
ಕಾರ್ಗಿಲ್ ವಿಜಯ ದಿನವನ್ನು ಪ್ರತಿ ಜುಲೈ 26 ರಂದು ಆಚರಣೆ ಮಾಡಲಾಗುತ್ತದೆ. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಇದು ಒಂದು. ಕಾರ್ಗಿಲ್ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. ಈ ದಿನದ ಪ್ರಯುಕ್ತ 29 ವರ್ಷಗಳ ಕಾಲ ಸೇನೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದ ಉಡುಪಿ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ (ಡಾ.) ಎಫ್. ಇ. ಎ. ರಾಡ್ರಿಗಸ್ ಅವರು ಟಿವಿ9 ಜೊತೆಗೆ “ಯೋಧರ ಆಹಾರ ಪದ್ಧತಿ”ಗಳ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅವರು ಹೇಳುವ ಪ್ರಕಾರ, “ದೇಶ ಕಾಯುವ ಯೋಧರಿಗೆ ಆರೋಗ್ಯ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಗುಂಡುಗಳಿಗಿಂತ ಅಪಾಯಕಾರಿಯಾಗಿರುವ ಹವಾಮಾನದಲ್ಲಿ ಬದುಕುವುದು ಸುಲಭದ ಮಾತಲ್ಲ. ಮೈನಸ್ 40- 50 ಡಿಗ್ರಿ ತಾಪಮಾನ ಇರುವಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಅವರ ಆಹಾರ ಪದ್ಧತಿ, ವ್ಯಾಯಾಮ ಎಲ್ಲವೂ ಕಟ್ಟುನಿಟ್ಟಾಗಿ ಇದ್ದರೆ ಮಾತ್ರ ಯೋಧನಾಗಲು ಸಾಧ್ಯವಾಗುತ್ತದೆ. ಹಾಗಾಗಿ ಅವರು ಸೇವನೆ ಮಾಡುವ ಆಹಾರ ಅವರನ್ನು ಕಾಪಾಡುತ್ತದೆ. ಕಾಶ್ಮೀರ, ಲಡಾಕ್ ಇನ್ನಿತರ ಯಾವುದೇ ಪ್ರದೇಶಗಳಲ್ಲಿದ್ದರೂ ಸೈನಿಕರಿಗೆ ಆಹಾರ ನೀಡುವ ಪರಿ ಒಂದೇ ಆಗಿರುತ್ತದೆ ಅಂದರೆ ಅವರಿಗೆ ಅಗತ್ಯವಿರುವಷ್ಟು ಆಹಾರವನ್ನು ನೀಡಲಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ಎಲ್ಲಾ ರೀತಿಯ ವಸ್ತುಗಳನ್ನು ಕೂಡ ಅವರಿಗೆ ನೀಡಲಾಗುತ್ತದೆ” ಎಂದರು.
“ಈ ಸಮಯದಲ್ಲಿ ಆದಷ್ಟು ಪೌಷ್ಟಿಕಾಂಶ ಭರಿತ ಆಹಾರಗಳನ್ನು ನೀಡಲಾಗುತ್ತದೆ. ಒಂದು ದಿನಕ್ಕೆ ಬೇಕಾಗುವಂತಹ ಆಹಾರಗಳನ್ನು ಕೊಡಲಾಗುತ್ತದೆ ಅದರಲ್ಲಿಯೂ ಡ್ರೈ ಫ್ರೂಟ್ಸ್ ಮತ್ತು ಕಡಲೆಕಾಯಿ, ನೆಲ್ಲಿ ಹೀಗೆ ಬೇರೆ ಬೇರೆ ರೀತಿಯ ಧಾನ್ಯಗಳನ್ನು ಸೇರಿಸಿ ಪೌಷ್ಟಿಕಾಂಶ ಯುಕ್ತವಾದ ಲಾಡು ಅಥವಾ ಚಾಕಲೇಟ್ ಮಾದರಿಯ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತದೆ. ಇದನ್ನು ಯುದ್ಧದ ಸಮಯದಲ್ಲಿ ಯೋಧರಿಗೆ ನೀಡಲಾಗುತ್ತದೆ. ಇದರಲ್ಲಿ ಎಲ್ಲಾ ರೀತಿಯ ಶಕ್ತಿ ವರ್ಧಕ ಪದಾರ್ಥಗಳಿರುವುದರಿಂದ, ಬೇಗ ಹಸಿವಾಗುವುದಿಲ್ಲ ಜೊತೆಗೆ ಊಟ, ತಿಂಡಿಗೆ ತುಂಬಾ ಸಮಯ ಇಲ್ಲದಿರುವಾಗ ಇದು ತುಂಬಾ ಉಪಯೋಗವಾಗುತ್ತದೆ. ಅಲ್ಲದೆ ಇವುಗಳ ಜೊತೆಗೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಆಹಾರವಿರುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ದೇಶಾಭಿಮಾನ ಹಾಗೂ ಸೈನಿಕರ ಬಗೆಗಿನ ಮಹಾನ್ ವ್ಯಕ್ತಿಗಳ ನುಡಿಮುತ್ತುಗಳಿವು
“ನನ್ನ ಅಷ್ಟು ವರ್ಷದ ಅನುಭವ ತುಂಬಾ ಅಮೂಲ್ಯವಾದದ್ದು. ಈಗಲೂ ಜನರು ನಮ್ಮನ್ನು ಯಾವಾಗಲೂ ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಾರೆ. ಎಷ್ಟೇ ಕಷ್ಟ ಬರಲಿ ಎಲ್ಲರೂ ಜೊತೆ ನಿಲ್ಲುತ್ತಾರೆ. ಒಬ್ಬ ಯೋಧನಿಗೆ ಎಲ್ಲರ ಪ್ರೀತಿ, ಮಮತೆ ಸಿಗುತ್ತದೆ. ಗೌರವಕ್ಕಿಂತಲೂ ಹೆಚ್ಚಾಗಿ ಅವರು ನೀಡುವ ಆ ಬಾಂಧವ್ಯಕ್ಕೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ. 29 ವರ್ಷ ನನ್ನ ಜೀವನದ ಮಹತ್ತರ ಘಟ್ಟ. ನನಗೆ ಎಂದಿಗೂ ಯಾವುದಕ್ಕೂ ಕಡಿಮೆಯಾಗಿಲ್ಲ. ನನ್ನ ಆ ದಿನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಪ್ರತಿಯೊಬ್ಬರೂ ಕೂಡ ಯೋಧರಂತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಳ್ಳೆ ರೀತಿಯ ಜೀವನಶೈಲಿ, ನಿಯಮಿತ ವ್ಯಾಯಾಮ ಎಲ್ಲವೂ ಮುಖ್ಯವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಕಟ್ಟುನಿಟ್ಟಾದ ಆಹಾರ ಪದ್ದತಿಯನ್ನು ರೂಢಿಸಿಕೊಂಡರೆ ಎಲ್ಲವೂ ಸಾಧ್ಯವಾಗುತ್ತದೆ” ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ