ಮಕ್ಕಳಿಲ್ಲದೆ ಮುಚ್ಚುತ್ತಿವೆ ತೀರ್ಥಹಳ್ಳಿಯ ಸರ್ಕಾರಿ ಶಾಲೆಗಳು, ಸದನದಲ್ಲಿ ಆರಗ ಕಳವಳ: ಶಿಕ್ಷಣ ಸಚಿವರ ಉತ್ತರ ಹೀಗಿದೆ

ಪೋಷಕರು ಇಂಗ್ಲಿಷ್ ಮೋಹಕ್ಕೆ ಒಳಗಾಗಿ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಹೋಗುತ್ತಿದ್ದಾರೆ. ಇದರಿಂದ ತೀರ್ಥಹಳ್ಳಿಯ ಕನ್ನಡ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಆಗುತ್ತಿದೆ. ವಿದ್ಯಾರ್ಥಿಗಳು ಬಾರದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿನ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ ಹೀಗಿದೆ.

ಮಕ್ಕಳಿಲ್ಲದೆ ಮುಚ್ಚುತ್ತಿವೆ ತೀರ್ಥಹಳ್ಳಿಯ ಸರ್ಕಾರಿ ಶಾಲೆಗಳು, ಸದನದಲ್ಲಿ ಆರಗ ಕಳವಳ: ಶಿಕ್ಷಣ ಸಚಿವರ ಉತ್ತರ ಹೀಗಿದೆ
ತೀರ್ಥಹಳ್ಳಿ ಸರ್ಕಾರಿ ಶಾಲೆ
Follow us
| Updated By: ವಿವೇಕ ಬಿರಾದಾರ

Updated on: Feb 15, 2024 | 12:38 PM

ಬೆಂಗಳೂರು, ಫೆಬ್ರವರಿ 15: ಪೋಷಕರು ಇಂಗ್ಲಿಷ್ (English) ಮೋಹಕ್ಕೆ ಒಳಗಾಗಿ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ (English Medium School) ಸೇರಿಸುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಹೋಗುತ್ತಿದ್ದಾರೆ. ಇದರಿಂದ ತೀರ್ಥಹಳ್ಳಿಯ (Thirthahalli) ಕನ್ನಡ ಸರ್ಕಾರಿ ಶಾಲೆಗಳಿಗೆ (Government School) ವಿದ್ಯಾರ್ಥಿಗಳ ಕೊರತೆ ಆಗುತ್ತಿದೆ. ವಿದ್ಯಾರ್ಥಿಗಳು (Students) ಬಾರದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿನ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಅಳವಡಿಸಿ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ (Araga Jnanendra) ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ: ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿಯೇ ಇದೆ. ಇಂಗ್ಲಿಷ್ ಇಲ್ಲ, ಮೂಲ ಸೌಕರ್ಯ ಇಲ್ಲ ಅಂತ ಕನ್ನಡ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ತರುವುದು. ಹೀಗಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳನ್ನು ತೆರೆಯಬೇಕೆಂಬ ಚಿಂತನೆ ಇದೆ ಎಂದು ಸದನಕ್ಕೆ ತಿಳಿಸಿದರು.

ಈ ಬಗ್ಗೆ ಸರ್ಕಾರ ಇತಿಮಿತಿಗಳನ್ನು ನೋಡಿಕೊಂಡು ಮುಂದುವರೆಯಲಿದೆ. ಈ ವರ್ಷ 2025 ರೊಳಗೆ 500 ಕೆಪಿಎಸ್ ಶಾಲೆಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಮುಂದಿನ ವರ್ಷದ ಹೊತ್ತಿಗೆ ಶಾಲೆ ಬಿಟ್ಟ ಕ್ರಮಗಳನ್ನೂ ಅನುಸರಿಸುತ್ತೇವೆ. ವ್ಯವಸ್ಥೆಯನ್ನು ಸರಿದಾರಿಗೆ ತರಲು ಸ್ವಲ್ಪ ಕಾಲಾವಕಾಶ ಬೇಕು. ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಬೋಧನೆಗೆ ಕಾಲಮಿತಿ ಹಾಕಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಮಕ್ಕಳ ಕೊರತೆ ಶಾಲೆಗಳನ್ನೂ ಗಮನದಲ್ಲಿರಿಸಿಕೊಂಡು ಮಾಡಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ನವೆಂಬರ್ ತಿಂಗಳಿನಿಂದ ಪೂರೈಕೆ: ಮಧು ಬಂಗಾರಪ್ಪ

ಆರಗ ಜ್ಞಾನೇಂದ್ರ: ಸದ್ಯ ಈಗ ಇರುವ ಶಾಲೆಗಳಲ್ಲಾದರೂ ಇಂಗ್ಲಿಷ್ ಬೋಧಿಸಿ. ಅಧಿಕಾರಿಗಳ ಮಾತು ಕೇಳಬೇಡಿ. ನನ್ನ ಕ್ಷೇತ್ರದಲ್ಲಿ 5-6 ಶಾಲೆಗಳಲ್ಲಿ 200 ಮಕ್ಕಳಿಲ್ಲ. ಶಾಲೆಗಳಿಗೆ ಸ್ಪೋರ್ಟ್ಸ್ ಟೀಚರ್ ನೇಮಕ ಮಾಡಬೇಕೆಂದರೆ 200 ಮಕ್ಕಳಿರಲೇಬೇಕಂತೆ. ಐಎಎಸ್, ಕೆಎಎಸ್ ಅಧಿಕಾರಿಗಳು ತಮ್ಮ ಮಕ್ಕಳನ್ನು ನಮ್ಮ ಮಲೆನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿಸಲಿ, ನಾನೇ ಅವರ ಮಕ್ಕಳಿಗೆ ಒಳ್ಳೆಯ ಊಟ ಹಾಕಿಸುತ್ತೇನೆ, ಅವರ ಮಕ್ಕಳನ್ನು ಕಳಿಸಲು ಹೇಳಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆರಗ ಗರಂ ಆದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ: ಶಿಕ್ಷಣ ಇಲಾಖೆ ಬಳಿ ಹಳೆಯ ಶಾಲಾ ಕೊಠಡಿಗಳನ್ನು ತೆರವು ಮಾಡಲೂ ಸಹ ಹಣ ಇಲ್ಲ. ಶಿಕ್ಷಣ ಸಚಿವರು ಇಲಾಖೆಗೆ ಹೆಚ್ಚಿನ ಅನುದಾನ ಪಡೆದುಕೊಳ್ಳಿ. ಇಲ್ಲದಿದ್ದರೆ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಅನ್ಯಾಯ ಮಾಡಿದಂತಾಗಲಿದೆ. ಶಾಲಾ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆ ಬಂದರೆ ಏನೂ ಕೆಲಸ ಆಗಲ್ಲ. ಹಿಂದಿನ ಸರ್ಕಾರ ಕಡಿಮೆ ಅನುದಾನ ಕೊಟ್ಟಿದೆ, ಅದನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರು.

ಸಚಿವ ಮಧು ಬಂಗಾರಪ್ಪ ಉತ್ತರ: ನಾಳೆ (ಫೆ.16) ರಂದು ಬಜೆಟ್ ಮಂಡನೆ ಇದೆ. ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಇಲಾಖೆಯಲ್ಲಿ ಶಾಲಾ ಕೊಠಡಿಗಳ ಸಮಸ್ಯೆ ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಕೆಪಿಎಸ್ ಶಾಲೆಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ