ಮಳೆ ಕೊರತೆ ಎಫೆಕ್ಟ್: ಹೆಚ್ಚುವರಿಯಾಗಿ ಕರ್ನಾಟಕದ 53 ತಾಲೂಕು ಬರಪೀಡಿತವೆಂದು ಘೋಷಣೆಗೆ ಸಿದ್ಧತೆ
ಕರ್ನಾಟಕದಲ್ಲಿ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದ ರಾಜ್ಯ ಸರ್ಕಾರ, ಇದೀಗ ಹೆಚ್ಚುವರಿಯಾಗಿ 17 ಜಿಲ್ಲೆಗಳ 53 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಸಿದ್ಧತೆ ನಡೆಸಿದೆ. ಜೂ.1ರಿಂದ ಸೆ.16ರವರೆಗಿನ ವೈಜ್ಞಾನಿಕ ವರದಿ ಆಧಾರದಲ್ಲಿ ಸೆ.19ರಿಂದ 20ರವರೆಗೆ ಹೊಲ, ಗದ್ದೆಗಳಲ್ಲಿ ಬರ ಅಧ್ಯಯನಕ್ಕೆ ಸೂಚನೆ ನೀಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕದಲ್ಲಿ ಮಳೆಯ ತೀವ್ರ ಅಭಾವದ ಹಿನ್ನೆಲೆ ಈ ಹಿಂದೆ 101 ತಾಲೂಕು ಬರ ಪೀಡಿತವೆಂದು ಘೋಷಿಸಿದ್ದ ಸರ್ಕಾರ ಹೆಚ್ಚುವರಿಯಾಗಿ 53 ತಾಲೂಕು ಬರಪೀಡಿತವೆಂದು ಘೋಷಣೆಗೆ ಸಿದ್ಧತೆ ನಡೆಸಿದೆ. ಈ ಸಂಬಂಧ ತಾಲೂಕುಗಳಲ್ಲಿ ನೈಜ ಪರಿಸ್ಥಿತಿ ಅರಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಹತ್ವದ ಅಧಿಸೂಚನೆ ಹೊರಡಿಸಲಾಗಿದೆ. 2020ರ ಬರ ನಿರ್ವಹಣಾ ಕೈಪಿಡಿ ನಿಯಮಗಳನ್ವಯ 17 ಜಿಲ್ಲೆಗಳ 53 ತಾಲೂಕು ಬರ ಪೀಡಿತವೆಂದು ಘೋಷಣೆಗೆ ಅರ್ಹತೆ ಬಗ್ಗೆ ನಿರ್ಧರಿಸಲು ಸೆ.16ರಂದು ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಸೆ.19ರಿಂದ 20ರವರೆಗೆ ಹೊಲ, ಗದ್ದೆಗಳಲ್ಲಿ ಬರ ಅಧ್ಯಯನಕ್ಕೆ ಸೂಚನೆ
ಜೂ.1ರಿಂದ ಸೆ.16ರವರೆಗಿನ ವೈಜ್ಞಾನಿಕ ವರದಿ ಆಧಾರದಲ್ಲಿ ಸೆ.19ರಿಂದ 20ರವರೆಗೆ ಹೊಲ, ಗದ್ದೆಗಳಲ್ಲಿ ಬರ ಅಧ್ಯಯನಕ್ಕೆ ಸೂಚನೆ ನೀಡಲಾಗಿದ್ದು, ಸೆ.21ಕ್ಕೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ ಫಾರ್ಮ್-11 ಸಲ್ಲಿಸಬೇಕು. ಮೊಬೈಲ್ ಌಪ್ ಮೂಲಕ ಪಾರದರ್ಶಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಅಂತಹ ತಾಲೂಕು ಬರಪೀಡಿತ, ಶೇ.50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ತೀವ್ರ ಸ್ವರೂಪದ ಬರ ಎಂದು ವರ್ಗೀಕರಣ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್
ಮೊದಲ ಹಂತದಲ್ಲಿ ಆಗಸ್ಟ್ 27ರಂದು ಸರ್ಕಾರವು 2026ರ ಮುಂಗಾರು ಹಂಗಾಮಿಗೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (SDRF) ಮಾರ್ಗಸೂಚಿಗಳ ಅನ್ವಯ ಅಗತ್ಯ ಪರಿಹಾರ ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅಧಿಕಾರ ನೀಡಿದೆ. ಕೃಷಿ ಆಯುಕ್ತರು, ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಅಂದಾಜು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.




