
ಬೆಂಗಳೂರು, ಏಪ್ರಿಲ್ 11: ರಸ್ತೆ ಅಪಘಾತಗಳನ್ನು (Road Accidents) ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರ ಪೊಲೀಸರು (Traffic Police) ಅನೇಕ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ದಿನನಿತ್ಯ ಆಕ್ಸಿಡೆಂಟ್ಗಳು ಮಾತ್ರ ತಪ್ಪುತ್ತಿಲ್ಲ. ಗುರುವಾರ ಒಂದೇ ದಿನ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 17 ಜನ ಅಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ, ಕರ್ನಾಟಕದ (Karnataka) ಪಾಲಿಗೆ ಗುರುವಾರ ಕರಾಳ ದಿನವಾಗಿ (Black Thursday) ಮಾರ್ಪಟ್ಟಿದೆ.
ಸರ್ಕಾರಿ ಬಸ್ ಡಿಕ್ಕಿಯಾಗಿ ಮಹೀಂದ್ರ ಪಿಕ್ಅಪ್ ವಾಹನದಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದ ಬಳಿ ಸಂಭವಿಸಿದೆ. ಮೃತಪಟ್ಟವರು ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಫತ್ತರಗಿಗೆ ಹೋಗಿ ಬರುತ್ತಿದ್ದಾಗ ದುರಂತ ಸಂಭವಿಸಿದೆ.
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆ ಬಳಿ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ತುಮಕೂರಿಗೆ ತೆರಳುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಗೋಪಾಲ್, ಪತ್ನಿ ಶಶಿಕಲಾ ಹಾಗೂ ಮಗಳು ದೀಪಾ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಕೊನೆಯುಸಿರೆಳೆದಿದ್ದಾರೆ. ರಜೆ ಕಾರಣ ಬೆಂಗಳೂರಿಂದ ಸ್ವಗ್ರಾಮಕ್ಕೆ ಬಂದಿದ್ದ ಅಜಯ್ ಹಾಗೂ ಓಬಳೇಶ್ ಮೃತಪಟ್ಟಿದ್ದಾರೆ. ಅದೇ ರೀತಿ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಬೂಡದಮಿಟ್ಟೆ ಕೆರೆಯಲ್ಲಿ ಈಜಲು ಹೋಗಿ ತಂದೆ ಮಗ ಸೇರಿ ಮೂವರು ಸಾವನ್ನಪ್ಪಿದ್ದಾರೆ. ವಾಟರ್ ಮ್ಯಾನ್ ಆಗಿದ್ದ ರಮೇಶ್, ಮಗ ಅಗಸ್ತ್ಯ ಹಾಗೂ ಸ್ನೇಹಿತ ಶರಣ್ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗರಿಘಟ್ಟ ಗ್ರಾಮದಲ್ಲಿ ವಿದ್ಯುತ್ ಶಾಕ್ನಿಂದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮರಗೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಸೃಜನ್ ಹಾಗೂ ಸಂಜಯ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಚಿಕ್ಕಬಳ್ಳಾಪುರ ತಾಲೂಕಿನ ಪೊಶೆಟ್ಟಿಹಳ್ಳಿ ಬಳಿ ಇನ್ನೊವಾ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಂದೆಡೆ, ಶಿವಮೊಗ್ಗದ ತೀರ್ಥಹಳ್ಳಿ ಸಮೀಪದ ಶಿವರಾಜಪುರ ಬಳಿ ಕಾರೊಂದು ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಶಾಶ್ವತ್ ಮೃತಪಟ್ಟಿದ್ದಾನೆ. ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅತ್ತ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಕಲಮರಹಳ್ಳಿ ಗ್ರಾಮದ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Published On - 6:52 am, Fri, 11 April 25