
ಬೆಂಗಳೂರು, ಮಾರ್ಚ್ 24: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ರೈಲ್ವೇ ಮಂಡಳಿ (Railway Board) ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಿದೆ. ಇದರಲ್ಲಿ 6 ಎಕ್ಸ್ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ನಿರ್ಧಾರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.
ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದವು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಲೀಪರ್ ಕೋಚ್ಗಳಲ್ಲಿ ಸುಮಾರು ಶೇ30 ರವರೆಗೆ ಮತ್ತು ಸಾಮಾನ್ಯ ಟಿಕೆಟ್ಗಳಲ್ಲಿ ಶೇ 10-15ರವರೆಗೆ ದರ ಕಡಿಮೆಯಾಗಲಿದೆ.
ಇದರ ಜೊತೆಗೆ ಬೆಂಗಳೂರು-ಚನ್ನಪಟ್ಟಣ, ಮೈಸೂರು-ಎಸ್ಎಂವಿಟಿ ಬೆಂಗಳೂರು, ಯಶವಂತಪುರ-ಹಿಂದೂಪುರ ಹಾಗೂ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ. ಈ ಕ್ರಮದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ತೀರ್ಮಾನ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:16 pm, Tue, 24 March 26