AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುದ್ಧಿಮಾಂದ್ಯ ಮಗನನ್ನು ಶಾಲಾ ಬಸ್​ಗೆ​ ಹತ್ತಿಸುವಾಗ ಮಹಿಳೆಗೆ ಕರೆಂಟ್​ ಶಾಕ್​​, ಸ್ಥಿತಿ ಗಂಭೀರ: 11 ಮಕ್ಕಳು ಬಚಾವ್​​

ಕಲಬುರಗಿಯಲ್ಲಿ ಶಾಲಾ ಬಸ್‌ಗೆ ಮಗುವನ್ನು ಹತ್ತಿಸುವಾಗ ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗ್ಯಶ್ರೀ ಅವರು ತಮ್ಮ ಬುದ್ಧಿಮಾಂದ್ಯ ಮಗುವನ್ನು ಶಾಲೆಗೆ ಕಳುಹಿಸುವಾಗ ಈ ದುರ್ಘಟನೆ ಎದುರಿಸಿದ್ದಾರೆ. ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಸ್ಕಾಂನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಮಗುವಿಗೂ ಸಣ್ಣ ಗಾಯಗಳಾಗಿವೆ.

ಬುದ್ಧಿಮಾಂದ್ಯ ಮಗನನ್ನು ಶಾಲಾ ಬಸ್​ಗೆ​ ಹತ್ತಿಸುವಾಗ ಮಹಿಳೆಗೆ ಕರೆಂಟ್​ ಶಾಕ್​​, ಸ್ಥಿತಿ ಗಂಭೀರ: 11 ಮಕ್ಕಳು ಬಚಾವ್​​
ವಿದ್ಯುತ್​ ವೈರ್​​ ತಾಗಿ ಮಹಿಳೆಗೆ ಗಾಯ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Dec 24, 2024 | 8:35 AM

Share

ಕಲಬುರಗಿ, ಡಿಸೆಂಬರ್​ 24: ಶಾಲಾ ಬಸ್​ಗೆ (School Bus) ಮಗುವನ್ನು ಹತ್ತಿಸುವಾಗ ವಿದ್ಯುತ್​ ವೈಯರ್​ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ (Kalaburgi) ನಗರದ ಮೋಹನ್​ ಲಾಡ್ಜ್​​ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕರೆಂಟ್​ ಶಾಕ್​ನಿಂದ (Electric shock) ಗಂಭೀರವಾಗಿ ಗಾಯಗೊಂಡಿರುವ ಬಾಗ್ಯಶ್ರೀ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗ್ಯಶ್ರೀ ಅವರು ಎಂದಿನಂತೆ ತಮ್ಮ ಬುದ್ಧಿಮಾಂದ್ಯ ಮಗನನ್ನ ಶಾಲೆಗೆ ಕಳುಹಿಸಲು ಶಾಲಾ ವಾಹನ ಹತ್ತಿಸಲು ಬಂದಿದ್ದರು. ಈ ವೇಳೆ ರಸ್ತೆಯ‌ಲ್ಲಿ ತುಂಡಾಗಿ ಬಿದ್ದಿದ್ದ ವೈರ್ ತಗುಲಿದೆ. ನೋಡ ನೋಡುತ್ತಿದ್ದಂತೆ ಶಾಕ್​ ಹೊಡೆದು ಭಾಗ್ಯಶ್ರೀ ಅವರು ರಸ್ತೆಯಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದು, ಕೈ, ಕಾಲು, ಹೊಟ್ಟೆ ಭಾಗ ಸುಟ್ಟು ಹೋಗಿದೆ. ತಕ್ಷಣವೇ ಸ್ಥಳೀಯರು ಭಾಗ್ಯಶ್ರೀ ಅವರನ್ನು ಕಾಪಾಡಿದ್ದಾರೆ.

ಒಂದು ವೇಳೆ ಹೆಚ್ಚು ಕಡಿಮೆಯಾಗಿದ್ದರೂ ಶಾಲಾ ವಾಹನದಲ್ಲಿದ್ದ 11ಕ್ಕೂ ಹೆಚ್ಚು ಮಕ್ಕಳು ಸುಟ್ಟು ಭಸ್ಮವಾಗುತ್ತಿದ್ದರು‌. ಅದೃಷ್ಟವಶಾತ್ ಅಪಾಯ ಸಂಭವಿಸಿಲ್ಲ. ಭಾಗ್ಯಶ್ರೀ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ, ಅವರ 11 ವರ್ಷ ಮಗ ಆಯುಷ್​ಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಜೆಸ್ಕಾಂನ ನಿರ್ಲಕ್ಷ್ಯಕ್ಕೆ ಸದ್ಯ ಭಾಗ್ಯಶ್ರೀ ಸಾವು-ಬದಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಭಾಗ್ಯಶ್ರೀ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಜೆಸ್ಕಾಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಅತ್ತ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಇತ್ತ ಕಲಬುರಗಿಯಲ್ಲಿ ಮತ್ತೋರ್ವ ಬಾಣಂತಿ ಸಾವು

ಪತಿಯನ್ನು ಕಳೆದುಕೊಂಡಿರುವ ಭಾಗ್ಯಾಶ್ರೀ ಅವರು ಕೂಲಿ-ನಾಲಿ ಮಾಡಿ ತನ್ನ ಬುದ್ಧಿಮಾಂದ್ಯ ಮಗುವಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಭಾಗ್ಯಶ್ರೀ ಅವರ ದೇಹದ 50-60 ರಷ್ಟು ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಬಲಗೈ ಸಂಪೂರ್ಣ ಸುಟ್ಟಿದ್ದರಿಂದ ಕತ್ತಿರಸಬೇಕಾದ ಪರಸ್ಥಿತಿ ಬಂದಿದೆ. ಸದ್ಯ ಭಾಗ್ಯಶ್ರೀ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ 2-3 ದಿನ ಜೀವಕ್ಕೆ ಗ್ಯಾರಂಟಿ ಕೊಡೊಕ್ಕಾಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಕಳೆದ ವಾರವಷ್ಟೇ ಕಲಬುರಗಿ ಸೆಂಟ್ರಲ್ ಬಸ್ ನಿಲ್ದಾಣದ ಬಳಿಯೂ ವಿದ್ಯುತ್ ತಂತಿ ತಗುಲಿ ಓರ್ವ ಬಾಲಕ ಮೃತಪಟ್ಟಿದ್ದನು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಇಷ್ಟಾದರೂ ಜೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

ನಗರದ ತುಂಬೆಲ್ಲ ಜೇಡರ ಬಲೆಯಂತೆ ಹೈಟೆನ್ಶನ್ ವೈರ್​ಗಳ ಮೇಲೆ ಕೇಬಲ್​ಗಳು ಸುತ್ತಿಕೊಂಡಿವೆ. ಆದರೆ, ಜೆಸ್ಕಾಂ ಅಧಿಕಾರಿಗಳು ಮಾತ್ರ ಅದು ನಮ್ಮ ವೈರ್ ಅಲ್ಲ, ಬದಲಾಗಿ ಜಿಯೋ ಕೇಬಲ್​ನಿಂದ ಆಗಿದೆ ಎಂದು ಜಾರಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Tue, 24 December 24