ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಯುವಕ ಸೇರಿ ಆತನ ಕುಟುಂಬಸ್ಥರ ವಿರುದ್ಧ ಯುವತಿ ದೂರು
ಅದು ದೊಡ್ಡವರ ಮನೆ ಮದುವೆ ವಿಚಾರ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಮದುವೆಯಾಗಿ ಐದಾರು ತಿಂಗಳು ಕಳೆಯುತ್ತಿತ್ತು. ಆದರೆ ಇದಕ್ಕಿದ್ದಂತೆ ಶುರುವಾದ ಭಿನ್ನಾಭಿಪ್ರಾಯ ಒಂದಾಗಬೇಕಾದ ಜೋಡಿ ದೂರವಾಗಿದ್ದು, ಮದುವೆ ಕನಸು ಕಂಡಿದ್ದ ಯುವತಿ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ.

ತುಮಕೂರು, ಸೆಪ್ಟೆಂಬರ್ 17: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಾಜಿ ಸಚಿವ ದಿವಂಗತ ಸುಧಾಕರ್ ಅವರ ಸಹೋದರ ಡಿಎಸ್. ಕುಮಾರ್ ಕುಟುಂಬದ ವಿರುದ್ಧ ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅರ್ಜುನ್, ಆತನ ತಂದೆ ಡಿಎಸ್. ಕುಮಾರ್, ತಾಯಿ ಪದ್ಮರೇಖಾ, ಸಹೋದರಿಯರು ಮತ್ತು ಭಾವ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದು, ದೂರು ನೀಡಿದ್ದಾರೆ.
ನಡೆದಿದ್ದೇನು?
ಡಿಎಸ್ ಕುಮಾರ್ ಪುತ್ರ ಅರ್ಜುನ್ ಹಾಗೂ ಸಂತ್ರಸ್ತ ಯುವತಿ ಕಳೆದ 16 ವರ್ಷಗಳಿಂದ ಪರಿಚಿತರಾಗಿದ್ದು, ಕಳೆದ 7 ವರ್ಷಗಳಿಂದ ಅರ್ಜುನ್ ಪ್ರೀತಿಸುವುದಾಗಿ ಹೇಳಿ ನಂಬಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. 2020ರಲ್ಲಿ ಎರಡು ಕುಟುಂಬದ ಪೋಷಕರ ಸಮ್ಮುಖದಲ್ಲಿ ಕುಂಕುಮ ಶಾಸ್ತ್ರವೂ ನಡೆದಿತ್ತು. ಈ ಸಂದರ್ಭದಲ್ಲಿ ಜೊತೆಯಾಗಿ ಹಲವು ಕಡೆ ಪ್ರಯಾಣ ಬೆಳೆಸಿದ್ದ ವೇಳೆ ಅರ್ಜುನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ನಿಶ್ಚಿತಾರ್ಥದ ಬಳಿಕ ಮದುವೆಯಿಂದ ಹಿಂದೆ ಸರಿದ ಕುಟುಂಬ
ಮದುವೆ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಮಾತುಕತೆ ಮುಂದುವರೆದಿತ್ತು. 2025ರ ಅಕ್ಟೋಬರ್ನಲ್ಲಿ ನಿಶ್ಚಿತಾರ್ಥಕ್ಕೆ ತಯಾರಿ ಮಾಡಕೊಳ್ಳಲಾಗಿತ್ತು. ಆದರೆ ಕುಟುಂಬದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಳಿಕ ಮನವೊಲಿಸಿ ಡಿಸೆಂಬರ್ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಲಾಗಿತ್ತು. 2026ರ ಮಾರ್ಚ್ 1ರಂದು ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಆದರೆ ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಅರ್ಜುನ್ ಕುಟುಂಬ ಮದುವೆ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತುಮಕೂರು: ಬೆಟ್ಟದಲ್ಲಿ ಅಡಗಿ ಕುಳಿತಿದ್ದ ನಕಲಿ ನಕ್ಸಲ್ ವೆಂಕಟೇಶ್ ಕೊನೆಗೂ ಅರೆಸ್ಟ್!
ಮದುವೆ ರದ್ದಾದ ಬಳಿಕ ಹಲವು ಬಾರಿ ಪ್ರಯತ್ನಿಸಿದರೂ ಕುಟುಂಬದವರು ಸಂಪರ್ಕಕ್ಕೆ ಸಿಗಲಿಲ್ಲವಂತೆ. ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಮನವಿ ಮಾಡಿದರೂ ಸ್ಪಂದಿಸದೆ, ಡಿಎಸ್. ಕುಮಾರ್ ಅವರು ತಮ್ಮ ಮೇಲೆ ಲಾರಿ ಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿ ವಿರುದ್ಧವೇ ದೂರು
ಇನ್ನು ಈ ಪ್ರಕರಣದಲ್ಲಿ ಮತ್ತೊಂದು ತಿರುವು ಕೂಡ ಸಿಕ್ಕಿದೆ. ಯುವತಿ ಪೊಲೀಸ್ ಠಾಣೆ ಮೆಟ್ಟಲೇರುವ ಮೊದಲೇ ಆಕೆ ವಿರುದ್ಧ ಡಿಎಸ್. ಕುಮಾರ್ ಕುಟುಂಬ ದೂರು ನೀಡಿತ್ತು. ಅದರಂತೆ ತುಮಕೂರು ಎನ್ಇಪಿಎಸ್ ಠಾಣೆಯಲ್ಲಿ ಎನ್ಸಿಆರ್ ಪ್ರಕರಣ ದಾಖಲಾಗಿದ್ದು, ನಿಶ್ಚಿತಾರ್ಥ ಮತ್ತು ಮದುವೆ ರದ್ದಾದ ಬಳಿಕವೂ ಯುವತಿ ತಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಲಾಗಿತ್ತು.
ಇದನ್ನೂ ಓದಿ: ಮಗನ ಮದುವೆ ಸಂಭ್ರಮದಲ್ಲಿದ್ದ ಚಿನ್ನದ ವ್ಯಾಪಾರಿಗೆ ಬಿಗ್ ಶಾಕ್
ಆ ಬಳಿಕ ಪೊಲೀಸರು ಯುವತಿಯನ್ನು ಸಂಪರ್ಕಿಸಿದ ನಂತರ ಇದೀಗ ಆಕೆಯಿಂದ ವಂಚನೆ ಹಾಗೂ ದೌರ್ಜನ್ಯದ ದೂರು ದಾಖಲಾಗಿದೆ. ಸದ್ಯ ಪೊಲೀಸರು ಯುವತಿಯ ಹೇಳಿಕೆ ಪಡೆದಿದ್ದು, ಆರೋಪಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಮಹಜರ್ ನಡೆಸಿದ್ದಾರೆ. ಶೀಘ್ರದಲ್ಲೇ ನ್ಯಾಯಾಧೀಶರ ಮುಂದೆ ಯುವತಿಯ ಸೆಕ್ಷನ್ 164 ಹೇಳಿಕೆ ದಾಖಲಿಸುವ ಸಾಧ್ಯತೆಯಿದ್ದು, ಆ ಬಳಿಕ ತನಿಖೆಯ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




