
ಕಲಬುರಗಿ, ಸೆಪ್ಟೆಂಬರ್ 17: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 13 ತಿಂಗಳ ಬಳಿಕ ಅಂದರೆ 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ನಿಜಾಮನ ಕಪಿಮುಷ್ಟಿಯಿಂದ ಮುಕ್ತಿ ಪಡೆದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗ ಸ್ವಾತಂತ್ರ್ಯದ ಸಂಭ್ರಮ ಮನೆ ಮಾಡಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿಗೆ ಆಗಮಿಸಿ ಎರಡು ದಿನಗಳ ಅದ್ದೂರಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಕೆಕೆಆರ್ಡಿಬಿ ಆಯೋಜಿಸಿದ್ದ ಆಕರ್ಷಕ ಸ್ಟ್ರೀಟ್ ಫೆಸ್ಟಿವಲ್, ಪ್ರವಾಸೋದ್ಯಮ ಇಲಾಖೆಯ ಚಿತ್ರಸಂತೆ ಹಾಗೂ ಅಪ್ಪಾ ಕೆರೆಯ ದಡದಲ್ಲಿ ನಡೆದ ಲೈಟಿಂಗ್ ವಿತ್ ಮ್ಯೂಸಿಕ್ ಶೋ ಜನಮನ ಸೆಳೆದವು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾಹಿತ್ಯ, ಇತಿಹಾಸ ಹಾಗೂ ಪರಂಪರೆಯನ್ನು ಬಿಂಬಿಸುವ ಬೃಹತ್ ಡ್ರೋನ್ ಶೋ ವೀಕ್ಷಿಸಿದ ಸಿಎಂ ಡಿಕೆಶಿ, ಕಲಬುರಗಿಯ ಸ್ಟ್ರೀಟ್ ಫೆಸ್ಟಿವಲ್ ನೋಡಿದರೆ ಬೆಂಗಳೂರಿನ ಎಂ.ಜಿ. ರಸ್ತೆ ನೆನಪಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ 8:30ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವ ಮುಖ್ಯಮಂತ್ರಿಗಳು, ನಂತರ 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸುಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಿಎಂ ಸನ್ಮಾನಿಸಿದ್ದಾರೆ.
ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಏಳು ಜಿಲ್ಲೆಗಳ ಒಟ್ಟು 1,775 ಕೋಟಿ ರೂಪಾಯಿ ವೆಚ್ಚದ 801 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ