ನಿಮ್ಮ ಕೃಷಿ ಜಮೀನಿಗೆ ಸಬ್ಸಿಡಿ ಪಂಪ್​ ಸೆಟ್​ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದ ರೈತರಿಗೆ ಸಬ್ಸಿಡಿ ದರದಲ್ಲಿ ಪಂಪ್‌ಸೆಟ್‌ ಪಡೆಯಲು ಕೇಂದ್ರದ ಪಿಎಂ-ಕುಸುಮ್ ಮತ್ತು ರಾಜ್ಯದ ಗಂಗಾ ಕಲ್ಯಾಣ ಯೋಜನೆಗಳು ನೆರವಾಗಿವೆ. ಸೌರಶಕ್ತಿ ಅಥವಾ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳಿಗೆ ಶೇ. 60 ರಿಂದ 80ರವರೆಗೆ ಸಹಾಯಧನ ಲಭ್ಯವಿದೆ. ಹಾಗಾದೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಹಂತಹಂತವಾಗಿ ಇಲ್ಲಿ ವಿವರಿಸಲಾಗಿದೆ.

ನಿಮ್ಮ ಕೃಷಿ ಜಮೀನಿಗೆ ಸಬ್ಸಿಡಿ ಪಂಪ್​ ಸೆಟ್​ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ?
ಪಂಪ್‌ಸೆಟ್
Image Credit source: Getty images

Updated on: Jul 05, 2026 | 8:36 PM

ಮುಖ್ಯಾಂಶಗಳು

  • ಕೃಷಿ ಜಮೀನಿಗೆ ಸಬ್ಸಿಡಿ ಪಂಪ್‌ಸೆಟ್
  • ಪಿಎಂ-ಕುಸುಮ್ ಯೋಜನೆಯಡಿ ಪಂಪ್‌ಸೆಟ್‌ಗೆ ಶೇ.60 ಸಬ್ಸಿಡಿ
  • ರೈತರು ಸಬ್ಸಿಡಿ ಪಂಪ್‌ಸೆಟ್‌ ಪಡೆಯಲು ಅರ್ಹತೆ ಮತ್ತು ದಾಖಲೆಗಳೇನು?

ಬೆಂಗಳೂರು, ಜುಲೈ 05: ರೈತರು ತಮ್ಮ ಕೃಷಿ ಜಮೀನಿಗೆ ಸಬ್ಸಿಡಿ ದರದಲ್ಲಿ ಪಂಪ್‌ಸೆಟ್‌ಗಳನ್ನು (Pump Set) (ಸೌರಶಕ್ತಿ ಅಥವಾ ವಿದ್ಯುತ್ ಚಾಲಿತ) ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರದ ‘ಪಿಎಂ-ಕುಸುಮ್’ ಮತ್ತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ‘ಗಂಗಾ ಕಲ್ಯಾಣ’ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಂಪ್‌ಸೆಟ್‌ಗಳನ್ನು ನೀಡಲಾಗುತ್ತಿದೆ. ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಚಾಲಿತ ಅಥವಾ ವಿದ್ಯುತ್ ಪಂಪ್‌ಸೆಟ್‌ಗಳನ್ನು ಒದಗಿಸುವ ಮೂಲಕ ಕೃಷಿಗೆ ನಿರಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಪಿಎಂ-ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ ಅಳವಡಿಕೆಗೆ ಶೇಕಡಾ 60 ರವರೆಗೆ ಸಬ್ಸಿಡಿ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಶೇಕಡಾ 80  ಸಬ್ಸಿಡಿಯೊಂದಿಗೆ ಉಚಿತವಾಗಿ ಪಂಪ್‌ಸೆಟ್‌ಗಳನ್ನು ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳು

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ವೃತ್ತಿಯಲ್ಲಿ ರೈತರಾಗಿಬೇಕು.
  • ರೈತರು ತಮ್ಮದೆ ಹೆಸರಿನಲ್ಲಿ ಸ್ವಂತ ಕೃಷಿ ಜಮೀನು ಹೊಂದಿರಬೇಕು.
  • ಕೃಷಿ ಜಮೀನಿನಲ್ಲಿ ನೀರಿನ ಮೂಲ ಅಂದರೆ ಬಾವಿ, ಕೊಳವೆಬಾವಿ ಹೊಂದಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ಹಾಗೂ ಎಸ್​​ಸಿ, ಎಸ್​​ಟಿ ರೈತರಿಗೆ ಹೆಚ್ಚಿನ ಆದ್ಯತೆ ಹಾಗೂ ಸಬ್ಸಿಡಿ ಸಿಗುತ್ತದೆ.

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು?

  • ಆಧಾರ್​ ಕಾರ್ಡ್​​
  • ಜಮೀನಿನ ನಕ್ಷೆ, ಆರ್​ಟಿಸಿ, ಪಹಣಿ
  • ಬ್ಯಾಂಕ್​ ಪಾಸ್​ಬುಕ್​​
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬಾವಿ ಅಥವಾ ಕೊಳವೆಬಾವಿ ಇರುವ ಬಗ್ಗೆ ದೃಢೀಕರಣ ಪತ್ರ
  • ಮತ್ತು ಪಾಸ್​ಪೋರ್ಟ್​ ಸೈಜ್​​ ಫೋಟೋ

ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಥವಾ ನಿಮ್ಮ ಭಾಗದಲ್ಲಿರುವ ವಿದ್ಯುತ್​​ ಸರಬರಾಜು ಕಂಪನಿಯ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ.
  • ಬಳಿಕ ಪಿಎಂ-ಕುಸುಮ್ ಯೋಜನೆ ಲಿಂಕ್​ ಮೇಲೆ ಕ್ಲಿಕ್​ ಮಾಡಿ, ಫ್ರೂಟ್ಸ್ ಐಡಿ ಮತ್ತು ಆಧಾರ್ ಕಾರ್ಡ್​​ ಬಳಸಿ ಲಾಗಿನ್​​ ಆಗಬೇಕು.
  • ನಂತರ ನಿಮ್ಮ ಜಮೀನಿನ ವಿವರ ಹಾಗೂ ಎಷ್ಟು ಹೆಚ್​​ಪಿ ಸಾಮರ್ಥ್ಯದ ಪಂಪ್‌ಸೆಟ್​​ ಬೇಕು ಎಂಬುವುದನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.
  • ಕೊನೆಯ ಹಂತದಲ್ಲಿ ಅರ್ಜಿ ಅಂಗೀಕಾರವಾದ ಬಳಿಕ ರೈತರು ತಮ್ಮ ಪಾಲಿನ ಬಾಕಿ ಹಣವನ್ನು ಪಾವತಿಸಬೇಕು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನಿಮ್ಮ ಭಾಗದಲ್ಲಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ.
  • ಸಬ್ಸಿಡಿಯಲ್ಲಿ ಡೀಸೆಲ್​​, ವಿದ್ಯುತ್​​​ ಪಂಪಸೆಟ್​ ವಿತರಣೆಯ ಯೋಜನೆ ಚಾಲ್ತಿಯಲ್ಲಿದ್ದರೆ ಅರ್ಜಿ ಪಡೆದು ಭರ್ತಿ ಮಾಡಿ, ದಾಖಲೆಗಳೊಂದಿಗೆ ಸಲ್ಲಿಸಿ.
  • ಇನ್ನು ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಬಯಸುವವರು ಸೇವಾ ಸಿಂಧು ಪೋರ್ಟಲ್​​ ಮೂಲಕ ಫಾರ್ಮ್​ ಭರ್ತಿ ಮಾಡಿ ದಾಖಲೆಗಳನ್ನು ಅಪ್​ಲೋಡ್​ ಮಾಡಬೇಕು.

ಅರ್ಜಿ ಸಲ್ಲಿಸಿದ ಆನಂತರದ ಪ್ರಕ್ರಿಯೆ ಏನು? 

ನೀವು ಅರ್ಜಿ ಸಲ್ಲಿಸಿದ ನಂತರ ಕೃಷಿ ಇಲಾಖೆ ಅಥವಾ ವಿದ್ಯುತ್​ ಕಂಪನಿಯ ಅಧಿಕಾರಿಗಳು ನಿಮ್ಮ ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ಅರ್ಜಿ ಅರ್ಹವಾಗಿದ್ದರೆ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ. ಆ ಬಳಿಕ ಸರ್ಕಾರದ ಅಂಗೀಕೃತ ಕಂಪನಿಗಳು ನಿಮ್ಮ ಜಮೀನಿನಲ್ಲಿ ಪಂಪ್​​ಸೆಟ್​​  ಅಳವಡಿಸುತ್ತಾರೆ.

ಇದನ್ನೂ ಓದಿ: ಕಾವೇರಿ 2.0 ಮೂಲಕ ಕಾಗದ ರಹಿತ ಆಸ್ತಿ ನೋಂದಣಿ ಹೇಗೆ? ಇಲ್ಲಿದೆ ಸರಳ ವಿಧಾನಗಳು

ಸಬ್ಸಿಡಿ ದರದಲ್ಲಿ ಪಂಪ್‌ಸೆಟ್​ ಅಳವಡಿಕೊಳ್ಳಲು ಇಚ್ಛಿಸುವ ರೈತರು ಪ್ರಮುಖವಾಗಿ ಗಮನಿಸಬೇಕಾ ಅಂಶ ಅಂದರೆ ಪ್ರತಿ ವರ್ಷದ ಆಯಾ ತ್ರೈಮಾಸಿಕ ಅಥವಾ ಆರ್ಥಿಕ ವರ್ಷದ ಆರಂಭದಲ್ಲಿ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಹಾಗಾಗಿ ಇದನ್ನ ನೆನಪಿನಲ್ಲಿಡಬೇಕು. ಇನ್ನು ಪ್ರಸ್ತುತ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆಯಾ ಎಂದು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಪರಿಶೀಲನೆ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:34 pm, Sun, 5 July 26

Loading...
Unable to load recommendations.
Follow Us