ಸಾವರ್ಕರ್ ಬ್ರಾಹ್ಮಣ, ದನದ ಮಾಂಸ ತಿನ್ನುತ್ತಿದ್ದರು: ವಿವಾದದ ಕಿಡಿ ಹೊತ್ತಿಸಿದ ದಿನೇಶ್ ಗುಂಡೂರಾವ್ ಹೇಳಿಕೆ

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಸಚಿವ ದಿನೇಶ್​ ಗುಂಡೂರಾವ್ ನೀಡಿರುವ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕರು ಗುಂಡೂರಾವ್ ಹೇಳಿಕೆಯನ್ನು ಖಂಡಿಸಿದ್ದಾರೆ. ಹಾಗಾದರೆ, ಸಾವರ್ಕರ್ ಬಗ್ಗೆ ಗುಂಡೂರಾವ್ ಹೇಳಿದ್ದೇನು? ಇಲ್ಲಿದೆ ವಿವರ.

ಸಾವರ್ಕರ್ ಬ್ರಾಹ್ಮಣ, ದನದ ಮಾಂಸ ತಿನ್ನುತ್ತಿದ್ದರು: ವಿವಾದದ ಕಿಡಿ ಹೊತ್ತಿಸಿದ ದಿನೇಶ್ ಗುಂಡೂರಾವ್ ಹೇಳಿಕೆ
ದಿನೇಶ್ ಗುಂಡೂರಾವ್ (ಸಂಗ್ರಹ ಚಿತ್ರ
Follow us
|

Updated on: Oct 03, 2024 | 12:21 PM

ಬೆಂಗಳೂರು, ಅಕ್ಟೋಬರ್ 3: ‘ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೆ ವಿರುದ್ಧವಾಗಿರಲಿಲ್ಲ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಗಾಂಧಿ ಜಯಂತಿ ಪ್ರಯುಕ್ತ ಬುಧವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಸಾವರ್ಕರ್ ಮೂಲಭೂತವಾದಿಯಾಗಿದ್ದರು. ಆದರೆ, ಅವರು ಮಾಡರ್ನ್ ಕೂಡ ಆಗಿದ್ದರು. ಅವರು ಗೋಮಾಂಸ ಸೇವಿಸುತ್ತಿದ್ದರು ಎಂದೂ ಕೆಲವು ಜನ ಹೇಳುತ್ತಿದ್ದಾರೆ ಎಂದಿದ್ದರು.

ಗುಂಡೂರಾವ್ ಹೇಳಿದ್ದೇನು?

ಸಾವರ್ಕರ್ ಬ್ರಾಹ್ಮಣ, ಹಾಗೆಂದು ಅವರು ಖಂಡಿತವಾಗಿಯೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮೂಲಭೂತವಾದಿಯಾಗಿದ್ದರೂ ಮಾಡರ್ನ್ ಆಗಿದ್ದ ಅವರು ದನದ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಹಾಗೆ ನೋಡಲು ಹೋದರೆ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇತ್ತು. ಆದರೆ, ಅವರ ಅಭಿಪ್ರಾಯ ಬೇರೆ ರೀತಿಯಲ್ಲತ್ತು. ಅವರು ಡೆಮಾಕ್ರಟಿಕ್ ಆಗಿದ್ದರು ಎಂದು ಗುಂಡೂರಾವ್ ಹೇಳಿದ್ದರು.

ಜಿನ್ನಾ ಹಂದಿ ಮಾಂಸ ಸೇವಿಸಿದ್ದರು: ಗುಂಡೂರಾವ್

ಮೊಹಮ್ಮದ್ ಅಲಿ ಜಿನ್ನಾ ಕೂಡ ಡೆಮಾಕ್ರಟಿಕ್ ಆಗಿದ್ದರು. ಅವರು ಕೂಡ ಕಟ್ಟಾ ಇಸ್ಲಾಂವಾದಿಯಾಗಿರಲಿಲ್ಲ. ಅವರು ವೈನ್ ಕುಡಿಯುತ್ತಿದ್ದರು, ಹಂದಿ ಮಾಂಸ ಸೇವನೆ ಮಾಡಿದ್ದರು ಎಂದು ಅನೇಕರು ಹೇಳುತ್ತಾರೆ. ಜಿನ್ನಾ ಮೂಲಭುತವಾದಿಯಾಗಿರಲಿಲ್ಲ. ಆದರೆ, ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎಂದೂ ಗುಂಡೂರಾವ್ ಹೇಳಿದ್ದಾರೆ.

ಹಿಂದೂಗಳ ಟೀಕೆಯೇ ಕಾಂಗ್ರೆಸ್ ಧರ್ಮ: ಅಶೋಕ್ ಕಿಡಿ

ಗುಂಡೂರಾವ್ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನವರಿಗೆ ಹಿಂದುಗಳನ್ನು ಟೀಕೆ ಮಾಡುವುದೇ ಧರ್ಮ ಆಗಿದೆ. ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ, ಇನ್ನಾದರೂ ಬಿಡಿ ಅವರನ್ನು. ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ. ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚುನಾಯಿತ ಸರ್ಕಾರ ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ: ದಸರಾ ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತು

ಹಿಂದು ಧರ್ಮದಲ್ಲಿ ಮಾತ್ರ ಕೆಟ್ಟದು ಇದೆಯೇ? ಬೇರೆ ಧರ್ಮದಲ್ಲಿ ಎಲ್ಲಾ ಒಳ್ಳೆಯದೇ ಇದೆಯೇ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ