ಸೋರುತ್ತಿರುವ ಸರ್ಕಾರಿ ಶಾಲೆ ಕೊಠಡಿಗಳು; ಪ್ರಾಣ ಭಯದಲ್ಲಿಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವ್ಯಸ್ಥೆಗೆ ತಲುಪಿದೆ. 180 ಮಕ್ಕಳಿರುವ ಶಾಲೆಯಲ್ಲಿ 16 ಕೊಠಡಿಗಳಿವೆ. ಪಾಠ ಮಾಡಲು ಉತ್ತಮ ಶಿಕ್ಷಕರೂ ಇದ್ದಾರೆ. ಆದರೆ, ಕೊಠಡಿಗಳು ಮಳೆ ಬಂದಾಗ ಸೋರುತ್ತಿದ್ದು, ಪ್ರಾಣ ಭಯದಲ್ಲಿಯೇ ಮಕ್ಕಳು ಪಾಠ ಮಾಡುವ ಸ್ಥಿತಿ ಬಂದಿದೆ.

ಸೋರುತ್ತಿರುವ ಸರ್ಕಾರಿ ಶಾಲೆ ಕೊಠಡಿಗಳು; ಪ್ರಾಣ ಭಯದಲ್ಲಿಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಕಲಬುರಗಿಯಲ್ಲಿ ಸೋರುತ್ತಿರುವ ಸರ್ಕಾರಿ ಶಾಲೆಗಳು
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2023 | 11:46 AM

ಕಲಬುರಗಿ, ಜು.19: ರಾಜ್ಯದಲ್ಲಿ ತಡವಾಗಿಯಾದರೂ ಮಳೆ ಆರಂಭವಾಗಿದ್ದು, ಅದರಲ್ಲೂ ಕಲಬುರಗಿ(Kalaburagi) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇಷ್ಟು ದಿನ ಮಳೆಗಾಗಿ ಜನ ಕಾದಿದ್ದರು. ಆದರೆ, ಇದೀಗ ಸರ್ಕಾರಿ ಶಾಲೆ(Government School) ಯ ಮಕ್ಕಳು ಯಾಕಾದರೂ ಮಳೆಗಾಲ ಆರಂಭವಾಯಿತೆಂದು ಚಿಂತಿಸುವಂತಾಗಿದೆ. ಮಳೆಗಾಲ ಆರಂಭವಾದ್ರೆ ಸಾಕು, ಆ ಮಕ್ಕಳಿಗೆ ಶಾಲೆಗೆ ಹೋಗಲು ಭಯ ಆರಂಭವಾಗುತ್ತದೆ. ಹೌದು ಸರ್ಕಾರಿ ಶಾಲೆಯ ಅನೇಕ ಕೊಠಡಿಗಳು ಸೋರುತ್ತಿದ್ದು, ಅನೇಕ ಕಡೆ ಬೀಳುವ ಹಂತದಲ್ಲಿವೆ. ಇನ್ನೂ ಅನೇಕ ಕಡೆ ಮೇಲ್ಛಾವಣಿ ಕುಸಿದು ಬೀಳುವ ಆತಂಕವಿದೆ. ಸರ್ಕಾರ ಹತ್ತಾರು ಭಾಗ್ಯಗಳನ್ನು ನೀಡುತ್ತಿದೆ. ಆದ್ರೆ, ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾತ್ರ ದೌರ್ಬಾಗ್ಯ ಕಾಡುತ್ತಿದ್ದು, ಸೋರುತ್ತಿರುವ ಕೋಣೆಯಲ್ಲಿ ಮಕ್ಕಳ ಭವಿಷ್ಯ ಸೊರಗುತ್ತಿದೆ.

ಸೋರುತಿರುವ ಸರ್ಕಾರಿ ಶಾಲೆಗಳು

ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಶಾಲೆಯಲ್ಲಿ 180 ಮಕ್ಕಳಿದ್ದಾರೆ. ಹದಿನಾರು ಕೊಠಡಿಗಳಿವೆ. ಪಾಠ ಮಾಡಲು ಉತ್ತಮ ಶಿಕ್ಷಕರೂ ಇದ್ದಾರೆ. ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ, ಶಾಲೆಗೆ ಬರಲು ಮಕ್ಕಳಿಗೆ ಭಯ ಕಾಡುತ್ತಿದೆ. ಇರುವ 16 ಕೊಠಡಿಗಳ ಪೈಕಿ ಮೂರು ಕೊಠಡಿಗಳು ಮಾತ್ರ ಚೆನ್ನಾಗಿದ್ದು, ಉಳಿದ ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿವೆ. ಇನ್ನು ಅನೇಕ ಕೊಠಡಿಗಳು ಸೋರುತ್ತಿವೆ. ಪ್ರತಿವರ್ಷ ಮಳೆಗಾಲ ಬಂದಾಗ ಮಕ್ಕಳು ಮಳೆಯಲ್ಲಿಯೇ ಕೂತು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಲ ಬಾರಿ ಮಳೆ ಬಂದಾಗ, ಮಕ್ಕಳ ಪುಸ್ತಕಗಳು ಕೂಡ ಮಳೆ ನೀರಿನಿಂದ ಹಾಳಾಗಿ ಹೋಗಿವೆಯಂತೆ.

ಇದನ್ನೂ ಓದಿ:ಬೆಳಗಾವಿ: ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ‌ ಹತ್ಯೆ ಕೇಸ್; ಇಬ್ಬರು ಆರೋಪಿಗಳ ಬಂಧನ

ಇನ್ನು ಶಿಕ್ಷಕರು ಶಾಲೆಯಲ್ಲಿನ ಕೊಠಡಿಗಳ ನಿರ್ಮಾಣ ಮತ್ತು ಇರುವ ಕೊಠಡಿಗಳಿಗೆ ದುರಸ್ಥಿಯಾದ್ರು ಮಾಡಿ ಎಂದು ಅನೇಕ ಸಲ ಅಧಿಕಾರಿಗಳಿಗೆ ಮನವಿ ಮಾಡಿದ್ದಾರಂತೆ. ಆದ್ರೆ, ಯಾವುದೇ ಪ್ರಯೋಜನವಿಲ್ಲವಂತೆ. ಹೀಗಾಗಿ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಪರದಾಡುತ್ತಿದ್ದಾರೆ. ಕಡಗಂಚಿಯಲ್ಲಿ 5 ದಶಕಗಳ ಹಿಂದೆ ನಿರ್ಮಾಣವಾಗಿರುವ ಕೊಠಡಿಗಳಿವೆ. ಹೊಸದಾಗಿ ಮೂರು ಕೊಠಡಿಗಳನ್ನು ಮಾತ್ರ ನಿರ್ಮಾಣ ಮಾಡಿದ್ದು, ಅವುಗಳನ್ನು ಬಿಟ್ಟರೆ ಉಳಿದ ಬಹುತೇಕ ಕೊಠಡಿಗಳು ಸೋರುತ್ತಿವೆ.

ಶಿಥಿಲಾವ್ಯಸ್ಥೆಯಲ್ಲಿರುವ 1200 ಶಾಲಾ ಕೊಠಡಿಗಳು

ಕೊಠಡಿಗಳು ಸೋರುವುದು, ಬೀಳುವ ಆತಂಕ ಇರುವುದು ಕೇವಲ ಎರಡು ಗ್ರಾಮದ ಸ್ಥಿತಿ ಮಾತ್ರವಲ್ಲ. ಕಲಬುರಗಿ ಜಿಲ್ಲೆಯಲ್ಲಿ ಬಹುತೇಕ ಕಡೆ ಇದೇ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ವರಗೆ ಸರ್ಕಾರಿ ಮತ್ತು ಅನುಧಾನಿತ ಶಾಲೆಯಲ್ಲಿ ಐದುವರೆ ಲಕ್ಷ ಮಕ್ಕಳು ಓದುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸದ್ಯ 1200 ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿರುವ ಬಗ್ಗೆ ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮತ್ತು ಸೋರುತ್ತಿರುವ ಶಾಲೆಗಳ ದುರಸ್ಥಿಗೆ ಸರ್ಕಾರ ಮನಸು ಮಾಡುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳು ಆತಂಕದಲ್ಲಿಯೇ ಶಾಲೆಗೆ ಬಂದು ಪಾಠ ಕೇಳುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆ ಮುಚ್ಚುವುದನ್ನು ತಪ್ಪಿಸಲು 16 ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸುಳ್ಯದ ರೈತ

ಸರ್ ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಅನೇಕ ಸಲ ನಮ್ಮ ಪುಸ್ತಕಗಳ ಮೇಲೆ ನೀರು ಬಿದ್ದು ಹಾಳಾಗಿವೆ. ಹೀಗಾಗಿ ಹೊಸ ಕೊಠಡಿಗಳ ನಿರ್ಮಾಣ ಮಾಡಿಕೊಡಬೇಕೆಂದು ಕಡಗಂಚಿ ಗ್ರಾಮದ ವಿದ್ಯಾರ್ಥಿ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಇನ್ನು ಜಿಲ್ಲೆಯಲ್ಲಿನ ಕೊಠಡಿಗಳ ದುಸ್ಥಿತಿ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕಲಬುರಗಿ ಡಿಡಿಪಿಐ ಸಕ್ರೆಪ್ಪಗೌಡ್, ‘ಜಿಲ್ಲೆಯಲ್ಲಿನ ಕೊಠಡಿಗಳ ದುಸ್ಥಿತಿ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಳೆ ಬಂದಾಗ, ಮಕ್ಕಳನ್ನು ಚೆನ್ನಾಗಿರುವ ಕೊಠಡಿಗಳಲ್ಲಿ ಕೂರಿಸಿ ಪಾಠ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಅನೇಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹತ್ತಾರು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ, ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ದುರಸ್ಥಿ ಮತ್ತು ಹೊಸ ಕೊಠಡಿಗಳ ನಿರ್ಮಾಣ ಭಾಗ್ಯವನ್ನು ಕೂಡ ನೀಡಬೇಕಿದೆ. ಆ ಮೂಲಕ ಮಕ್ಕಳು ಭಯಮುಕ್ತ, ಆತಂಕಮುಕ್ತವಾಗಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣ ಮಾಡಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Wed, 19 July 23

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us