ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ

ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲ ತಾಪಮಾನದಿಂದ ಕೋಲಾರ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. 37-38 ಡಿಗ್ರಿ ತಾಪಮಾನದಲ್ಲಿ ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿಲ್ಲ. ಹೀಗಾಗಿ ರೇಷ್ಮೆ ಹುಳುಗಳ ರಕ್ಷಣೆಗೆ ಬೆಳೆಗಾರರು ನಾನಾ ಕಸರತ್ತು ಮಾಡುತ್ತಿದ್ದಾರೆ. ಇನ್ನೊಂದೆಡೆ ದರ ಕುಸಿತದಿಂದ ಆರ್ಥಿಕವಾಗಿ ಹೊಡೆತ ಬಿದ್ದಿದೆ.

ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ
ರೇಷ್ಮೆ
Image Credit source: tv9 kannada
Edited By:

Updated on: May 03, 2026 | 9:44 PM

ಕೋಲಾರ, ಮೇ 03: ರಾಜ್ಯದಲ್ಲಿ ಈ ವರ್ಷ ಏರಿಕೆಯಾಗುತ್ತಿರುವ ಭೀಕರ ಬಿಸಿಲಿನ (Heatwave) ತಾಪಮಾನವು ಕೇವಲ ಜನಸಾಮಾನ್ಯರನ್ನಷ್ಟೇ ಅಲ್ಲ, ರೇಷ್ಮೆ (Silk) ಕೃಷಿಕರ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ಹಗಲಿನಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿರುವ ತಾಪಮಾನ, ಸೂಕ್ಷ್ಮವಾದ ರೇಷ್ಮೆ ಹುಳುಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ರೇಷ್ಮೆ ಹುಳುಗಳು ಆರೋಗ್ಯವಾಗಿ ಬೆಳೆದು ಗೂಡು ಕಟ್ಟಲು ಕೊಠಡಿಯ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬಾರದು. ಆದರೆ, ಹೊರಗಿನ ಉಷ್ಣಾಂಶ ಮಿತಿ ಮೀರುತ್ತಿರುವುದು ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ.

ಕೋಲಾರ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಿಂದಾಗಿ ರೇಷ್ಮೆ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಿತಿಮೀರಿದ ತಾಪಮಾನದಿಂದಾಗಿ ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿಲ್ಲ. ಹುಳು ಮನೆಯ ಕೊಠಡಿ ಉಷ್ಣಾಂಶ 27 ಡಿಗ್ರಿಗಿಂತ ಏರಿಕೆಯಾದರೆ ಹುಳುಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೊತೆಗೆ ತಾಪಮಾನ ಏರಿಕೆಯಿಂದ ಹುಳುಗಳು ಗೂಡು ಕಟ್ಟುವುದನ್ನು ಮರೆತುಬಿಡುತ್ತವೆ.

ತಾಪಮಾನ ನಿಯಂತ್ರಣಕ್ಕೆ ರೈತರ ಹರಸಾಹಸ

ಸದ್ಯ ಕೋಲಾರ ಜಿಲ್ಲೆಯಲ್ಲಿ ದಾಖಲಾಗಿರುವ ಸುಮಾರು 37 ರಿಂದ 38 ಡಿಗ್ರಿ ತಾಪಮಾನವನ್ನು ನಿಯಂತ್ರಣಕ್ಕೆ ತರಲು ರೇಷ್ಮೆ ಹುಳು ಸಾಕಾಣೆ ಮಾಡುವ ಕೊಠಡಿಯ ಸುತ್ತಲೂ ಉಷ್ಣಾಂಶವನ್ನು ನಿಯಂತ್ರಣ ಮಾಡಲು ರೇಷ್ಮೆ ಬೆಳೆಗಾರರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ರೇಷ್ಮೆ ಹುಳು ಮನೆಯ ಸುತ್ತಲೂ ನೆನೆಸಿದ ಗೋಣಿ ಚೀಲಗಳನ್ನು ಹಾಕುವುದು, ಹುಳು ಮನೆಯ ಮೇಲೆ ತಾಪಮಾನ​ ನಿಯಂತ್ರಣ ಮಾಡಲು ತೆಂಗಿನ ಗರಿಗಳ ಚಪ್ಪರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಮೊದಲ ಬಾರಿಗೆ ರೇಷ್ಮೆ ಗೂಡಿಗೆ ಬಂಗಾರದ ಬೆಲೆ: ದಾಖಲೆ ದರಕ್ಕೆ ರೈತರು ಫುಲ್ ಖುಷ್

ಇನ್ನು ಕೊಠಡಿಯ ಒಳಗಡೆ ಎರಡು-ಮೂರು ಏರ್ ಕೂಲರ್​ ಇರಿಸಿ ದಿನ 24 ಗಂಟೆ ಕೂಡ ಚಾಲನೆಯಲ್ಲಿಡಲಾಗುತ್ತಿದೆ. ಜೊತೆಗೆ ಯಾವುದೇ ಕಾರಣಕ್ಕೂ ಕೊಠಡಿಯ ತಾಪಮಾನ ಏರಿಕೆಯಾಗದಂತೆ ಟೆಂಪರೇಚರ್ ಮೀಟರ್​ಗಳನ್ನು ಹಾಕಿ ಯಾವುದೇ ಕಾರಣಕ್ಕೆ ಹುಳು ಮನೆಯ ಒಳಗೆ 27 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶ ಏರಿಕೆಯಾಗದಂತೆ ಕ್ರಮವಹಿಸಲಾಗುತ್ತಿದೆ.

ಸಂಕಷ್ಟದ ಸುಳಿಯಲ್ಲಿ ರೇಷ್ಮೆ ಉದ್ಯಮ

ಕೋಲಾರ ಜಿಲ್ಲೆಯು ರೇಷ್ಮೆ ಕೃಷಿಗೆ ಜೀವನಾಡಿಯಾಗಿದೆ. ಸುಮಾರು 1,477 ಗ್ರಾಮಗಳ 19,739 ರೈತರು ರೇಷ್ಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 20,134 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ನಡೆಯುತ್ತಿದ್ದು, ವಾರ್ಷಿಕ 11,500 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತದೆ. ಇಷ್ಟೊಂದು ಬೃಹತ್ ಮಟ್ಟದಲ್ಲಿ ಕುಟುಂಬಗಳು ಅವಲಂಬಿತವಾಗಿರುವ ಈ ಉದ್ಯಮಕ್ಕೆ, ಈಗ ಬಿಸಿಲು ಮತ್ತು ದರ ಕುಸಿತ ಎಂಬ ಎರಡು ದೊಡ್ಡ ಸವಾಲುಗಳು ಎದುರಾಗಿವೆ.

ದರ ಕುಸಿತದಿಂದ ಆರ್ಥಿಕ ಹೊಡೆತ

ಇನ್ನು ಕೇವಲ ಬಿಸಿಲ ತಾಪಮಾನವಷ್ಟೇ ಅಲ್ಲ, ರೇಷ್ಮೆ ದರದಲ್ಲಿ ಆಗಿರುವ ಕುಸಿತ ರೈತರನ್ನು ಇನ್ನಷ್ಟು ಕಂಗಾಲಾಗಿಸಿದೆ. ಕಳೆದ ತಿಂಗಳು ಕೆಜಿ ರೇಷ್ಮೆಗೆ 800 ರಿಂದ 900 ರೂ. ಬೆಲೆ ಇತ್ತು. ಪ್ರಸ್ತುತ ಬೆಲೆ 600 ರಿಂದ 700 ರೂ.ಗೆ ಕುಸಿದಿದೆ. ರೇಷ್ಮೆ ಬೆಲೆ ಏರಿಕೆಯಾದರೆ ಬೆಳೆಗಾರರು ಪಡುವ ಕಷ್ಟಕ್ಕೆ ಒಂದಷ್ಟು ತೃಪ್ತಿಯಾದರು ಸಿಗುತ್ತದೆ ಎನ್ನುವುದು ರೇಷ್ಮೆ ಬೆಳೆಗಾರರಾದ ಮುರಳಿ ಅವರ ಮಾತು.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ

ಬಿಸಿಲಿನ ತಾಪಮಾನದಿಂದ ರೇಷ್ಮೆ ಹುಳುಗಳನ್ನು ರಕ್ಷಿಸಲು ಮಾಡಬೇಕಾದ ಏರ್ ಕೂಲರ್ ವ್ಯವಸ್ಥೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿರುವುದು ರೈತರನ್ನು ತೀವ್ರ ನಷ್ಟಕ್ಕೆ ತಳ್ಳಿದೆ. ಇಂತಹ ದುಬಾರಿ ನಿರ್ವಹಣಾ ವೆಚ್ಚ ಭರಿಸಲಾಗದ ಸಣ್ಣ ರೈತರು, ಹಾಕಿದ ಬಂಡವಾಳ ಬಾರದೆ ಕೈಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಬೆಲೆ ಸ್ಥಿರೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂಬುದು ರೇಷ್ಮೆ ಬೆಳೆಗಾರರ ಒಕ್ಕೊರಲ ಬೇಡಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:35 pm, Sun, 3 May 26

Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us