
ಬೆಂಗಳೂರು, (ಡಿಸೆಂಬರ್ 11): ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ (MBA Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಹೆಸರುಘಟ್ಟ (Hesarughatta) ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಕೇರಳ ಮೂಲದ ಜಗನ್ ಮೋಹನ್ (25) ಮೃತ ವಿದ್ಯಾರ್ಥಿ. ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ರೂಂ ಬಾಡಿಗೆ ಪಡೆದು ವಾಸವಿದ್ದು, ಇದೀಗ ಅದೇ ರೂಮಿನಲ್ಲಿ ಡೆತ್ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋ ಕಾಲ್ ಟಾರ್ಚರ್ಗೆ ಹೆದರು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ನೋಟ್ನಲ್ಲಿ ಮೃತ ವಿದ್ಯಾರ್ಥಿ ಮೂರು ನಂಬರ್ ಬರೆದಿದ್ದಾನೆ. ಪರಿಶೀಲನೆ ನಡೆಸಿದಾಗ ಫೇಕ್ ವಿಡಿಯೋ ಕಾಲ್ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, 25,000 ರೂ. ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಬೆತ್ತಲೆ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಡತ್ನೋಟ್ನಲ್ಲಿ ಉಲ್ಲೇಖಿಸಿದ್ದ ನಂಬರ್ ಗಳನ್ನ ಪರಿಶೀಲನೆ ಮಾಡಿದಾಗ ಯಾರೋ ಫೇಕ್ ವಿಡಿಯೋ ಕಾಲ್ ಮಾಡಿ ಜಗನ್ ನನ್ನು ಬೆತ್ತಲೆ ಫೋಟೊಗಳನ್ನ ತೆಗೆದುಕೊಂಡಿದ್ದಾರೆ. ಅಲ್ಲದೆ ಹಣ ಕೊಡದಿದ್ರೆ ಬೆತ್ತಲೆ ಫೋಟೊಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಜಗನ್ 25 ಸಾವಿರ ಹಣವನ್ನು ಕೂಡ ವರ್ಗಾವಣೆ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿರೋ ಶಂಕೆಯಿದ್ದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಸೋಲದೇವನಹಳ್ಳಿ ಠಾಣೆಯಲ್ಲಿ ಬಿಎನ್ಎಸ್ 106 ಅಡಿ ಕೇಸ್ ದಾಖಲಾಗಿದೆ.