ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವು: IAS ಅಧಿಕಾರಿ ಕುಟುಂಬಕ್ಕೆ ಸಿಗುತ್ತಾ ಅನುಕಂಪದ ನೌಕರಿ?

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ಮಂಗಳವಾರ ಸಂಜೆ ಮೃತಪಟ್ಟಿದ್ದು, ಬುಧವಾರ ಅವರ ಅಂತ್ಯಕ್ರಿಯೆ ನಡೆದಿದೆ. ಇನ್ನು ಸರಳ ಸಜ್ಜನಿಕೆ ವ್ಯಕ್ತಿತ್ವದ ಅಧಿಕಾರಿ ಅಗಲಿಕೆಗೆ ಇಡೀ ಕರುನಾಡೇ ಮಮ್ಮಲ ಮರುಗಿ ಕಂಬನಿ ಮಿಡಿದಿದೆ. ಅಗಲಿದೆ ಐಎಎಸ್ ಅಧಿಕಾರಿ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕೆಂಬ ಕೂಗು ಕೇಳಿಬಂದಿದೆ.

ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವು: IAS ಅಧಿಕಾರಿ ಕುಟುಂಬಕ್ಕೆ ಸಿಗುತ್ತಾ ಅನುಕಂಪದ ನೌಕರಿ?
Mahantesh Bilagi

Updated on: Nov 27, 2025 | 9:48 PM

ಬೆಂಗಳೂರು, (ನವೆಂಬರ್ 27): ಕಾರು ಅಪಘಾತದಲ್ಲಿ (Car Accident)  ಸಾವನ್ನಪ್ಪಿರುವ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh bilagi) ಕುಟುಂಬಕ್ಕೆ ಅನುಕಂಪದ ಸರ್ಕಾರಿ ನೌಕರಿ ನೀಡಬೇಕೆಂಬ ಕೂಗು ಕೇಳಿಬಂದಿದೆ. ಮಹಾಂತೇಶ್ ಬೀಳಗಿ 2012ರ ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿ. ಅವರ ಸರ್ಕಾರಿ ಸೇವೆ ಇನ್ನೂ ಸಹ ಬಾಕಿ ಇತ್ತು. ಅವರ ಅಕಾಲಿನ ಸಾವಿನ ಹಿನ್ನಲೆಯಲ್ಲಿ ಅವರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆಯಲಾಗಿದೆ.

ಈ ಸಂಬಂಧ ಕರ್ನಾಟಕ ಬಿಜೆಪಿ ಅಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು. ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿಯವರ ಅಕಾಲಿಕ ನಿಧನದಿಂದ ನೊಂದಿರುವ ಕುಟುಂಬದ ಕಣ್ಣೀರು ಒರೆಸಿ, ಸಾಂತ್ವನ ಹೇಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಅಗಲಿದ ಅಧಿಕಾರಿಗಳ ಕುಟುಂಬ ವರ್ಗದವರಿಗೆ ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿದ್ದು, ಅದಕ್ಕೆ ಅನುಗುಣವಾಗಿ ಶ್ರೀಯುತ ಬೀಳಗಿಯವರ ಕುಟುಂಬದ ಸದಸ್ಯರೊಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಪತ್ರದ ಮೂಲಕ ಮಾಡಿದ್ದಾರೆ.

ಇದನ್ನೂ ಓದಿ: ಮೂವರು ಸಹೋದರರು ದುರಂತ ಸಾವು: IAS ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು

ದಿ.ಮಹಾಂತೇಶ್ ಬೀಳಗಿಯವರ ಆದರ್ಶಪ್ರಾಯ ಕಾರ್ಯನಿರ್ವಹಣೆ, ಸೇವೆಗಳ ಹಿನ್ನಲೆಯಲ್ಲಿ, ಇದನ್ನು ವಿಶೇಷ ಪ್ರಕರಣವೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಶೀಘ್ರದಲ್ಲಿ ಪೂರಕವಾಗಿ ಮಾನವೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ವಿಜಯೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ

ವಿಜಯೇಂದ್ರ ಪತ್ರದ ವಿವರ

ಬಿ.ವೈ.ವಿಜಯೇಂದ್ರ ಬರೆದಿರುವ ಪತ್ರವು ದಿ. ಶ್ರೀ ಮಹಾಂತೇಶ ಬೀಳಗಿ, ಐಎಎಸ್ ಅಧಿಕಾರಿಯವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕ್ಲಾಸ್ -1 ಅಧಿಕಾರಿ ಹುದ್ದೆಯನ್ನು ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವುದು ತಮಗೆ ಗೊತ್ತಿರುವ ವಿಚಾರ.


ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೇವಲ ಸರಕಾರಿ ಕೆಲಸ ಎಂದು ಪರಿಗಣಿಸದೆ ಬಡವರ ಅಶಕ್ತರ ಅಭಿವೃದ್ಧಿಗಾಗಿ ಅಂತಕರಣದಿಂದ ಕೆಲಸ ಮಾಡಿದ ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟು ಜನಸೇವೆಗೈದ ಮಹಾಂತೇಶ್ ಬೀಳಗಿಯವರು ಒಬ್ಬ ಆದರ್ಶ ಅಧಿಕಾರಿಯಾಗಿದ್ದರು. ಅವರ ಆಕಾಲಿಕ ನಿಧನವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ನಷ್ಟವನ್ನುಂಟು ಮಾಡಿದೆ.

ಹಿಂದೆ ಅಧಿಕಾರಿಗಳು ಅಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಕ್ಲಾಸ್-1 ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿವೆ. ಅದರಂತೆ ಶ್ರೀ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅವರ ಪತ್ನಿ ಅಥವಾ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್ -1 ಅಧಿಕಾರಿ ಹುದ್ದೆಯನ್ನು ನೀಡುವಂತೆ ತಮ್ಮನ್ನು ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಾ ಎನ್ನುವುದನ್ನು ಕಾದುಬೋಡಬೇಕಿದೆ.