
ಬೆಂಗಳೂರು, ಆಗಸ್ಟ್ 29: ರಾಜ್ಯದ ಪ್ರಮುಖ ಜಲಾಶಯಗಳಿಗೆ ಮಳೆಯಿಂದಾಗಿ ನೀರು ಹರಿದುಬರುತ್ತಿದ್ದು, ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಅದೇ ರೀತಿ ಹಾಸನದ ಹೇಮಾವತಿ ಹಾಗೂ ಮಂಡ್ಯದ ಕೆಆರ್ಎಸ್ ಜಲಾಶಯಗಳಿಗೂ ಉತ್ತಮ ಒಳಹರಿವು ದಾಖಲಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀ ಪೂರೈಕೆಗೆ ರೈತರಲ್ಲಿ ನಿರಾಳತೆ ಮೂಡಿಸಿದೆ. ಪ್ರಮುಖ ಜಲಾಶಯಗಳ ಇಂದಿನ ವಿವರವಾದ ನೀರಿನ ಮಟ್ಟ ಹಾಗೂ ಹರಿವಿನ ಮಾಹಿತಿ ಇಲ್ಲಿದೆ.
ಹಾಸನ ತಾಲೂಕಿನ ಗೊರೂರು ಸಮೀಪವಿರುವ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು (37 TMC), ಇಂದಿನ ನೀರಿನ ಮಟ್ಟ 2,913.58 ಅಡಿಗಳಿಗೆ (29.496 TMC) ತಲುಪಿದೆ. ಜಲಾಶಯಕ್ಕೆ ಪ್ರಸ್ತುತ 2,173 ಕ್ಯೂಸೆಕ್ ನೀರಿನ ಒಳಹರಿವಿದ್ದು, ನದಿಗೆ 1,800 ಕ್ಯೂಸೆಕ್ ಹಾಗೂ ಕಾಲುವೆಗೆ 3,700 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,921.81 ಅಡಿ (36.919 TMC) ನೀರಿತ್ತು. ಆಗ ಒಳಹರಿವು 7,523 ಕ್ಯೂಸೆಕ್ ಹಾಗೂ ನದಿಗೆ 2,400 ಕ್ಯೂಸೆಕ್ ಮತ್ತು ಕಾಲುವೆಗೆ 5,075 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತದಲ್ಲಿದೆ. ಡ್ಯಾಂನ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 519.58 ಮೀಟರ್ ತಲುಪಿದೆ. ಜಲಾಶಯಕ್ಕೆ 26,883 ಕ್ಯೂಸೆಕ್ ನೀರಿನ ಒಳಹರಿವಿದ್ದು, ಅಷ್ಟೇ ಪ್ರಮಾಣದ (26,883 ಕ್ಯೂಸೆಕ್) ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (KRS) ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು (ಗರಿಷ್ಠ ಸಾಮರ್ಥ್ಯ 49.452 TMC), ಇಂದಿನ ನೀರಿನ ಮಟ್ಟ 110.28 ಅಡಿಗಳಷ್ಟಿದೆ (ಸಂಗ್ರಹ 32.004 TMC). ಜಲಾಶಯಕ್ಕೆ ಪ್ರಸ್ತುತ 7,955 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, 6,972 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ