ಮತ್ತೆ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘ: ಈ ಬಾರಿ ಅಧಿಕಾರಿಗಳೇ ಹಣ ಕೇಳ್ತಿದ್ದಾರೆ ಎಂದ ಕೆಂಪಣ್ಣ

| Updated By: ರಮೇಶ್ ಬಿ. ಜವಳಗೇರಾ

Updated on: Feb 08, 2024 | 4:38 PM

Karnataka '40% commission': ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಗ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿತ್ತು. ಇದೀಗ ಕಾಂಗ್ರೆಸ್​ ಸೆರ್ಕಾರದ ಅವಧಿಯಲ್ಲೂ ಸಹ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಆದ್ರೆ, ಈ ಸರ್ಕಾರದಲ್ಲಿ ಶಾಸಕರು, ಸಚಿವರು ಬದಲಾಗಿ ಅಧಿಕಾರಿಗಳೇ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಇದೇ ವೇಳೆ ಪ್ಯಾಕೇಜ್ ಟೆಂಡರ್ ವಿರುದ್ಧವೂ ಸಹ ಗುಡುಗಿದ್ದಾರೆ. ಅಲ್ಲದೇ ಹೋರಾಟಕ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಮತ್ತೆ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘ: ಈ ಬಾರಿ ಅಧಿಕಾರಿಗಳೇ ಹಣ ಕೇಳ್ತಿದ್ದಾರೆ ಎಂದ ಕೆಂಪಣ್ಣ
ಕೆಂಪಣ್ಣ
Follow us on

ಬೆಂಗಳೂರು, (ಫೆಬ್ರವರಿ 08): ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್​  ಕಮಿಷನ್ (40 Percent commission)ಆರೋಪ ಮಾಡಿದ್ದ ರಾಜ್ಯ ಗುತ್ತೆಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಸಹ ಕಮಿಷನ್ ಆರೋಪ ಮಾಡಿದ್ದಾರೆ. ಆದ್ರೆ, ಯಾವುದೇ ಶಾಸಕರು ಹಾಗೂ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ. ಬದಲಾಗಿ ಅಧಿಕಾರಗಳ ವಿರುದ್ಧ ಆರೋಪಿಸಿದ್ದಾರೆ. ಮೊದಲು(ಬಿಜೆಪಿ ಸರ್ಕಾರದ ಅವಧಿ) ಶಾಸಕರು ನೇರವಾಗಿ ಹಣ ಕೇಳುತ್ತಿದ್ದರು. ಈಗ ಅಧಿಕಾರಿಗಳೇ ಹಣ ಕೇಳ್ಳುತ್ತಿದ್ದಾರೆ. ಅದೇ ಪರಿಸ್ಥಿತಿ 40 % ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಕಂಟಿನ್ಯೂ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ನಿಮಗೆ ಕೆಲಸ ಬೇಕು ಅಂದ್ರೆ ಅಧಿಕಾರಿಗಳೇ ಹಣ ಕೇಳುತ್ತಿದ್ದಾರೆ. ಹಣ ಕೊಡಿ ಅಂತ ಶಾಸಕರು ಸಚಿವರು ಯಾರು ಕೇಳಿಲ್ಲ. ಆದ್ರೆ ಈ ಸರ್ಕಾರದಲ್ಲಿ ಹಣ ಕೊಡುವಂತೆ ಅಧಿಕಾರಿಗಳೇ ನೇರವಾಗಿ ಕೇಳುತ್ತಿದ್ದಾರೆ. ಸದ್ಯದಲ್ಲೇ ಅಧಿಕಾರಿಗಳ ಹೆಸರುಗಳನ್ನ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಗುತ್ತಿಗೆದಾರರ 20 ಸಾವಿರ ಕೋಟಿ ರೂ. ಬಾಕಿ, 30 ದಿನದಲ್ಲಿ ಬಗೆಹರಿಸದಿದ್ದರೆ ರಾಜ್ಯಾದ್ಯಂತ ಧರಣಿ: ಕೆಂಪಣ್ಣ ಎಚ್ಚರಿಕೆ

ಪ್ಯಾಕೇಜ್ ಟೆಂಡರ್ ವಿರುದ್ಧ ಗುಡುಗಿದ ಕೆಂಪಣ್ಣ

ಒಂದು ವಾರದಲ್ಲಿ ಬಿಬಿಎಂಪಿ ‌ಯಲ್ಲಿ 300 ಕೋಟಿ ಪ್ಯಾಕೇಜ್ ಟೆಂಡರ್ ನ್ನ ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ.  ವಿವಿಧ ಇಲಾಖೆಯಲ್ಲಿ ಅನವಶ್ಯಕ ಪ್ಯಾಕೇಜ್ ಟೆಂಡರ್ ನಡೆದಿವೆ. ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಗೊಳಿಸಬೇಕು. ಹಲವು ಬಾರಿ ಸಿಎಂ ಅವರನ್ನ ಭೇಟಿ ಮಾಡಿದ್ದು, ಟೆಂಡರ್ ರದ್ದುಗೊಳಿಸಲು ಮನವಿ ಮಾಡಿದ್ದೇವೆ. ಅಲ್ಲದೇ ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಇಂಜಿನಿಯರ್​ಗೆ ಕೇಳಿದ್ರೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ. ಅವರನ್ನ ಪ್ರಶ್ನಿಸಿದ್ರೆ ಮೇಲಾಧಿಕಾರಿಗಳ ಕಡೆ ತೋರಿಸ್ತಾರೆ. ಅಧಿಕಾರಿಗಳನ್ನ ಕೇಳಿದ್ರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡುತ್ತಾರೆ ಎಂದು ಪ್ಯಾಕೇಜ್ ಟೆಂಡರ್​​ಗಳ ವಿರುದ್ಧ ಗುಡುಗಿದರು.

ಹೋರಾಟದ ಎಚ್ಚರಿಕೆ

ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬಿಬಿಎಂಪಿ. ವಸತಿ ಶಿಕ್ಷಣ ಸಂಸ್ಥೆ ಸೇರಿ ಹಲವು ಇಲಾಖೆಗಳಲ್ಲಿ ಪ್ಯಾಕೇಜ್​ ಟೆಂಡರ್​ ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗಿದೆ. ನೆರೆ ರಾಜ್ಯದ ಗುತ್ತಿಗೆ ಅನಕೂಲ ಮಾಡಿಕೊಡಲು ಪ್ಯಾಕೇಜ್ ಟೆಂಡರ್ ಮಾಡುತ್ತಿದ್ದಾರೆ. ಪ್ಯಾಕೇಜ್ ಟೆಂಡರ್ ಪದ್ಧತಿ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ. ತಮ್ಮ ಆಪ್ತರಾದ ಗುತ್ತಿಗೆ ಕಾಮಗಾರಿ‌ ನೀಡಲು ಮುಂದಾಗಿದ್ದಾರೆ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ. ಎಲ್ಲಾ ರೀತಿಯ ಕಾಮಗಾರಿಗಳ ಟೆಂಡರ್ ಮೂಲಕ ಹಂಚಿಕೆ ಮಾಡಿದ್ರೆ ನ್ಯಾಯ ಸಿಗುತ್ತೆ. ಒಂದು ವೇಳೆ ಪ್ಯಾಕೇಜ್ ಟೆಂಡರ್ ರದ್ದು ಮಾಡದೇ ಇದ್ರೆ ಹೋರಾಟ ಮಾಡಲು ಕರೆ ಕೊಡುತ್ತೇವೆ ಎಂದು ಎಚ್ಚರಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೂ ಕಮಿಷನ್ ಆರೋಪ

ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಶಾಸಕರು ಹಾಗೂ ಸಚಿವರು 40 ಪರ್ಸೆಂಟ್ ಹಣ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಅಂದಿನ ಸಚಿವರಾಗಿದ್ದ ಮುನಿರತ್ನ ಅವರ ಹೆಸರನ್ನೂ ಸಹ ಬಹಿರಂಗಪಡಿಸಿದ್ದರು. ಬಳಿಕ ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್​ 40 ಪರ್ಸೆಂಟ್​ ಸರ್ಕಾರ ಎಂದು ಆರೋಪಿಸಿತ್ತು. ಅಲ್ಲದೇ ಬಿತ್ತಿಪತ್ರಗಳನ್ನು ಬೀದಿ ಬೀದಿಗಳಲ್ಲಿ ಅಂಟಿಸಿ ಬಿಜೆಪಿಯ ಭ್ರಷ್ಟಾಚಾರವನ್ನು ಎತ್ತಿ ತೋರಿಸಿತ್ತು, ಅಲ್ಲದೇ ಕ್ಯೂ ಆರ್ ಕೋಡ್ ಮೂಲಕ ಪೇ ಸಿಎಂ ಎನ್ನುವ ಅಭಿಯಾನವನ್ನು ಸಹ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ