ಕೋಲಾರ: ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಗೆ ಕಿರುಕುಳ; ಕತ್ತು ಹಿಸುಕಿ ಕೊಂದ ಪತಿ

ಹೆಂಡತಿ ತನ್ನ ತವರು ಮನೆಗೆ ಹೋಗುವುದು ಸಹಜ. ಆದರೆ ಇದೇ ಅವಳಿಗೆ ಮುಳುವಾಗಿದೆ. ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಹೆಂಡತಿ ಮೇಲೆ ಅನುಮಾನಗೊಂಡ ಪತಿ ಆಕೆಯನ್ನು ಕೊಲೆ ಮಾಡಿರುವಂತಹ ಘಟನೆ ಕೋಲಾರದ ಜನ್ನಘಟ್ಟದಲ್ಲಿ ನಡೆದಿದೆ. ಸದ್ಯ ಮೃತಳ ಪೋಷಕರ ದೂರಿನ ಮೇರೆಗೆ ಪೊಲೀಸರು ಪತಿಯನ್ನ ಬಂಧಿಸಿದ್ದಾರೆ.

ಕೋಲಾರ: ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಗೆ ಕಿರುಕುಳ; ಕತ್ತು ಹಿಸುಕಿ ಕೊಂದ ಪತಿ
ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಗೆ ಕಿರುಕುಳ

Updated on: Nov 23, 2025 | 3:34 PM

ಕೋಲಾರ, ನವೆಂಬರ್ 23: ಪದೇ ಪದೇ ತವರು ಮನೆಗೆ ಹೋಗಿ ಬರುತ್ತಿದ್ದ ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಕೋಲಾರದ (Kolar) ಜನ್ನಘಟ್ಟ ಗ್ರಾಮದಲ್ಲಿ ನಡೆದಿದೆ. ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ವ್ಯಕ್ತಿ, ಆಕೆಯದ್ದು ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ. ಈ ವೇಳೆ ಅನುಮಾನಗೊಂಡ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ವೇಳೆ ತಪ್ಪೊಪ್ಪಿಕೊಂಡ ಪತಿ

ಜನ್ನಘಟ್ಟ ಗ್ರಾಮದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಶಿವರಾಜ್ ಎಂಬಾತ ತನ್ನ ಹೆಂಡತಿ ಕಾವ್ಯ ಎಂಬಾಕೆಯ ಮೇಲೆ ಅನುಮಾನ ಪಟ್ಟು ಆಕೆಯೊಂದಿಗೆ ಜಗಳ ಆರಂಭಿಸಿದ್ದ. ಈ ವೇಳೆ ಇಬ್ಬರ ನಡುವಿನ ಗಲಾಟೆ ತೀವ್ರಗೊಂಡು, ಶೀವರಾಜ್ ತನ್ನ ಪತ್ನಿಗೆ ಹೊಡೆದಿದ್ದ. ಆಗ ಪತ್ನಿ ಕೂಡಾ ತಿರುಗಿಸಿ ಗಂಡನಿಗೆ ಹೊಡೆದಿದ್ದಳು. ಇದರಿಂದ ಕೋಪಗೊಂಡ ಪತಿ, ಆಕೆಯನ್ನು ನೆಲಕ್ಕೆ ಬೀಳಿಸಿಕೊಂಡು ಆಕೆಯ ಎದೆಯ ಮೇಲೆ ಕುಳಿತುಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ನ.21ರ ಮಧ್ಯಾಹ್ನ ಹೊತ್ತಿಗೆ ಕೊಲೆ ಮಾಡಿ ಸಂಜೆ 5 ಗಂಟೆ ವರೆಗೆ ಹೊರಗಡೆ ಸುತ್ತಾಡಿಕೊಂಡಿದ್ದ ಶಿವರಾಜ್, ಸಂಜೆ ಮನೆಗೆ ಬಂದು ಹೆಂಡತಿ ಉಸಿರಾಡುತ್ತಿಲ್ಲ ಎಂದು ನಾಟಕವಾಡಿದ್ದ. ತಕ್ಷಣ ಅಕ್ಕಪಕ್ಕದ ಮೆನಯವರ ನೆರವಿನೊಂದಿಗೆ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದ. ಆದರೆ ವೈದ್ಯರು ಆಕೆ ಮೃತಪಟ್ಟು ನಾಲ್ಕೈದು ಗಂಟೆಗಳಾಗಿವೆ ಎಂದಿದ್ದರು. ಇದರಿಂದ ಅನುಮಾನಗೊಂಡ ಕಾವ್ಯಳ ಪೊಷಕರು, ಪೊಲೀಸರಿಗೆ ದೂರು ನೀಡಿದ್ದರು.ಈ ಹಿನ್ನೆಲೆ ಪೊಲೀಸರು ಶಿವರಾಜ್​ನನ್ನು ಬಂಧಿಸಿದ್ದರು. ತನಿಖೆ ವೇಳೆ ಹೆಂಡತಿಯ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ತವರಿನಿಂದ ಹಣ ತೆಗೆದುಕೊಂಡು ಬರುವಂತೆ ಕಿರುಕುಳ

ಇನ್ನು ಕಳೆದ ಎಂಟು ವರ್ಷಗಳ ಹಿಂದೆ ಬೆಂಗಳೂರು ವಿಲ್ಸನ್ ಗಾರ್ಡನ್​ ನಿವಾಸಿಯಾಗಿದ್ದ ಕಾವ್ಯಾ, ಜನ್ನಘಟ್ಟ ಗ್ರಾಮದ ಶಿವರಾಜ್​ನನ್ನು ವರಿಸಿದ್ದಳು. ದಂಪತಿಗೆ 7 ವರ್ಷದ ಮಗಳೂ ಇದ್ದಳೆಂದು ತಿಳಿದು ಬಂದಿದೆ. ಕಾಲಕ್ರಮೇಣ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯಲಾರಂಭಿಸಿತ್ತು. ಇತ್ತೀಚಿಗೆ ಹೆಂಡತಿ ಪದೇ ಪದೇ ತವರು ಮನೆಗೆ ಹೋಗುತ್ತಾಳೆ ಎಂದು ಅನುಮಾನ ಪಡುತ್ತಿದ್ದ ಪತಿ, ಗಂಡು ಮಗುವಾಗಿಲ್ಲ ಎನ್ನುವ ಕಾರಣಕ್ಕೂ ಸಾಕಷ್ಟು ಬಾರಿ ಪತ್ನಿಯೊಂದಿಗೆ ಜಗಳವಾಡಿದ್ದ.

ಇದನ್ನೂ ಓದಿ ಪಕ್ಕದ ಜಮೀನಿನವರನ್ನ ಜೈಲಿಗೆ ಕಳಿಸಬೇಕೆಂದು ಸ್ವಂತ ಮಗಳನ್ನೇ ಕೊಂದ ತಂದೆ

ಅಷ್ಟೇ ಅಲ್ಲದೇ ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಶಿವರಾಜ್ ಹೆಂಡತಿಗೆ ಹೊಡೆಯುತ್ತಿದ್ದ ಎಂದೂ ಆರೋಪಿಸಲಾಗಿದೆ. ಸಾಕಷ್ಟು ರಾಜಿ ಪಂಚಾಯ್ತಿಯ ನಂತರವೂ ಗಂಡನಿಗೆ ತನ್ನ ಹೆಂಡತಿ ಮೇಲಿದ್ದ ಅನುಮಾನ ಕಡಿಮೆಯಾಗಿರದ ಕಾರಣ ಶುಕ್ರವಾರ ಮಗುವನ್ನು ಶಾಲೆಗೆ ಕಳಿಸಿದ ನಂತರ ಹೆಂಡತಿಯೊಂದಿಗೆ ಮತ್ತೊಮ್ಮೆ ಜಗಳಕ್ಕಿಳಿದಿದ್ದ. ಜಗಳ ಹೊಡೆದಾಟಕ್ಕೆ ತಿರುಗಿ,ತನಗೆ ಹೊಡೆಯಲು ಮುಂದಾದ ಹೆಂಡತಿಯನ್ನು ಆರೋಪಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ತನಿಖೆಯ ವೇಳೆ ಆತನೇ ತನ್ನ ಪತ್ನಿಯನ್ನು ಹತ್ಯೆಗೈದಿರುವುದು ದೃಢಪಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Loading...
Unable to load recommendations.
Follow Us