
ಕಲಬುರಗಿ, ಮೇ 28: ಕಲಬುರಗಿಯ (Kalaburagi) ನಂದೂರು ಇಂಡಸ್ಟ್ರಿಯಲ್ ಏರಿಯಾದಲ್ಲಿನ ದಿನೇಶ್ ದಾಲ್ ಇಂಡಸ್ಟ್ರೀಸ್ ಮಾಲೀಕ ಗೋವಿಂದ ವಾಗ್ಮೋರೆ ಎಂಬುವರು ಎಪಿಎಂಸಿಯ (APMC) ಸುಮಾರು 40ಕ್ಕೂ ಹೆಚ್ಚು ವರ್ತಕರಿಗೆ 15 ಕೋಟಿ ರೂಪಾಯಿ ವಂಚಿಸಿದ್ದಾನೆ. ಕಳೆದ ಹಲವಾರು ದಿನಗಳಿಂದ ಪೋನ್ ಮಾಡಿದರೂ ಸ್ವಿಚ್ಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಸೋಮವಾರ (ಮೇ.26) ರಾತ್ರಿ ಏಕಾಏಕಿ ದಾಲ್ ಮಿಲ್ನಲ್ಲಿದ್ದ ನೂರಾರು ಮೂಟೆ ತೊಗರಿ ಬೇಳೆಯನ್ನು ಯಾರಿಗೂ ಗೊತ್ತಾಗದಂತೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಎಪಿಎಂಸಿ ವರ್ತಕರು ಮೀಲ್ಗೆ ತೆರಳಿ ಲಾರಿಗಳನ್ನು ತಡೆದಿದ್ದಾರೆ. ನಮ್ಮ ಹಣ ವಾಪಸ್ ಕೊಡುವವರೆಗೂ ಕೋಟ್ಯಂತರ ರೂಪಾಯಿ ಮೌಲ್ಯದ ತೊಗರಿ ಬೆಳೆಯನ್ನು ಸಾಗಿಸಲು ಬಿಡಲ್ಲ ಎಂದು ಪಟ್ಟು ಹಿಡಿದರು.
ಆದರೆ, ತೊಗರಿ ಬೇಳೆ ತೆಗೆದುಕೊಂಡು ಹೋಗಲು ಬಂದವರು, ನಾವು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ದಾಲ್ ಮಿಲ್ನವರು ಎಂದಿದ್ದಾರೆ. ಗೋವಿಂದ ವಾಗ್ಮೋರೆ ತಮಗೂ ಕೂಡ ಮೋಸ ಮಾಡಿದ್ದಾನೆ. ಹೀಗಾಗಿ, ಆತನ ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವೆ. ನನ್ನ ದಾಲ್ ಮಿಲ್ನಲ್ಲಿ ನೂರಾರು ಕ್ವಿಂಟಲ್ ತೊಗರಿ ಬೇಳೆಯಿದೆ ಎಂದು ಗೋವಿಂದ ಹೇಳಿದ್ದನು. ಹೀಗಾಗಿ, ತೆಗೆದುಕೊಂಡು ಹೋಗಲು ಬಂದಿದ್ದೆವೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಅಕಾಲಿಕ ಮಳೆಯಿಂದ ಕೈಗೆ ಬಂದ ಬಾಳೆ ಬೆಳೆಯನ್ನು ಕಳೆದುಕೊಂಡ ಕಲಬುರಗಿ ನಂದೂರ ಗ್ರಾಮದ ರೈತ
ಆಗ ವರ್ತಕರು, ಗೋವಿಂದ ನಮಗೆ 15 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಬೇಕು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ನಾವು ರೈತರಿಂದ ತೊಗರಿಯನ್ನು ಖರೀದಿ ಮಾಡಿ ಆತನಿಗೆ ಕೊಟ್ಟಿದ್ದೆವೆ. ನೀವು ರಾತ್ರೋರಾತ್ರಿ ಇಲ್ಲಿರುವ ತೊಗರಿ ಬೇಳೆಯನ್ನು ತೆಗೆದುಕೊಂಡು ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಾಲ ಮಾಡಿ ವ್ಯವಹಾರ ಮಾಡುತ್ತಿದ್ದೆವೆ. ಇವಾಗ ಎಲ್ಲ ತೊಗರಿ ಬೇಳೆ ತೆಗದುಕೊಂಡು ಹೋದರೆ ಹೇಗೆ? ನಮ್ಮ ಹಣ ವಾಪಸ್ ಬರುವವರೆಗೂ ಗೋವಿಂದ ವಾಗ್ಮೋರೆಗೆ ಸೇರಿದ ಯಾವುದೇ ಮಾಲ್ ಬೇರೆಯವರು ತೆಗೆದುಕೊಂಡು ಹೋಗಲು ಬೀಡುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ವಂಚಕ ಗೋವಿಂದನ ವಿರುದ್ಧ ವರ್ತಕರೆಲ್ಲರೂ ಸೇರಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.