ಕರ್ನಾಟಕ ಹವಾಮಾನ ವರದಿ: ಚಿಕ್ಕಮಗಳೂರು ಜನರೇ ಗಮನಿಸಿ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಸವಾರರೇ ಎಚ್ಚರ

Karnataka Weather: ಕರ್ನಾಟಕದಲ್ಲಿ ಇಂದು (ಜನವರಿ 22) ಒಣ ಮತ್ತು ಶೀತ ಹವಾಮಾನ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಆಹ್ಲಾದಕರ ಹವಾಮಾನವಿದ್ದು, ಬೆಳಿಗ್ಗೆ ಮಂಜು ಇರಲಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ ಮುಂದುವರಿದಿದ್ದು, ಕರಾವಳಿ ಭಾಗದಲ್ಲಿ ಉಷ್ಣಾಂಶ ಹೆಚ್ಚಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಗುಡ್ಡಗಾಡು ಪ್ರದೇಶಗಳಲ್ಲಿ ದಟ್ಟ ಮಂಜು ಇರುವುದರಿಂದ ಚಾಲಕರು ಎಚ್ಚರಿಕೆ ವಹಿಸಬೇಕು. ಮುಂಬರುವ ನಾಲ್ಕು ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕ ಹವಾಮಾನ ವರದಿ: ಚಿಕ್ಕಮಗಳೂರು ಜನರೇ ಗಮನಿಸಿ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಸವಾರರೇ ಎಚ್ಚರ
ಸಾಂದರ್ಭಿಕ

Updated on: Jan 22, 2026 | 7:06 AM

ಬೆಂಗಳೂರು, ಜ.22: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನ (ಜನವರಿ 22, 2026) ಹವಾಮಾನ ಶುಷ್ಕ ಮತ್ತು ಶೀತ ವಾತಾವರಣದಿಂದ ಕೂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರಸ್ತುತ ಚಳಿಯ ತೀವ್ರತೆ ಮುಂದುವರಿದಿದ್ದು, ಒಣ ಹವಾಮಾನ (Dry Weather) ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಇಂದು ಆಹ್ಲಾದಕರ ಹವಾಮಾನವಿರಲಿದ್ದು, ಬೆಳಗಿನ ಜಾವ ಸಾಧಾರಣ ಮಂಜು ಇರಲಿದೆ. ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 16°C ಇರಲಿದೆ. ಗಾಳಿಯ ಗುಣಮಟ್ಟ (AQI) ಸಾಧಾರಣ ಮಟ್ಟದಲ್ಲಿದೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚಳಿಯ ಅಲೆ ಮುಂದುವರಿದಿದೆ. ಇಲ್ಲಿ ಕನಿಷ್ಠ ತಾಪಮಾನ 12°C – 14°C ವರೆಗೆ ಕುಸಿಯುವ ಸಾಧ್ಯತೆಯಿದೆ.

ಮಂಗಳೂರು, ಉಡುಪಿ ಭಾಗದಲ್ಲಿ ಹವಾಮಾನವು ಸ್ವಲ್ಪ ಉಷ್ಣಾಂಶದಿಂದ ಕೂಡಿರಲಿದ್ದು, ಗರಿಷ್ಠ ತಾಪಮಾನ 32°C ದಾಟಬಹುದು. ಇಲ್ಲಿ ಸಮುದ್ರದ ಗಾಳಿ ಮಂದಗತಿಯಲ್ಲಿರಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳಿಗ್ಗೆ ದಟ್ಟ ಮಂಜು ಮುಸುಕಲಿದ್ದು, ವಾಹನ ಸವಾರರು ಜಾಗರೂಕರಾಗಿರಲು ಹವಾಮಾನ ಇಲಾಖೆ ಹೇಳಿದೆ. ಮುಂಜಾನೆ ಮತ್ತು ತಡರಾತ್ರಿ ಚಳಿ ಹೆಚ್ಚಿರುವುದರಿಂದ ಶೀತ ಮತ್ತು ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಬಗ್ಗೆ ಜಾಗ್ರತೆ ವಹಿಸಿ. ಬೆಚ್ಚಗಿನ ಉಡುಪು ಧರಿಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ಇನ್ನು ಯಾವ ಜಿಲ್ಲೆಯಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಕರ್ನಾಟಕದ ಬಯಲು ಪ್ರದೇಶಗಳಲ್ಲೇ ದಾವಣಗೆರೆಯಲ್ಲಿ ಕನಿಷ್ಠ 11.0°C ತಾಪಮಾನ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ತುಂಬಾ ಬದಲಾವಣೆಗಳು ಕಾಣುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಎಚ್ಚರವಾಗಿರಲು ತಜ್ಞರು ಹೇಳಿದ್ದಾರೆ. ಮುಂದಿನ ನಾಲ್ಕು ದಿನಗಳವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಲವಾರು ದಿನಗಳಿಂದ ಒಣ ಹವಾಮಾನ ಇದ್ದು, ಇದೇ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ವಿಮಾನ ನಿಲ್ದಾಣ ಸಿಬ್ಬಂದಿಯ ಬಂಧನ

ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರದಲ್ಲೂ ಕೂಡ ವಾತಾವರಣ ಶುಷ್ಕವಾಗಿರಲಿದೆ. ಉತ್ತರ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಒಣ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ಹೇಳಿದೆ. ಈ ಭಾಗದಲ್ಲೂ ಕೂಡ ಎಚ್ಚರದಿಂದ ಇರುವಂತೆ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 am, Thu, 22 January 26