ಕೊಡಗಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ: ಒಬ್ಬನೇ ನಾಲ್ವರನ್ನು ಕೊಚ್ಚಿ ಕೊಂದ
ಪೊನ್ನಂಪೇಟೆ ತಾಲೂಕಿನ ಕೊಳತೋಡು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 75 ವರ್ಷದ ಕರಿಯ, 70 ವರ್ಷದ ಗೌರಿ, 35 ವರ್ಷದ ನಾಗಿ ಮತ್ತು 7 ವರ್ಷದ ಕಾವೇರಿ ಕೊಲೆಯಾದವರು. ಅಕ್ರಮ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಕೊಡಗು, ಮಾರ್ಚ್ 28: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆಗೈದಿರುವ ಘಟನೆ ಪೊನ್ನಂಪೇಟೆ (Ponnammapet) ತಾಲೂಕಿನ ಕೊಳತೋಡು ಗ್ರಾಮದಲ್ಲಿ ನಡೆದಿದೆ. ಕರಿಯ (75), ಗೌರಿ (70), ನಾಗಿ (35), ಕಾವೇರಿ (7) ಕೊಲೆಯಾದವರು. ಆರೋಪಿ ಗಿರೀಶ್ (35) ನಾಲ್ವರನ್ನೂ ಕತ್ತಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಕುಟುಂಬ ಕಾಫಿ ತೋಟ ಲೈನ್ ಮನೆಯಲ್ಲಿ ವಾಸವಿತ್ತು. ಇನ್ನು, ಆರೋಪಿ ಗಿರೀಶ್ ಈ ಕುಟುಂಬದ ಅಳಿಯನಾಗಿದ್ದಾನೆ. ಪತ್ನಿ, ಮಗಳು, ಅತ್ತೆ ಮತ್ತು ಮಾವನನ್ನೇ ಕೊಲೆ ಮಾಡಿದ್ದಾನೆ. ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೋಪಿ ಗಿರೀಶ್ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಆರೋಪಿ ಪತ್ತೆಗೆ ಒಂದು ತಂಡ ರಚಿಸಿ ಕೇರಳಕ್ಕೆ ಕಳುಹಿಸಲಾಗಿದೆ. ಯಾವ ವಿಚಾರಕ್ಕೆ ಕೊಲೆ ನಡೆದಿದೆ ಅಂತ ತನಿಖೆ ನಡೆಸುತ್ತಿದ್ದೇವೆ. ಅಕ್ರಮ ಸಂಬಂಧ ಅಥವಾ ಹಣಕಾಸಿನ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಳಿಕ ಪೂರ್ಣಮಾಹಿತಿ ದೊರೆಯಲಿದೆ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Fri, 28 March 25