ಅನ್ನ, ನೀರು ಸಿಗದೇ ವಾನರ ಸೇನೆ ಪರದಾಟ: ಕಂಡಕಂಡವರ ಮೇಲೆ ದಾಳಿ; 15ಕ್ಕೂ ಹೆಚ್ಚು ಜನ್ರರಿಗೆ ಗಾಯ

ಕೋಲಾರದ ದಕ್ಷಿಣಕಾಶಿ ಅಂತರಗಂಗೆಯಲ್ಲಿ ತೀವ್ರ ಬರ ಮತ್ತು ನೀರಿನ ಕೊರತೆಯಿಂದ ಸಾವಿರಾರು ಮಂಗಗಳು ಹಸಿವು-ಬಾಯಾರಿಕೆಯಿಂದ ಬಳಲುತ್ತಿವೆ. ಆಹಾರ ಅರಸಿ ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಈ ವಾನರಸೇನೆಗೆ ಶಾಶ್ವತ ಪರಿಹಾರಕ್ಕೆ ಜನರು ಆಗ್ರಹಿಸಿದ್ದಾರೆ.

ಅನ್ನ, ನೀರು ಸಿಗದೇ ವಾನರ ಸೇನೆ ಪರದಾಟ: ಕಂಡಕಂಡವರ ಮೇಲೆ ದಾಳಿ; 15ಕ್ಕೂ ಹೆಚ್ಚು ಜನ್ರರಿಗೆ ಗಾಯ
ಕೋತಿಗಳ ಕಾಟ
Image Credit source: tv9 kannada
Edited By:

Updated on: Apr 04, 2026 | 9:22 PM

ಕೋಲಾರ, ಏಪ್ರಿಲ್​ 04: ಬಿರು ಬೇಸಿಗೆ ಆರಂಭವಾಗುತ್ತಿದ್ದಂತೆ ಆಹಾರ ಮತ್ತು ನೀರಿನ ಅಭಾವದಿಂದ ಆಕ್ರೋಶಗೊಂಡ ಕೋತಿಗಳು (monkeys) ಪ್ರವಾಸಿಗರು ಮತ್ತು ಭಕ್ತರ ಮೇಲೆ ದಾಳಿ ನಡೆಸಿ 15ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಅಂತರಗಂಗೆ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಕೋತಿಗಳ ದಾಳಿಗೆ ಒಳಗಾದ ಭಕ್ತರು ಮತ್ತು ಪ್ರವಾಸಿಗರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರದ ನಾಡು ಕೋಲಾರಕ್ಕೆ ಈ ಬಾರಿ ಉತ್ತಮ ಮಳೆಯಾಗಿದ್ದರೂ ಸದ್ಯ ಬಿರು ಬಿಸಿಲು ನೆತ್ತಿ ಸುಡುತ್ತಿದೆ. ಪರಿಣಾಮ ಮಿತಿಮೀರಿದ ತಾಪಮಾನದಿಂದ ತತ್ತರಿಸಿ ಹೋಗಿರುವ ಜನರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮನುಷ್ಯರ ಸ್ಥಿತಿ ಹೀಗಿದ್ದರೆ ಪ್ರಾಣಿಗಳ ಪರಿಸ್ಥಿತಿ ಊಹಿಸಿಕೊಳ್ಳುವುದು ಕಷ್ಟ ಸಾಧ್ಯ. ಅದರಲ್ಲೂ ಕೋಲಾರದ ಪ್ರಸಿದ್ಧ ಯಾತ್ರಾ ಸ್ಥಳವಾದ ಅಂತರಗಂಗೆಯ ಬೆಟ್ಟದಲ್ಲಿರುವ ಸಾವಿರಾರು ಕೋತಿಗಳದ್ದು ಹೇಳತೀರದ ಪರಿಸ್ಥಿತಿ.

ಇದನ್ನೂ ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಬಿಸಿಲ ಬೇಗೆ ಬರಗಾಲ ಇಲ್ಲಿನ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿವೆ. ಪರಿಣಾಮ ಅನ್ನ, ನೀರು ಸಿಗದೆ ಕೆಲವು ಅಸ್ವಸ್ಥವಾಗಿದ್ದರೆ ಮತ್ತೆ ಕೆಲವು ಪ್ರವಾಸಿಗರ ಮೇಲೆ ದಾಳಿ ಮಾಡಿ ಅವರ ಬಳಿ ಇರುವ ಬ್ಯಾಗ್‌ಗಳನ್ನ ಕಸಿದುಕೊಳ್ಳುತ್ತಿವೆ. ಈಗಾಗಲೆ 15ಕ್ಕೂ ಹೆಚ್ಚು ಜನರನ್ನ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ವಾನರ ಸೇನೆ ಮಾತ್ರ ಕ್ರೂರಿಗಳಂತೆ ವರ್ತಿಸಲು ಆರಂಭಿಸಿವೆ. ವ್ಯಾಪಾರ ಮಾಡುವ ಮಹಿಳೆ ಅಶ್ವಿನಿ, ಪ್ರವಾಸಿಗರಾದ ಭವ್ಯ, ಸಂದ್ಯ ಹಾಗೂ ಮಿತ್ರ ಶ್ರೀನಾಥ್ ಎಂಬುವವರ ಮೇಲೆ ದಾಳಿ ಮಾಡಿವೆ.

ಪ್ರವಾಸಿಗರೇ ಟಾರ್ಗೆಟ್​

ಇನ್ನು ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಸಾವಿರಾರು ಕೋತಿಗಳು ಬೆಟ್ಟದಲ್ಲಿ ವಾಸವಿವೆ. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ಇಲ್ಲಿನ ವಾನರ ಸೈನ್ಯಕ್ಕೆ ನೀರು, ಆಹಾರದ ಸಮಸ್ಯೆ ತಲೆ ದೂರುತ್ತೆ. ಕೆಲ ಕೋತಿಗಳು ಪ್ರವಾಸಿಗರನ್ನು ಕಾಡಿ, ಬೇಡಿ ಜೀವ ಉಳಿಸಿಕೊಂಡರೆ ಮತ್ತೆ ಕೆಲವು ಜನರ ಮೇಲೆ ಮೃಗಗಳಂತೆ ವರ್ತಿಸುತ್ತಾ ಗಾಯಗೊಳಿಸಿವೆ. ಮತ್ತೆ ಕೆಲ ಕೋತಿಗಳು ಇಲ್ಲಿಗೆ ಬರುವ ಪ್ರವಾಸಿಗರ ಕೈಕಾಲು ಹಿಡಿದು ಕೊಟ್ಟ ತಿಂಡಿ ತಿನಿಸು ತಿಂದು ಬದುಕುತ್ತಿವೆ. ಅನ್ನ, ನೀರು ಇಲ್ಲದೆ ವಾರದಲ್ಲಿ ಎರಡ್ಮೂರು ದಿನ ಮಾರುಕಟ್ಟೆಯಿಂದ ಕೆಲವು ದಾನಿಗಳು ಹಣ್ಣು, ತರಕಾರಿಗಳನ್ನ ತಂದುಕೊಡುವುದು ವಾಡಿಕೆ.

ಹಣ್ಣಿನ ಗಿಡ-ಮರ ಬೆಳೆಸುವಂತೆ ಆಗ್ರಹ

ಇನ್ನು ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ಯೋಜನೆಗಳು ಮಾತ್ರ ಪುಸ್ತಕದಲ್ಲಿ ಇದೆ. ಬದಲಾಗಿ ಇಲ್ಲಿನ ಕೆಲವು ಪ್ರಾಣಿ ಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ನೀಡುತ್ತಿದ್ದಾರೆ. ಅದನ್ನು ಹೊರತು ಪಡಿಸಿದರೆ ಕೋತಿಗಳಿಗೆ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿ ಎನ್ನುವಂತ್ತಾಗಿದ್ದು, ಅರಣ್ಯ ಇಲಾಖೆ ಬೆಟ್ಟದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವ ಮರ, ಗಿಡಗಳನ್ನ ಬೆಳೆಸಬೇಕಿದೆ. ಹಣ್ಣು ಸಿಗುವ ಗಿಡಮರಗಳನ್ನ ಬೆಳೆಸಬೇಕು ಹಾಗೂ ಅವುಗಳಿಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರಾದ ರವಿ ಅವರ ಮಾತು.

ಇದನ್ನೂ ಓದಿ: ಭಾರಿ ಗಾತ್ರದ ಹಾವನ್ನು ನುಂಗುತ್ತಿದ್ದ ಮತ್ತೊಂದು ಹಾವು! ಉರಗ ರಕ್ಷಕರಿಂದ ರಕ್ಷಣೆ, ಮೈಜುಮ್ಮೆನ್ನಿಸುವ ವಿಡಿಯೋ ಇಲ್ಲಿದೆ ನೋಡಿ

ಒಟ್ಟಾರೆ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಿ ಹನುಮಂತನಿಗೆ ಪೂಜೆ ಮಾಡುವ ನಮ್ಮ ಜನರು, ಹನುಮಂತನ ಪ್ರತಿರೂಪ ಎಂದು ಹೇಳಲಾಗುವ ಈ ಕೋತಿಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಇನ್ನಾದರೂ ಪ್ರಾಣಿ ಪ್ರಿಯರು, ಜಿಲ್ಲಾಡಳಿತ ಈ ಕೋತಿಗಳ ಹಸಿವು ನೀಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:20 pm, Sat, 4 April 26

Follow Us