ಭೀಮಾ ನದಿಯಲ್ಲಿ ಕಾಲೇಜು ವಿದ್ಯಾರ್ಥಿ ಶವ ಪತ್ತೆ ಪ್ರಕರಣ; ಕೊಟ್ಟ ಹಣ ವಾಪಾಸ್​ ಕೇಳಿದ್ದಕ್ಕೆ ಸ್ನೇಹಿತರಿಂದಲೇ ಕೊಲೆ, ಇಬ್ಬರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 26, 2023 | 10:19 AM

ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಮಾನ ಭಂಗ ಎಂದು ಹೇಳುತ್ತಾರೆ. ಆದರೂ, ಅಲ್ಲೋರ್ವ ಕಾಲೇಜು ವಿದ್ಯಾರ್ಥಿ ದುರ್ಜನರ ಸಂಗ ಮಾಡಿದ್ದ. ಅದರಂತೆ ಸ್ನೇಹಿತರೇ ಅಮವಾಸ್ಯೆ ದಿನ ದೇವರ ದರ್ಶನಕ್ಕೆ ಹೋಗೋಣವೆಂದು ಹೇಳಿ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ, ಯಮಲೋಕಕ್ಕೆ ಕಳುಹಿಸಿದ್ದು, ಕಾರಣ ಇಲ್ಲಿದೆ ನೋಡಿ.

ಭೀಮಾ ನದಿಯಲ್ಲಿ ಕಾಲೇಜು ವಿದ್ಯಾರ್ಥಿ ಶವ ಪತ್ತೆ ಪ್ರಕರಣ; ಕೊಟ್ಟ ಹಣ ವಾಪಾಸ್​ ಕೇಳಿದ್ದಕ್ಕೆ ಸ್ನೇಹಿತರಿಂದಲೇ ಕೊಲೆ, ಇಬ್ಬರ ಬಂಧನ
Follow us on

ಕಲಬುರಗಿ, ಜು.26: ಕಳೆದ ಜೂನ್ 19 ರಂದು ಕಲಬುರಗಿ(Kalaburagi) ಜಿಲ್ಲೆಯ ಜೇವರ್ಗಿ(Jevargi) ತಾಲೂಕಿನ ನಾಗರಾಣಿ ಬಳಿಯಿರುವ ಭೀಮಾ ನದಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವ ಸಿಕ್ಕ ನಂತರ ಅದು ಕಲಬುರಗಿ ನಗರದ ಕಮಲಾನಗರದ ನಿವಾಸಿಯಾಗಿದ್ದ 17 ವರ್ಷದ ಶಿವಕುಮಾರ್ ಎಂಬ ಕಾಲೇಜು ವಿದ್ಯಾರ್ಥಿಯದ್ದು ಎಂದು ಗೊತ್ತಾಗಿದೆ. ಮೃತ ಶಿವಕುಮಾರ್, ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ಓದುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಕಾಲೇಜಿಗೆ ಪ್ರವೇಶ ಪಡೆದಿದ್ದ. ಆದ್ರೆ, ಜೂನ್ 18 ರಂದು ಅಮವಾಸ್ಯೆಯ ದಿನ, ಶಿವಕಮಾರ್​ನನ್ನು ಆತನ ಸ್ನೇಹಿತರು, ಅಮವಾಸ್ಯೆಯಾಗಿದ್ದರಿಂದ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದರು.

ತನಿಖೆ ಬಳಿಕ ಕೊಲೆ ಎಂಬುದು ಬೆಳಕಿಗೆ

ದೇವಸ್ಥಾನಕ್ಕೆಂದು ಶಿವಕುಮಾರ್​ನನ್ನ ಕರೆದುಕೊಂಡು ಹೋಗಿದ್ದ ಸ್ನೇಹಿತರು ಸಂಜೆ ಮರಳಿ ಮನೆಗೆ ಬಂದರೂ ಕೂಡಾ ಶಿವಕುಮಾರ್ ಮಾತ್ರ ಬಂದಿರಲಿಲ್ಲ. ಈ ಬಗ್ಗೆ ಶಿವಕುಮಾರ್ ಜೊತೆ ಹೋಗಿದ್ದವರನ್ನು ಕೇಳಿದ್ರೆ, ನಮಗೆ ಗೊತ್ತಿಲ್ಲ. ಆತ ನಮ್ಮ ಜೊತೆ ಬರಲಿಲ್ಲ. ಕಲಬುರಗಿ ನಗರದ ರಿಂಗ್ ರೋಡ್​ನಲ್ಲಿಯೇ ಆತ ಇಳಿದುಕೊಂಡಿದ್ದಾನೆಂದು ಹೇಳಿದ್ದರು. ಆದ್ರೆ, ಈ ಕುರಿತು ಕುಟುಂಬದವರಿಗೆ, ಶಿವಕುಮಾರ್ ಜೊತೆ ಹೋಗಿದ್ದ ಯುವಕರ ಬಗ್ಗೆ ಅನುಮಾನವಿತ್ತು. ಹೀಗಾಗಿ ನಮ್ಮ ಪುತ್ರನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಶಿವಕುಮಾರ್​ನದ್ದು ಸಹಜ ಸಾವಲ್ಲ, ಬದಲಾಗಿ ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ. ಹೌದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬುದು ಗೊತ್ತಾಗಿದ್ದು, ಶಿವಕುಮಾರ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಾದ ಶರಣು ಮತ್ತು ಲಿಂಗರಾಜ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಪುತ್ರನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಹತ್ಯೆ! ಆರೋಪಿಗಳು ಅರೆಸ್ಟ್​; ಕೊಲೆಗೆ ಕಾರಣ ಬಾಯ್ಬಿಟ್ಟ ಹಂತಕರು

ಕೊಟ್ಟ ಹಣ ಮರಳಿ ಕೇಳಿದಕ್ಕೆ ಸ್ನೇಹಿತರಿಂದಲೇ ಕೊಲೆ

ಇನ್ನು ಒಂದೇ ಬಡಾವಣೆಯಲ್ಲಿದ್ದ ಇವರೆಲ್ಲ ಕಳೆದ ಅನೇಕ ವರ್ಷಗಳಿಂದ ಸ್ನೇಹಿತರು. ಕೊಲೆಯಾಗಿರುವ ಶಿವಕುಮಾರ್ ಮಾತ್ರ ಕಾಲೇಜಿಗೆ ಹೋಗಿದ್ದರೆ, ಇನ್ನುಳಿದವರು ಆಟೋ ಓಡಿಸಿಕೊಂಡು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರಂತೆ. ಇನ್ನು ಶಿವಕುಮಾರ್ ಕೊಲೆಗೆ ಕಾರಣವಾಗಿದ್ದು ಹಣಕಾಸಿನ ವಿಚಾರ. ಹೌದು ಕೊಲೆಯಾಗಿರುವ ಶಿವಕುಮಾರ್, ಕೆಲ ತಿಂಗಳ ಹಿಂದೆ ಆರೋಪಿಗಳಿಗೆ 2 ಸಾವಿರ ಹಣ ನೀಡಿದ್ದನಂತೆ. ತಾನು ಕೊಟ್ಟ ಹಣವನ್ನು ಮರಳಿ ನೀಡುವಂತೆ ಕೇಳಿದ್ದನಂತೆ. ಅಷ್ಟೇ ಹಣ ಕೇಳಿದ್ದಕ್ಕೆ ದುಷ್ಕರ್ಮಿಗಳು, ಕಳೆದ ಜೂನ್ 18 ರಂದು ಅಮವಾಸ್ಯೆ ದಿನ ದೇವಸ್ಥಾನಕ್ಕೆ ಹೋಗೋಣವೆಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿ, ಭೀಮಾ ನದಿಯಲ್ಲಿ ಆತನಿಗೆ ಥಳಿಸಿ, ನಂತರ ಆತನನ್ನು ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ.

ಶಿವಕುಮಾರ್ ಸ್ನೇಹಿತರು ಸರಿಯಿಲ್ಲ ಎನ್ನುವುದು ಶಿವಕುಮಾರ್ ಕುಟುಂಬದವರಿಗೆ ಕೂಡ ಗೊತ್ತಾಗಿತ್ತಂತೆ. ಹೀಗಾಗಿಯೇ ತಮ್ಮ ಮನೆಕಡೆ ಬರದಂತೆ ಅನೇಕ ಬಾರಿ ಹೇಳಿದ್ದರಂತೆ. ಆದ್ರೆ, ಶಿವಕುಮಾರ್ ಬೆನ್ನುಬಿದ್ದಿದ್ದ ದುಷ್ಕರ್ಮಿಗಳು, ನಂಬಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಸ್ನೇಹಿತರಿಂದಲೇ ಕಾಲೇಜು ವಿದ್ಯಾರ್ಥಿ ಕೊಲೆಯಾಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ