
ಬೆಂಗಳೂರು: ಕಣ್ವ ಸೌಹಾರ್ಧ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ವಂಚನೆ ಪ್ರಕರಣ ಹೊಸ ಮಜಲು ತಲುಪಿದೆ. ಸಂತ್ರಸ್ತ ಹೂಡಿಕೆದಾರರು ನೇರವಾಗಿ ತನಿಖಾಧಿಕಾರಿಗೆ ಫೋನ್ ಮೂಲಕ ದೂರು ನೀಡಲು ಸೂಚನೆ ನೀಡಲಾಗಿದೆ. ತನಿಖಾಧಿಕಾರಿ ಮಹಮ್ಮದ್ ರಫಿ, ಡಿವೈಎಸ್ಪಿ, ಅವರನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ 080 2209 4417 ಸ್ಥಿರ ದೂರವಾಣಿ ಮೂಲಕ ಸಂಪರ್ಕಿಸಬಹುದು.
2005ರಲ್ಲಿ ರಾಜಾಜಿನಗರದಲ್ಲಿ ಸ್ಥಾಪನೆಯಾಗಿದ್ದ ಕಣ್ವ ಸೌಹಾರ್ಧ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್, ಹೂಡಿಕೆ ಮಾಡಿದ್ದ ಗ್ರಾಹಕರಿಗೆ ಹಣ ನೀಡದೇ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸಿಐಡಿಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.
ಪ್ರಕರಣದಲ್ಲಿ ಇದುವರೆಗೆ 426 ಕೋಟಿ 19 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿರುವ ಸಿಐಡಿ, ಸದ್ಯ ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಿದ್ದು, ವಂಚನೆಗೊಳದ ಹಣದ ಮೌಲ್ಯ ಹೆಚ್ಚಿರಬಹುದಾದ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರಿಗೆ ದೂರು ನೀಡಲು ಸೂಚಿಸಿದ್ದು, ಬೆಳಗ್ಗೆ 11ರಿಂದ ಸಂಜೆ 5ರವರೆಗೂ ಖುದ್ದು ತನಿಖಾಧಿಕಾರಿಗೆ ಫೋನ್ ಮೂಲಕ ದೂರು ನೀಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.