AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Winter Sssion: ವಿಧಾನ ಪರಿಷತ್ತಿನಲ್ಲೂ ‘ಆಜಾನ್’ ಕೂಗು! ನಡೆಯಿತು ಬಿಸಿಬಿಸಿ ಚರ್ಚೆ

ಮಸೀದಿಗಳಲ್ಲಿ ‘ಆಜಾನ್’ ಧ್ವನಿವರ್ಧಕಗಳ ಡೆಸಿಬಲ್ ಮಿತಿ ಕುರಿತು ವಿಧಾನ ಪರಿಷತ್‌ನಲ್ಲಿ ಮಂಗಳವಾರ ತೀವ್ರ ಚರ್ಚೆ ನಡೆಯಿತು. ಬಿಜೆಪಿಯ ಡಿಎಸ್ ಅರುಣ್ ಶಬ್ದ ಮಾಲಿನ್ಯ ನಿಯಂತ್ರಣದ ಬಗ್ಗೆ ಧ್ವನಿ ಎತ್ತಿದಾಗ, ಸಚಿವ ಈಶ್ವರ್ ಖಂಡ್ರೆ ರಾಜಕೀಯ ಆರೋಪ ಮಾಡಿರುವುದಾಗಿ ಆಕ್ಷೇಪಿಸಿದರು. ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಎಂದು ಸಭಾಪತಿ ಹೇಳಿದ ಬಳಿಕ ಖಂಡ್ರೆ ಉತ್ತರ ಕೊಟ್ಟರು. ಆಗ ಸದನದಲ್ಲಿ ಕಾವೇರಿತು.

Karnataka Winter Sssion: ವಿಧಾನ ಪರಿಷತ್ತಿನಲ್ಲೂ ‘ಆಜಾನ್’ ಕೂಗು! ನಡೆಯಿತು ಬಿಸಿಬಿಸಿ ಚರ್ಚೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Dec 17, 2025 | 8:20 AM

Share

ಬೆಳಗಾವಿ, ಡಿಸೆಂಬರ್ 17: ಮಸೀದಿಗಳಲ್ಲಿ ‘ಆಜಾನ್ (Azan)’ ಕೂಗುವ ವೇಳೆ ಡೆಸಿಬಲ್ ಮಿತಿ ಮೀರಿ ಧ್ವನಿವರ್ಧಕಗಳನ್ನು ಬಳಸುವ ವಿಚಾರವಾಗಿ ವಿಧಾನ ಪರಿಷತ್​​ನಲ್ಲಿ ಮಂಗಳವಾರ ಬಿಸಿಬಿಸಿ ಚರ್ಚೆ ನಡೆಯಿತು. ಮಿತಿಗಿಂತ ಹೆಚ್ಚಿನ ಡೆಸಿಬಲ್ ಇರುವ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ಕುರಿತು ಬಿಜೆಪಿಯ (BJP) ಡಿಎಸ್ ಅರುಣ್ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ದೀಪಾವಳಿಯ ಸಮಯದಲ್ಲಿ ಪಟಾಕಿಗಳು ಮತ್ತು ಧ್ವನಿವರ್ಧಕಗಳು ಸಹ ಅತಿಯಾದ ಶಬ್ದವನ್ನು ಉಂಟುಮಾಡುತ್ತವೆ. ಈ ವಿಷಯದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ ಎಂದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿ ವಾಗ್ವಾದಕ್ಕೆ ಕಾರಣವಾಯಿತು.

‘ಆಜಾನ್’ನಿಂದ ಉಂಟಾದ ಅಡಚಣೆಯ ಬಗ್ಗೆ ಯಾರೂ ದೂರು ನೀಡಲು ಧೈರ್ಯ ಮಾಡುತ್ತಿಲ್ಲ. ಏಕೆಂದರೆ ಅವರಿಗೆ ಸರ್ಕಾರದ ಬೆಂಬಲವಿದೆ ಎಂದು ಅರುಣ್ ಆರೋಪಿಸಿದರು. ಈ ವೇಳೆ ಸಚಿವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ಹೇಳಿಕೆಯನ್ನು ಖಂಡಿಸಿದರು.

ವಿಷಯದ ಗಂಭೀರತೆಯನ್ನು ಅರಿತ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯರು ಎತ್ತುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. ಬೇರೆ ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಸಚಿವರಿಗೆ ಸೂಚಿಸಿದರು.

ಕೊನೆಗೆ, ಎಲ್ಲಾ ಮಸೀದಿಗಳು, ಮದ್ರಸಾಗಳು, ದರ್ಗಾಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬಹುದೆಂದು ಪರಿಸರ ಇಲಾಖೆಯಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಖಂಡ್ರೆ ಮಾಹಿತಿ ನೀಡಿದರು. ಅಲ್ಲದೆ, ‘ಆಜಾನ್’ ಸಮಯದಲ್ಲಿ ಬಳಸುವ ಧ್ವನಿವರ್ಧಕಗಳ ಪರವಾನಗಿಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಆಜಾನ್ ವೇಳೆ ಡೆಸಿಬಲ್ ಮಟ್ಟ ಹೆಚ್ಚಿದ್ದ ಬಗ್ಗೆ 52 ದೂರು ದಾಖಲು

‘ಆಜಾನ್’ ಸಮಯದಲ್ಲಿ ಸ್ಪೀಕರ್‌ಗಳ ಡೆಸಿಬಲ್ ಮಟ್ಟ ಹೆಚ್ಚಿದ್ದ ಬಗ್ಗೆ ಕಳೆದ ಮೂರು ವರ್ಷಗಳಲ್ಲಿ 52 ದೂರುಗಳು ಬಂದಿವೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು 51 ಸ್ಥಳಗಳನ್ನು ಪರಿಶೀಲಿಸಿದ್ದು, 26 ಸ್ಥಳಗಳಲ್ಲಿ ಉಲ್ಲಂಘನೆ ಕಂಡುಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

ಒಟ್ಟಾರೆಯಾಗಿ, 126 ಸ್ಥಳಗಳಲ್ಲಿ ಧ್ವನಿ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗಿದೆ. 97 ಸ್ಥಳಗಳಲ್ಲಿ, ಧ್ವನಿವರ್ಧಕಗಳ ಧ್ವನಿ ಮಿತಿಯನ್ನು ಮೀರಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ಬಿಜೆಪಿ ಸದಸ್ಯ ಡಿಎಸ್ ಅರುಣ್ ಹೇಳಿದ್ದೇನು?

ಶಿವಮೊಗ್ಗದಲ್ಲಿರುವ ತನ್ನ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಆಜಾನ್’ನ ಜೋರಾದ ಶಬ್ದದಿಂದಾಗಿ ಜನರು ಬೆಳಗಿನ ಜಾವ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ತಂದೆಗೆ 86 ವರ್ಷ ವಯಸ್ಸಾಗಿದ್ದು ಮಸೀದಿಯಲ್ಲಿ ‘ಆಜಾನ್’ ಕೇಳಿದಾಗ ಎಚ್ಚರಗೊಂಡು ಮತ್ತೆ ನಿದ್ರಿಸಲು ಕಷ್ಟಪಡುತ್ತಾರೆ. ಇದು ನಮಗೆ ದೈನಂದಿನ ಕಿರಿಕಿರಿಯಾಗಿ ಪರಿಣಮಿಸಿದೆ. ಯಾರೂ ಇದರ ಬಗ್ಗೆ ದೂರು ನೀಡಲು ಧೈರ್ಯ ಮಾಡುವುದಿಲ್ಲ. ಇದು ತೊಂದರೆ ಉಂಟುಮಾಡುತ್ತಿದೆ ಎಂದು ಅಧಿಕಾರಿಗಳಿಗೆ ಯಾರಾದರೂ ಹೇಳಿದರೆ, ಅವರು ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಅದರ ಬದಲು ಮಸೀದಿಗಳಲ್ಲಿ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲು ವಿನಂತಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ