ಬಾಗಲಕೋಟೆ ಪೆಟ್ರೋಲ್ ಬಂಕ್ನಲ್ಲಿ ರಿಯಾಲಿಟಿ ಚೆಕ್: ಇಂಧನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ, ಗ್ರಾಹಕರಲ್ಲಿ ಮೂಡಿದ ಅನುಮಾನ
ಬಾಗಲಕೋಟೆ ಪೆಟ್ರೋಲ್ ಪಂಪ್ಗಳಲ್ಲಿ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಇಂಧನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಪ್ರತಿ ಲೀಟರ್ಗೆ 80-100 ಮಿಲಿಲೀಟರ್ ಪೆಟ್ರೋಲ್ ಕಡಿಮೆ ಬಂದಿದೆ. ಇದು ಮಾಪನದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತದೆ ಮತ್ತು ಗ್ರಾಹಕರಿಗೆ ಮೋಸವಾಗುತ್ತಿರುವ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. ಮಾಪನ ಶಾಸ್ತ್ರ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಬಾಗಲಕೋಟೆ, ಸೆಪ್ಟೆಂಬರ್ 17: ರಾಜ್ಯದಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಸಿಗಬೇಕಾದ ಪ್ರಮಾಣಕ್ಕಿಂತ ಕಡಿಮೆ ಇಂಧನ ಪೂರೈಕೆಯಾಗುತ್ತಿದ್ಯಾ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಕೆಲ ಪೆಟ್ರೋಲ್ ಬಂಕ್ಗಳ ಕಳ್ಳಾಟ ಬಯಲಾಗಿದೆ. ಇತ್ತ ಬಾಗಲಕೋಟೆಯ ಆರ್ಟಿಒ ಕಚೇರಿ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಟಿವಿ9 ರಿಯಾಲಿಟಿ ಚೆಕ್ ವೇಳೆ ಪೆಟ್ರೋಲ್ ಪ್ರಮಾಣದಲ್ಲಿ ಅನುಮಾನ ಮೂಡಿಸಿದೆ.
ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದ್ದೇನು?
ಮೊದಲಿಗೆ ಬೈಕ್ನಲ್ಲಿದ್ದ ಪೆಟ್ರೋಲ್ ಅನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಬಳಿಕ ಬೈಕ್ನ್ನು ಸ್ಟಾರ್ಟ್ ಮಾಡದೆ ತಳ್ಳಿಕೊಂಡು ಪೆಟ್ರೋಲ್ ಪಂಪ್ಗೆ ತೆಗೆದುಕೊಂಡು ಹೋಗಲಾಗಿದೆ. ನಂತರ ಬೈಕ್ಗೆ ನೇರವಾಗಿ 1 ಲೀಟರ್ ಪೆಟ್ರೋಲ್ ಹಾಕಿಸಲಾಗಿದೆ. ಇಂಧನ ತುಂಬಿಸಿಕೊಂಡ ಬಳಿಕವೂ ಬೈಕ್ ಸ್ಟಾರ್ಟ್ ಮಾಡದೆ ತಳ್ಳಿಕೊಂಡೇ ವಾಪಸ್ ತರಲಾಗಿದೆ.
ಪ್ರಮಾಣದಲ್ಲಿ 80 ರಿಂದ 100 ಎಂ.ಎಲ್. ವ್ಯತ್ಯಾಸ
ನಂತರ ಬೈಕನ್ನು ಸಂಪೂರ್ಣವಾಗಿ ಬಗ್ಗಿಸಿ, ಅಲುಗಾಡಿಸಿ ಟ್ಯಾಂಕ್ನಲ್ಲಿದ್ದ ಇಂಧನವನ್ನು ಪುನಃ 1 ಲೀಟರ್ ಬಾಟಲಿಗೆ ತೆಗೆದು ಅಳತೆ ಮಾಡಲಾಯಿತು. ಈ ವೇಳೆ ಬಾಟಲಿಯಲ್ಲಿ ಬರಬೇಕಿದ್ದ ಅಳತೆಗಿಂತ ಕನಿಷ್ಠ 250 ಎಂ.ಎಲ್. ಪೆಟ್ರೋಲ್ ಕಡಿಮೆ ಬಂದಿದೆ. ಬೈಕ್ನ ಕಾರ್ಬೊರೇಟರ್ ಹಾಗೂ ಟ್ಯಾಂಕ್ನ ತಳಮಟ್ಟದಲ್ಲಿ ಅಂದಾಜು 150 ಎಂ.ಎಲ್. ಇಂಧನ ಉಳಿದಿದೆ ಎಂದು ಲೆಕ್ಕ ಹಾಕಿದರೂ, ಇನ್ನೂ ಕನಿಷ್ಠ 80 ರಿಂದ 100 ಎಂ.ಎಲ್.ನಷ್ಟು ಪೆಟ್ರೋಲ್ ಕಡಿಮೆಯಾಗಿರುವುದು ಪತ್ತೆಯಾಗಿದೆ.
ಮಾಪನ ಶಾಸ್ತ್ರ ಇಲಾಖೆ ಕ್ರಮಕ್ಕೆ ಆಗ್ರಹ
ನೇರವಾಗಿ ಬಾಟಲಿಯಲ್ಲಿ ಪಡೆದ ಪೆಟ್ರೋಲ್ ಪ್ರಮಾಣಕ್ಕೂ, ಬೈಕ್ಗೆ ಹಾಕಿಸಿದ ಇಂಧನದ ಪ್ರಮಾಣಕ್ಕೂ ನಡುವೆ ಇಷ್ಟೊಂದು ವ್ಯತ್ಯಾಸ ಕಂಡುಬಂದಿರುವುದು ಗ್ರಾಹಕರಿಗೆ ಆಗುತ್ತಿರುವ ವಂಚನೆಯ ಸಂಶಯ ಮೂಡಿದೆ. ಹೀಗಾಗಿ ಸಂಬಂಧಪಟ್ಟ ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸರ್ಕಾರವೇ ಮುಂದಾಗಬೇಕು
ಇನ್ನು ಇತ್ತ ಹಾಸನ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 231 ಪೆಟ್ರೋಲ್ ಬಂಕ್ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವುಗಳಲ್ಲಿ ಹೆಚ್ಪಿಸಿಎಲ್ನ 76, ಬಿಪಿಸಿಎಲ್ನ 50, ಐಒಸಿಎಲ್ನ 78 ಹಾಗೂ ಇತರ ಸಂಸ್ಥೆಗಳ 36 ಬಂಕ್ಗಳು ಒಳಗೊಂಡಿವೆ. ಗ್ರಾಹಕರು ಸರ್ಕಾರದ ಕಟ್ಟುನಿಟ್ಟಿನ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ‘ನಾವು ಹಾಕಿಸುವ ಇಂಧನ ಸರಿಯಾಗಿಯೇ ಇರುತ್ತದೆ ಎಂದು ನಂಬಿರುತ್ತೇವೆಯೇ ಹೊರತು, ಪಂಪ್ಗಳಲ್ಲಿ ವಾಸ್ತವವಾಗಿ ಎಷ್ಟು ಪೆಟ್ರೋಲ್ ಅಥವಾ ಡೀಸೆಲ್ ಬೀಳುತ್ತದೆ ಎಂಬುದನ್ನು ನಾವಾಗಿಯೇ ಪರಿಶೀಲಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ನಡೆಯುತ್ತಿದೆಯೇ ಅಳತೆ ವಂಚನೆ? ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಕಾಣಿಸಿದ್ದೇನು ನೋಡಿ
ಆದ್ದರಿಂದ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸರ್ಕಾರವೇ ಕಾಲಕಾಲಕ್ಕೆ ದಿಢೀರ್ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Thu, 17 September 26




