪದ ಹೋಟೆಲ್ ನಿಂದ ಊಟ ತೆಗೆದುಕೊಂಡು ಹೋಗಲು ಬರ್ತಿದ್ದರಂತೆ. ಆದ್ರೆ ಬೈಕ್ ನಲ್ಲಿ ಬಂದಿದ್ದ ಕೆಲ ದುಷ್ಕರ್ಮಿಗಳು, ಮೊದಲು ರವಿಗೆ ಬೈಕ್ ನಿಂದ ಗುದ್ದಿಸಿದ್ದಾರೆ. ಹೀಗಾಗಿ ರವಿ, ರಸ್ತೆ ಪಕ್ಕದಲ್ಲಿ ಬಿದ್ದಿದ್ದಾರೆ.

ಆಗ ಆತನಿಗೆ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇತ್ತ ಪತ್ನಿ ಪೋನ್ ಕಾಲ್ ಕಟ್ ಕೂಡಾ ಆಗಿರಲಿಲ್ಲವಂತೆ. ಆದ್ರೆ ಪತಿ ಮಾತನಾಡದೇ ಇದ್ದಾಗ, ಮತ್ತೆ ಕಾಲ್ ಕಟ್ ಮಾಡಿ ಮತ್ತೊಮ್ಮೆ ಪತ್ನಿ ಕರೆ ಮಾಡಿದ್ದಾಳೆ. ಆಗ ಪೋನ್ ಯಾರು ಕೂಡಾ ರಿಸೀವ್ ಮಾಡಿರಲಿಲ್ಲವಂತೆ. ಆದ್ರೆ ನಂತರ ಕೆಲ ಸ್ಥಳೀಯರು ಪೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

ಇನ್ನು ರವಿ ಯಾರ ತಂಟೆಗೆ ಕೂಡಾ ಹೋದವರಲ್ಲವಂತೆ. ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇದ್ದರಂತೆ. ಕುಸನೂರು ಸಮೀಪದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಜೊತೆ ವಾಸವಾಗಿದ್ದ ರವಿ, ಅತಿಥಿ ಉಪನ್ಯಾಸಕರಾಗಿ ನೂರಾರು ಮಕ್ಕಳಿಗೆ ಪಾಠ ಮಾಡುತ್ತಾ, ಬುದ್ದಿ ಮಾತು ಹೇಳುವ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಮೂರು ವರ್ಷವಾಗಿದ್ದು, ಮಕ್ಕಳ ನಿರೀಕ್ಷೆಯಲ್ಲಿ ಕೂಡಾ ದಂಪತಿ ಇದ್ದರಂತೆ.

ಆದ್ರೆ ಇದೇ ಸಮಯದಲ್ಲಿ ರವಿ ಬರ್ಬರ ಕೊಲೆಯಾಗಿದೆ. ಇನ್ನು ರವಿ ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಯಾಕಂದ್ರೆ ರವಿಯ ಸಹೋದರ ದತ್ತು ಅನ್ನೋನು ಕೆಲ ತಿಂಗಳ ಹಿಂದೆ ಆತನ ಸಂಬಂಧಿಯನ್ನು ಕೊಲೆ ಮಾಡಿದ್ದನಂತೆ. ಇದೇ ಕಾರಣಕ್ಕೆ ರವಿಯ ಸಹೋದರ ಜೈಲಲ್ಲಿ ಕೂಡಾ ಇದ್ದಾನಂತೆ. ಆದ್ರೆ ಈ ಕೊಲೆಗೂ ರವಿಗೂ ಯಾವುದೇ ಸಂಬಂಧ ಇರಲಿಲ್ಲವಂತೆ. ಆದ್ರು ಕೂಡಾ ಈ ಹಿಂದೆ ಕೊಲೆಯಾಗಿರುವ ಉದಯಕುಮಾರ್ ಅವರ ಕುಟುಂಬದವರೇ ಕೊಲೆ ಮಾಡಿರಬಹುದು ಅನ್ನೋ ಅನುಮಾನ ಇದೀಗ ರವಿ ಕುಟುಂಬದವರು ಮಾಡುತ್ತಿದ್ದಾರೆ.

ಸದ್ಯ ರವಿ ಕೊಲೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೂಡಾ ಮಾಡುತ್ತಿದ್ದಾರೆ. ತನಿಖೆ ನಂತರ, ಕೊಲೆಗಾರರು ಯಾರು, ಕೊಲೆಗೆ ನಿಖರ ಕಾರಣವೇನು ಅನ್ನೋದು ಗೊತ್ತಾಗಲಿದೆ. ಆದ್ರೆ ಪ್ರತಿನಿತ್ಯ ನೂರಾರು ಮಕ್ಕಳಿಗೆ ಆದರ್ಶದ ಮಾತುಗಳನ್ನು ಹೇಳುತ್ತಾ, ಅನೇಕರ ಬಾಳಿಗೆ ಬೆಳಕು ನೀಡುವ ಸ್ಥಾನದಲ್ಲಿದ್ದ ಉಪನ್ಯಾಸಕನ ಬರ್ಬರ ಕೊಲೆಯಾಗಿರುವದು ಮಾತ್ರ ದುರ್ದೈವದ ಸಂಗತಿಯಾಗಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

Published On - 11:46 am, Sat, 15 April 23

Loading...
Unable to load recommendations.
Follow Us