ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳ ಮಹಾಪೂರ: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಕಲಬುರಗಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ವಾರ್ಷಿಕ 5000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಕೈಗಾರಿಕಾ ಬೆಳವಣಿಗೆ, ಹೊಸ ಉದ್ಯಮಗಳ ಸ್ಥಾಪನೆ, ಪ್ರವಾಸೋದ್ಯಮ ಉತ್ತೇಜನ ಹಾಗೂ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗುವುದು. ಬಡವರಿಗೆ 50,000 ನಿವೇಶನ, ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ, ಕ್ರೀಡಾ ನಗರಿ ಮತ್ತು ಎಐ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ.

ಕಲಬುರಗಿ, ಸೆಪ್ಟೆಂಬರ್ 17: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಪ್ರತಿ ವರ್ಷ 5,000 ಕೋಟಿ ರೂ ಅನುದಾನ ನೀಡುತ್ತಿದ್ದೇವೆ. ಈ ಭಾಗದಲ್ಲಿ ಯಾವುದೇ ಸಂಪನ್ಮೂಲ ಕೊರತೆ ಇಲ್ಲ. ಕೈಗಾರಿಕೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲು ಗಮನ ಹರಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಹೊಸ ಉದ್ಯಮ ಬರಬೇಕು’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಉದ್ಯೋಗ ಮತ್ತು ಪ್ರವಾಸೋದ್ಯಮಕ್ಕೆ ಒತ್ತು
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ‘ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದೇವೆ. ರೈತರ ಆದಾಯ ಹೆಚ್ಚಿಸಲು ಪಾರಂಪರಿಕ ಬೆಳೆಗೆ ಒತ್ತು ನೀಡುತ್ತೇವೆ. ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ ನೀಡುತ್ತಿದ್ದೇವೆ’ ಎಂದರು.
ರೈತರ ಆದಾಯ ವೃದ್ಧಿ ಹಾಗೂ ಆರೋಗ್ಯ ಅಭಿಯಾನ
‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಈ ಭಾಗದ ಪಾರಂಪರಿಕ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಇದೇ ವೇಳೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಭಾಗದಲ್ಲಿ ಕಂಡುಬರುವ ರಕ್ತಹೀನತೆ ಪ್ರಮಾಣವನ್ನು ತಡೆಗಟ್ಟಲು ವಿಶೇಷ ಜಾಗೃತಿ ಹಾಗೂ ಚಿಕಿತ್ಸಾ ಅಭಿಯಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಮಾಹಿತಿ ನೀಡಿದರು.
ಮೂಲಸೌಕರ್ಯ, ಕ್ರೀಡಾ ನಗರಿ ಮತ್ತು ತಂತ್ರಜ್ಞಾನ
‘ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಕಲಬುರಗಿಯಲ್ಲಿ ಸುಸಜ್ಜಿತ ಕ್ರೀಡಾ ನಗರಿ ಸ್ಥಾಪನೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
ವಸತಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಹಸಿರೀಕರಣ
‘ವಸತಿ ರಹಿತ ಬಡವರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಈ ಭಾಗದಲ್ಲಿ ಒಟ್ಟು 50 ಸಾವಿರ ನಿವೇಶನಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಕೆಕೆಆರ್ಡಿಬಿ ವತಿಯಿಂದ ಅನುದಾನ ನೀಡಲು ಸೂಚಿಸಲಾಗಿದ್ದು, ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶ ಹೆಚ್ಚಿಸಲು ಬೃಹತ್ ಮಟ್ಟದಲ್ಲಿ ವೃಕ್ಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.
ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ ಎಂದ ಡಿಕೆ ಶಿವಕುಮಾರ್
ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಸಿಎಂ, ‘ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ, ಆದರೂ ಬರದ ವಿಚಾರದ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆದಿದ್ದೇವೆ. ಕಸ್ತೂರಿ ರಂಗನ್ ವರದಿ, ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರ ಸಾಲಮನ್ನಾ ಮಾಡುವಂತೆ ಬಹಳ ಜನ ಹೇಳುತ್ತಿದ್ದಾರೆ.’
ಇದನ್ನೂ ಓದಿ: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಆಕರ್ಷಕ ಡ್ರೋನ್ ಶೋ ಗೆ ಸಿಎಂ ಫಿದಾ!
‘ಅಶೋಕ್ ಅಣ್ಣ ಸೇರಿ ಹಲವರನ್ನು ದೆಹಲಿಗೆ ಕರೆದೊಯ್ಯಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೇಳಬೇಕಿದೆ. ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ನಿರ್ಧರಿಸಲಾಗಿದ್ದು, ಎಲ್ಲೆಲ್ಲಿ ಮೋಡಗಳು ಸಿಗುತ್ತೋ ಅಲ್ಲಿ ಈಗಾಗಲೇ ಬಿತ್ತನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಪಿಕ್ ಪಾಕೆಟ್ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್
‘ಯುಪಿಐ ಪಾವತಿ ಮೇಲೆ ತೆರಿಗೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ವರ್ತಕರ ಮೇಲೆ ತೆರಿಗೆ ವಿಧಿಸಿದರೆ ಅವರು ಯಾರ ಮೇಲೆ ಹಾಕುತ್ತಾರೆ’ ಎಂದು ಪ್ರಶ್ನಿಸಿದರು. ‘ಎಲ್ಲಾ ಕೇಂದ್ರ ಮಂತ್ರಿಗಳಿಗೆ ಪಿಕ್ ಪಾಕೆಟ್ ವಿಷಯದಲ್ಲಿ ಪಿಹೆಚ್ಡಿ ಕೊಡಬೇಕು. ಏಕೆಂದರೆ ಪ್ರತಿನಿತ್ಯ ಇವರು ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಇದು ಖಂಡನೀಯ, ನಾವು ಸರ್ಕಾರ ನಿರ್ಧಾರವನ್ನ ಖಂಡಿಸುತ್ತೇವೆ. ಡಿಜಿಟಲ್ ವಹಿವಾಟು ಅಂತ ಹೇಳಿದ್ದರು, ಈಗ ಏಕೆ ಮತ್ತೆ ತೆರಿಗೆ ಹಾಕುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




