8 ಲಕ್ಷ ರೂ. ಲಂಚ ಪಡೆಯುವಾಗಲೇ ಬೆಂಗಳೂರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ GST ಸೂಪರಿಂಟೆಂಡೆಂಟ್
ಕಬ್ಬಿಣದ ಅಂಗಡಿ ಮಾಲೀಕನಿಂದ 8 ಲಕ್ಷ ರೂ. ಲಂಚ ಪಡೆಯುತ್ತಿದ್ದ ಜಿಎಸ್ಟಿ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತೀ ಹೆಚ್ಚು ಆರೋಪಗಳು ಕೇಳಿಬಂದ ಹಿನ್ನೆಲೆ ಬನ್ನೇರುಘಟ್ಟ ಮತ್ತು ಮಂಟಪ ಪಂಚಾಯತ್ ಸಿಬ್ಬಂದಿಗೂ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದರೆ, ಮತ್ತೊಂದೆಡೆ ನಿನ್ನೆ 50 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದೆ.

ಬೆಂಗಳೂರು, ಸೆಪ್ಟೆಂಬರ್ 17: ಕಬ್ಬಿಣದ ಅಂಗಡಿ ಮಾಲೀಕನಿಂದ 8 ಲಕ್ಷ ರೂ. ಲಂಚ ಪಡೆಯುವಾಗ ಜಿಎಸ್ಟಿ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಮೋಹಿತ್ ಪ್ರತಾಪ್ ಸಿಂಗ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಕಬ್ಬಿಣದ ಅಂಗಡಿ GST ವಿಚಾವಾಗಿ 20 ಲಕ್ಷ ಲಂಚ ಕೊಡುವಂತೆ ಜಮೀರ್ ಎಂಬವರ ಬಳಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ 8 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದೆ. ಅಧಿಕಾರಿ ಲಂಚ ಪಡೆಯುತ್ತಿರುವ ವಿಡಿಯೋ ಕೂಡ ಲಭ್ಯವಿದೆ ಎನ್ನಲಾಗಿದ್ದು, ಜಿಎಸ್ಟಿ ಸೂಪರಿಂಟೆಂಡೆಂಟ್ನನ್ನು ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಬನ್ನೇರುಘಟ್ಟ, ಮಂಟಪ ಪಂಚಾಯತ್ ಸಿಬ್ಬಂದಿಗೂ ಲೋಕಾಯುಕ್ತ ಶಾಕ್
ಅತೀ ಹೆಚ್ಚು ಆರೋಪಗಳು ಕೇಳಿಬಂದ ಹಿನ್ನೆಲೆ ಬನ್ನೇರುಘಟ್ಟ ಮತ್ತು ಮಂಟಪ ಪಂಚಾಯತ್ ಸಿಬ್ಬಂದಿಗೂ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ರೇಡ್ ನಡೆದಿದ್ದು, ಎರಡೂ ಪಂಚಾಯತ್ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಅದರಲ್ಲೂ ಬನ್ನೇರುಘಟ್ಟ ಪಂಚಾಯತ್ನಲ್ಲಿ ಅಕ್ರಮದ ಬಗ್ಗೆ ಸಾಲು ಸಾಲು ಆರೋಪ ಕೇಳಿಬಂದಿದ್ದ ಹಿನ್ನೆಲೆ ಲೋಕಾಯುಕ್ತ ಮಾಹಿತಿ ಕಲೆಹಾಕಿದೆ.
ಇದನ್ನೂ ಓದಿ: ಭೂ ದಾಖಲೆ ಸರಿಪಡಿಸಲು 1 ಕೋಟಿ ಲಂಚ ಕೇಳಿ, ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ 14 ದಿನ ನ್ಯಾಯಾಂಗ ಬಂಧನ
ಮತ್ತೊಂದೆಡೆ, ನಿನ್ನೆ ₹50 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದೆ. 33 ಎಕರೆ ಜಮೀನು ಸಂಬಂಧ ಭೂಮಿಯ ಖರಾಬು ತೆಗೆಯಲು, ಅಂದರೆ ಆ ದಾಖಲೆಯನ್ನು ಸರಿಪಡಿಸಲು ತಹಶೀಲ್ದಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನಗರದ ಕರ್ನಾಟಕ ಕಾಲೇಜು ಬಳಿ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಅವರು ಸಿಕ್ಕಿಬಿದ್ದಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




