
ಬೆಂಗಳೂರು, (ಆಗಸ್ಟ್ 13): “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ (sandhya kiran health scheme) ಕರ್ನಾಟಕ ಸಚಿವ ಸಂಪುಟ (karnataka Cabinet) ಅನುಮೋದನೆ. ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರಿಗೆ (Retired Government Worker) ಸಮಗ್ರ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ, AB-ArK ಯೋಜನೆಯ ನಿಯಮಾವಳಿಗಳನ್ವಯ “ಸಂಧ್ಯಾ ಕಿರಣ” ವಂತಿಕೆ ನಗದುರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಡಿಕೆ ಶಿವಕುಮಾರ್ (DK Shivakumar) ಸಂಪುಟ ಇಂದು (ಆಗಸ್ಟ್ 13) ಒಪ್ಪಿಗೆ ನೀಡಿದೆ.
70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆ ಅನ್ವಯವಾಗಲಿದೆ. ಇನ್ನು ಈ ಯೋಜನೆಯು ರಾಜ್ಯ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಕೈಗೆಟುಕುವ ಹಾಗೂ ನಗದುರಹಿತ ಆರೋಗ್ಯ ಸೇವೆಯನ್ನು ಖಚಿತಪಡಿಸುವ ಮಹತ್ವದ ಸಾಮಾಜಿಕ ಭದ್ರತಾ ಕ್ರಮವಾಗಿದ್ದು, ಆರೋಗ್ಯ ವೆಚ್ಚದಿಂದ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.
ಯೋಜನೆಯಡಿ ವಾರ್ಷಿಕವಾಗಿ ಅಂದಾಜು 117 ಕೋಟಿ ರೂ. ವಂತಿಕೆ ಸಂಗ್ರಹವಾಗುವ ನಿರೀಕ್ಷೆಯಿದ್ದು, ವಾರ್ಷಿಕ ಚಿಕಿತ್ಸಾ ವೆಚ್ಚವು ಸುಮಾರು 81.75 ಕೋಟಿ ರೂ. ಎಂದು ಅಂದಾಜಿಸಲಾಗಿದೆ. AB-ArK ನೀತಿಯನ್ವಯ, ಚಿಕಿತ್ಸಾ ವೆಚ್ಚದ 70% ಫಲಾನುಭವಿಗಳ ವಂತಿಕೆಯಿಂದ ಮತ್ತು 30% ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ಸುಮಾರು 57.22 ಕೋಟಿ ರೂ. ಫಲಾನುಭವಿಗಳ ಪಾಲು ಹಾಗೂ 24.53 ಕೋಟಿ ರೂ. ರಾಜ್ಯ ಸರ್ಕಾರದ ಪಾಲು ಇರಲಿದೆ.
ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಪಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, corpus ಬಳಕೆ ಪ್ರಮಾಣವು ಶೇ.85ಕ್ಕಿಂತ ಹೆಚ್ಚಾದಲ್ಲಿ ವಂತಿಕೆ ದರವನ್ನು 0.05% (5 basis points) ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.
“ಸಂಧ್ಯಾ ಕಿರಣ” ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಜಾರಿಗೊಳಿಸಲಾಗುವುದು. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ, ನಗದುರಹಿತ ಚಿಕಿತ್ಸಾ ಸೌಲಭ್ಯ, ಕ್ಷೇಮ್ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಿ ಕೈಗೊಳ್ಳಲಾಗುತ್ತದೆ.