Bengaluru Mysuru Train: ಬೆಂಗಳೂರು ಮೈಸೂರು ರೈಲು ಪ್ರಯಾಣಿಕರಿಗೆ ಸಂಕಷ್ಟ
ಮೈಸೂರು ಬೆಂಗಳೂರು ಮೆಮು ರೈಲು: ಅದು ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಅರಮನೆ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮೆಮು ಪ್ಯಾಸೆಂಜರ್ ರೈಲು. ಈ ರೈಲು ಬಡವರ ಪಾಲಿನ ಐರಾವತ ಎಂದೇ ಹೇಳಬಹುದು. ಅಷ್ಟೊಂದು ದುಬಾರಿ ಏನಿಲ್ಲ, ಕೈಗೆಟುಕುವ ದರದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು. ಆದರೆ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪ್ರತಿದಿನ ಉಸಿರುಕಟ್ಟಿಕೊಂಡು ಪ್ರಯಾಣ ಮಾಡುವ ಹಾಗಾಗಿದೆ.

ಮೈಸೂರು, ಏಪ್ರಿಲ್ 9: ಮೆಮು ಪ್ಯಾಸೆಂಜರ್ ರೈಲು (Memu Passenger Train) ಇದು ಬಡವರು ಮತ್ತು ಮಧ್ಯಮ ವರ್ಗದವರ ಪಾಲಿನ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆ. ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. 2018 ರಲ್ಲಿ ರೈಲ್ವೆ ಇಲಾಖೆ ಮೈಸೂರು ಟು ಬೆಂಗಳೂರು ನಡುವೆ ಈ ರೈಲಿನ (Mysuru Bengaluru Train) ಸೇವೆಯನ್ನು ಆರಂಭಿಸಿತು. ಆರಂಭದಲ್ಲಿ 20 ಕೋಚ್ಗಳೊಂದಿಗೆ ಈ ರೈಲು ಸಂಚಾರ ಆರಂಭಿಸಿತು. ಆಮೇಲೆ 16 ಕೋಚ್ಗೆ ಇಳಿಕೆ ಮಾಡಲಾಯಿತು. ಕಳೆದ ಆರು ತಿಂಗಳಿನಿಂದ 12 ಕೋಚ್ಗಳಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಈ ಮೆಮು ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂತಾಗಿದೆ. ಉಸಿರಾಡಲು ಜಾಗವಿಲ್ಲದಷ್ಟು ಜನ ಪ್ರಯಾಣ ಮಾಡುತ್ತಿದ್ದಾರೆ.
ಮೈಸೂರು ಬೆಂಗಳೂರು ರೈಲಲ್ಲಿ ಕೋಚ್ ಕಡಿಮೆ ಮಾಡಿದ್ದಕ್ಕೆ ಪ್ರಯಾಣಿಕರಿಂದ ಆಕ್ರೋಶ
ಮೆಮು ರೈಲಿನ ಕೋಚ್ ಕಡಿಮೆ ಮಾಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಈ ರೈಲಿನಲ್ಲಿ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ನಾವು ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಅಲ್ಲದೆ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೂ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕ ರಂಜಿತ್ ಕುಮಾರ್ ಎಂಬವರು ಹೇಳಿದ್ದಾರೆ.
ಕೇವಲ 35 ರೂ.ಗೆ ಮೈಸೂರು ಬೆಂಗಳೂರು ಪ್ರಯಾಣ
ಈ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ ಕೇವಲ 35 ರೂಪಾಯಿ ಮಾತ್ರ. ಬೆಳಗ್ಗೆ 6:10 ಕ್ಕೆ ಮೈಸೂರಿನಿಂದ ಹೊರಡುತ್ತದೆ, ಇತ್ತ ರಾತ್ರಿ 7 ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ಹೊರಡುತ್ತದೆ. ಬೆಂಗಳೂರು ಟು ಮೈಸೂರು ನಡುವೆ ಇರುವ ಒಟ್ಟು 22 ಸ್ಟೇಷನ್ ನಲ್ಲೂ ಈ ರೈಲು ಸ್ಟಾಪ್ ನೀಡುತ್ತದೆ. ಇದರಿಂದ 2500 ರಿಂದ 3 ಸಾವಿರ ಪ್ರಯಾಣಿಕರು ಪ್ರತಿನಿತ್ಯ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರೈಲಿನಲ್ಲಿ ಪ್ರಯಾಣಿಕರು ನಿಲ್ಲಲೂ ಆಗದೆ ಕೂರಲೂ ಆಗದೆ ಪರದಾಡುವಂತಾಗಿದೆ.
ಇದನ್ನೂ ಓದಿ: ಕರ್ನಾಟಕ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ರೈಲ್ವೆ: ಈ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ
ಒಟ್ಟಿನಲ್ಲಿ ಈ ಮೆಮು ರೈಲಿನಲ್ಲಿ ಪ್ರತಿನಿತ್ಯ ಓವರ್ ಲೋಡ್ ಆಗುತ್ತಿದ್ದು, ಇದರಿಂದ ಪ್ರಯಾಣಿಕರು ಉಸಿರಾಡಲೂ ಆಗದೆ ಸಂಕಷ್ಟ ಎದುರಿಸುವಂತಾಗಿರುವುದಂತೂ ಸುಳ್ಳಲ್ಲ. ಕೂಡಲೇ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕ್ರಮ ಗೊಳ್ಳಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 am, Wed, 9 April 25