
ಬೆಂಗಳೂರು, ಜೂನ್ 2: ನೈಋತ್ಯ ಮುಂಗಾರು ಮಳೆ (Monsoon Rain) ಕರ್ನಾಟಕದಲ್ಲಿ ಚುರುಕುಪಡೆದುಕೊಂಡ ಬೆನ್ನಲ್ಲೇ ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯಗಳ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಕೊಡಡು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪರಿಣಾಮವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್ಎಸ್ ಡ್ಯಾಂನಲ್ಲಿ (KRS Dam) ನೀರಿನ ಮಟ್ಟ 14 ಅಡಿ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಇತರ ಜಲಾಶಯಗಳಲ್ಲೂ ನೀರಿನ ಮಟ್ಟ ಇದೇ ರೀತಿ ಏರಿಕೆಯಾಗಿದೆ.
ಈ ವರ್ಷ ಅವಧಿಗೂ ಮುನ್ನ ಮುಂಗಾರು ಮಳೆ ಕರ್ನಾಟಕ ಪ್ರವೇಶಿಸಿದೆ. ಮಾನ್ಸೂನ್ ಮಳೆ ಆರಂಭವಾದ ಸಂದರ್ಭದಲ್ಲಿ, ಮೇ 24 ರಂದು ಕೆಆರ್ಎಸ್ ಡ್ಯಾಂ ನೀರಿನ ಮಟ್ಟವು 89.1 ಅಡಿಗೆ ಇಳಿದಿತ್ತು. ಈ ಜಲಾಶಯದ ಗರಿಷ್ಠ ಸಾಮರ್ಥ್ಯ 124.8 ಅಡಿ ಆಗಿದೆ. ಜೂನ್ 1 ರಂದು ಭಾನುವಾರ ಅಣೆಕಟ್ಟೆಯ ಒಳಹರಿವು 17,544 ಕ್ಯೂಸೆಕ್ ಆಗಿದ್ದು, ನೀರಿನ ಮಟ್ಟವು 103.7 ಅಡಿಗಳಷ್ಟಿತ್ತು.
ಕೇರಳದ ವಿವಿಧ ಪ್ರದೇಶಗಳಲ್ಲಿಯೂ ಭಾರಿ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಎಚ್ಡಿ ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯದ ನೀರಿನ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ ನೀರಿನ ಮಟ್ಟ ನಾಲ್ಕು ಅಡಿಗಳಷ್ಟು ಏರಿಕೆಯಾಗಿದೆ.
ಹೇಮಾವತಿ ಡ್ಯಾಂನಲ್ಲಿ ಕಳೆದ ವಾರ ನೀರಿನ ಮಟ್ಟವು ಏಳು ಅಡಿಗಳಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಜೂನ್ 2 ರಂದು 2,489 ಕ್ಯೂಸೆಕ್ಗಳ ಒಳಹರಿವು ದಾಖಲಾಗಿದ್ದು, ಅಣೆಕಟ್ಟಿನ ನೀರಿನ ಮಟ್ಟವು 2,905.97 ಅಡಿಗಳಷ್ಟಾಗಿದೆ.
ಇದನ್ನೂ ಓದಿ: ನಾಲ್ಕೇ ದಿನದಲ್ಲಿ ಕೆಆರ್ಎಸ್ಗೆ ಹರಿದುಬಂತು 11 ಅಡಿ ನೀರು: ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ
ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ 9 ಅಡಿ ಏರಿಕೆಯಾಗಿದೆ. ಮೇ 24 ರಂದು ನೀರಿನ ಮಟ್ಟ 2,832.78 ಅಡಿಗಳಷ್ಟಿತ್ತು. ಜೂನ್ 2ರ ವೇಳೆಗೆ 2,849.85 ಅಡಿಗೆ ಏರಿಕೆಯಾಗಿದೆ.
ಮೇ 25 ರಿಂದ 31 ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ 298 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ರಾಜ್ಯಾದ್ಯಂತ ಸರಾಸರಿ ಮಳೆ 92 ಮಿ.ಮೀ. ಆಗಿದೆ. ಇದು ಅಣೆಕಟ್ಟೆಗಳ ನೀರಿನ ಮಟ್ಟ ಹೆಚ್ಚಳಕ್ಕೂ ನೆರವಾಗಿದೆ.
Published On - 11:25 am, Mon, 2 June 25