ಕೊಡಗು: ಮೂಲಸೌಕರ್ಯವಿಲ್ಲದೆ ಗೋಳಾಡುತ್ತಿರುವ ಆದಿವಾಸಿಗಳು; ಕ್ಯಾರೆ ಎನ್ನದ ಜನಪ್ರತಿನಿಧಿಗಳು, ಅಧಿಕಾರಿಗಳು

ಹಸಿವಾದಾಗ ಹೊಟ್ಟೆಗೆ ಹಿಟ್ಟು, ತಲೆ ಮೇಲೊಂದು ಸೂರು ಇದು ಪ್ರತಿಯೊಬ್ಬನ ಅನಿವಾರ್ಯತೆ. ಆದ್ರೆ, ಕೊಡಗು ಜಿಲ್ಲೆಯ ಬುಡಕಟ್ಟು ನಿವಾಸಿಗಳು ಮಾತ್ರ ಸ್ವಾತಂತ್ರ್ತ ಬಂದು 75 ವರ್ಷಗಳೇ ಕಳೆದರೂ ಇನ್ನು ಈ ಕನಿಷ್ಟ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಅದರಲ್ಲೂ ದಕ್ಷಿಣ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಇರುವ ಈ ಆದಿವಾಸಿಗಳು ಘೋರ ಅನ್ಯಾಯಕ್ಕೆ ಒಳಗಾಗಿ ಬದುಕನ್ನೇ ಕಳೆದುಕೊಂಡಿದ್ದಾರೆ.

ಕೊಡಗು: ಮೂಲಸೌಕರ್ಯವಿಲ್ಲದೆ ಗೋಳಾಡುತ್ತಿರುವ ಆದಿವಾಸಿಗಳು; ಕ್ಯಾರೆ ಎನ್ನದ ಜನಪ್ರತಿನಿಧಿಗಳು, ಅಧಿಕಾರಿಗಳು
ಸೂರಿಗಾಗಿ ಬೇಡಿಕೊಳ್ಳುತ್ತಿರುವ ಕೊಡಗು ಆದಿವಾಸಿಗಳು
ಕಿರಣ್ ಹನುಮಂತ್​ ಮಾದಾರ್

Updated on: Apr 26, 2023 | 8:32 AM

ಕೊಡಗು: ಬಿದಿರಿನಿಂದ ಮಾಡಿರುವ ಹರಕಲು ಮುರುಕಲು ಮನೆಗಳು, ಆ ಮನೆಗಳ ಮೇಲೆ ಪ್ಲಾಸ್ಟಿಕ್ ಹೊದಿಕೆಗಳು. ಜೋರಾಗಿ ಗಾಳಿ ಮಳೆ ಬಂದರೆ ರಕ್ಷಣೆಯೇ ಇಲ್ಲದಂತಹ ಸ್ಥಿತಿ. ಒಮ್ಮೆಲೇ ನೋಡಿದ್ರೆ, ಇದು ಎಲ್ಲೋ ಆಫ್ರಿಕಾದ ದುಸ್ಥಿತಿಯೋ ಎಂಬಂತೆ ಭಾಸವಾಗುತ್ತದೆ. ಆದ್ರೆ, ಇದು ರಾಜ್ಯದ ಅತಿ ಶ್ರೀಮಂತ ಜಿಲ್ಲೆ ಎನಿಸಿಕೊಂಡಿರುವ ಕೊಡಗಿಗೆ ಬಂದರೆ ಸಾಕು ಸಾವಿರಾರು ಕುಟುಂಬಗಳು ಇಂದಿಗೂ ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವುದನ್ನ ನಾವು ಕಾಣಬಹುದು. ಇವರೆಲ್ಲ ಕೊಡಗಿನ ಆದಿವಾಸಿ ಸಮುದಾಯಕ್ಕೆ ಸೇರಿದ ಪಾಲೆ, ಎರವ, ಜೇನುಕುಟುರುಬ, ಬೆಟ್ಟ ಕುರುಬ ಜನಾಂಗದವರು. ಕೊಡಗಿನ ಶ್ರೀಮಂತ ಕಾಫಿ ಎಸ್ಟೇಟ್ ಮಾಲಿಕರ ತೋಟದ ಮನೆಗಳಲ್ಲಿ ಕನಿಷ್ಟ ಕೂಲಿಗೆ ಬದುಕುತ್ತಿದ್ದವರು. ಆದ್ರೆ, ತಮಗೂ ಒಂದು ಸೂರು ಕೊಡಿ ಎಂದು ಇದೀಗ ಇವರೆಲ್ಲ ವಿವಿಧೆಡೆ ಖಾಲಿ ಇರುವ ಸರ್ಕಾರಿ ಜಾಗಕ್ಕೆ ಬಂದು ಜೋಪಡಿ ಹಾಕಿಕೊಂಡಿದ್ದಾರೆ.

ಹೌದು ಈ ಜಾಗವನ್ನು ತಮ್ಮ ಹೆಸರಿಗೆ ಹಕ್ಕು ಪತ್ರ ಮಾಡಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ತಮಗೂ ಬದುಕುವ ಹಕ್ಕಿದೆ, ತಮಗೂ ಮನೆಕಟ್ಟಲು ಅಂಗೈಯಗಲ ಜಾಗ ಕೊಡಿ ಎಂದು ಬೇಡುತ್ತಿದ್ದಾರೆ. ಇವರೆಲ್ಲ ಈ ಜಾಗಕ್ಕೆ ಬಂದು ಒಂದು ವರ್ಷವೇ ಕಳೆದಿದೆ. ಪೊನ್ನಂಪೇಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ತರಹದ ಸರ್ಕಾರಿ ಜಾಗದಲ್ಲಿ ಇವರೆಲ್ಲ ಗುಡಿಸಲು ಕಟ್ಟಿಕೊಂಡಿದ್ದಾರೆ. ಅಲ್ಲಿ ಇವರಿಗೆ ಯಾವುದೇ ಮೂಲ ಸೌಕರ್ಯಗಳಾದ ಒಳ್ಳೆಯ ನೀರು, ಶೌಚಾಲಯ, ವಿದ್ಯುತ್ ಏನೂ ಇಲ್ಲ. ಆದರೂ ಒಂದು ದಿನ ನಮಗೂ ಒಳ್ಳೆಯ ದಿನ ಬರುತ್ತೆ, ಈ ಜಾಗ ತಮ್ಮ ಹೆಸರಿಗೆ ಆಗುತ್ತೆ ಎನ್ನುವ ನಂಬಿಕೆಯಿಂದ ಈ ಜೋಪಡಿಗಳಲ್ಲಿ ಸಣ್ಣಪುಟ್ಟ ಮಕ್ಕಳೊಂದಿಗೆ ದಿನ ದೂಡುತ್ತಿದ್ದಾರೆ.

ಇದನ್ನೂ ಓದಿ:ಕೊಡಗು: ಕ್ಷುಲ್ಲಕ ಕಾರಣಕ್ಕೆ ಬಂದೂಕಿನಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ

ಈ ಸರ್ಕಾರಿ ಜಮೀನುಗಳನ್ನ ಈಗಾಗಲೆ ಬಲಾಢ್ಯ ಎಸ್ಟೇಟ್ ಮಾಲಿಕರು ಆಕ್ರಮಿಸಿಕೊಂಡಿದ್ದಾರೆ. ಈ ಜಾಗವನ್ನ ಬಿಡಿಸಿ ತಮಗೆ ನೀಡಿ ಎನ್ನುವುದು ಇವರ ಬೇಡಿಕೆ. ಆದ್ರೆ, ಸಧ್ಯಕ್ಕಂತೂ ಇವರ ಕೂಗು ಸರ್ಕಾರಕ್ಕೆ ಕೇಳಿಸಿಲ್ಲ. ಇನ್ನಾದರೂ ಇವರ ಕೂಗು ಕೇಳುತ್ತಾ ಎಂದು ಕಾದು ನೋಡಬೇಕಿದೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us