ಗ್ಯಾರಂಟಿ ಪರಿಣಾಮ: ಕಳೆದ 5 ತಿಂಗಳಿಂದ ಪಡಿತರ ವಿತರಕರ ಕಮಿಷನ್ ಬಂದ್

| Updated By: ಗಣಪತಿ ಶರ್ಮ

Updated on: Sep 28, 2024 | 1:23 PM

ಯಾರು ಕೂಡಾ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರಿಗೆ ಉಚಿತವಾಗಿ ಪಡಿತರ ಧಾನ್ಯಗಳನ್ನು ನೀಡುತ್ತಿದೆ. ಆದರೆ ಈ ಪಡಿತರ ಧಾನ್ಯಗಳನ್ನು ವಿತರಿಸುವ ಪಡಿತರ ವಿತರಕರು ಇದೀಗ ಹಸಿವಿನಿಂದ ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ! ಅದಕ್ಕೆ ಕಾರಣವೇನು? ಇಲ್ಲಿಎ ನೋಡಿ ವಿವರ.

ಗ್ಯಾರಂಟಿ ಪರಿಣಾಮ: ಕಳೆದ 5 ತಿಂಗಳಿಂದ ಪಡಿತರ ವಿತರಕರ ಕಮಿಷನ್ ಬಂದ್
ಗ್ಯಾರಂಟಿ ಪರಿಣಾಮ: ಕಳೆದ 5 ತಿಂಗಳಿಂದ ಪಡಿತರ ವಿತರಕರ ಕಮಿಷನ್ ಬಂದ್
Follow us on

ಕೊಪ್ಪಳ, ಸೆಪ್ಟೆಂಬರ್ 28: ರಾಜ್ಯ ಸರ್ಕಾರ ಕಳೆದ ಐದು ತಿಂಗಳುಗಳಿಂದ ಕಮಿಷನ್ ಹಣವನ್ನು ನೀಡದೇ ಇರುವುದರಿಂದ ಪಡಿತರ ವಿತರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ, ಅದಕ್ಕೆ ಬೇಕಾದ ಹಣವನ್ನು ನೀಡದೆ ಇರುವುದು ಯೋಜನೆಗಳಿಗೆ ಗ್ರಹಣ ಹಿಡಿಸುತ್ತಿದೆ. ಕಮಿಷನ್ ಹಣ ನೀಡದೇ ಇದ್ದರೆ ಮುಂದಿನ ತಿಂಗಳು ಪಡಿತರ ವಿತರಣೆ ಮಾಡದೇ ಇರಲು ವಿತರಕರು ಮುಂದಾಗಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡಾ ಒಂದು. ಪ್ರತಿಯೊಬ್ಬ ಬಿಪಿಎಲ್, ಅಂತ್ಯೋದಯ ಕಾರ್ಡ್​​ದಾರರಿಗೆ ಹತ್ತು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಅಂತ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿತ್ತು. ನಂತರ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಪ್ರತಿಯೊಬ್ಬರಿಗೆ ಇಲ್ಲಿವರಗೆ ಹತ್ತು ಕಿಲೋ ಅಕ್ಕಿಯನ್ನು ನೀಡಲು ಸಾಧ್ಯವಾಗಿಲ್ಲ. ಸದ್ಯ ಮೂರು ಕಿಲೋ ಅಕ್ಕಿ ಮತ್ತು ಎರಡು ಕಿಲೋ ಜೋಳವನ್ನು ಪಡಿತರದಾರರಿಗೆ ನೀಡಲಾಗುತ್ತಿದೆ. ಇನ್ನು ಉಳಿದ ಐದು ಕಿಲೋ ಅಕ್ಕಿಯ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಈ ಪೈಕಿ ಕೆಲ ತಿಂಗಳ ಹಣ ಬಂದರೆ, ಇನ್ನು ಕೆಲ ತಿಂಗಳ ಹಣ ಪಡಿತರದಾರರ ಖಾತೆಗೆ ಜಮೆಯಾಗಿಲ್ಲ.

ಸರ್ಕಾರದ ನಿರ್ಲಕ್ಷ್ಯದಿಂದ ತೊಂದರೆಗೆ ಸಿಲುಕಿದ ವಿತರಕರು

ಈ ಮಧ್ಯೆ, ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ಪಡಿತರ ವಿತರಕರು. ಆದರೆ ಇದೀಗ ವಿತರಕರೇ ಸರ್ಕಾರದ ನಿರ್ಲಕ್ಷ್ಯದಿಂದ ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ಪಡಿತರ ವಿತರಕರಿಗೆ ಪ್ರತಿ ಕ್ವಿಂಟಲ್ ಆಹಾರ ಧಾನ್ಯಕ್ಕೆ 150 ರೂಪಾಯಿ ಕಮಿಷನ್ ನೀಡುತ್ತದೆ. ಈ ಕಮಿಷನ್ ಹಣದ ಮೇಲೆಯೇ ಖರ್ಚುವೆಚ್ಚಗಳನ್ನು ವಿತರಕರು ನಿಬಾಯಿಸಬೇಕು. ಜೊತೆಗೆ ಜೀವನ ನಡೆಸಬೇಕು. ಆದರೆ ಕಳೆದ ಐದು ತಿಂಗಳ ಕಮಿಷನ್ ಹಣವನ್ನೇ ವಿತರಕರಿಗೆ ಸರ್ಕಾರ ನೀಡಿಲ್ಲ. ಇದು ಪಡಿತರ ವಿತರಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ರಾಜ್ಯದಲ್ಲಿ 20,437 ಪಡಿತರ ಅಂಗಡಿಗಳಿವೆ. ಕಮಿಷನ್ ಹಣವೇ ಪ್ರತಿ ತಿಂಗಳಿಗೆ ಸರಿಸುಮಾರು ನಾಲ್ಕು ಕೋಟಿ ರೂಪಾಯಿಯಷ್ಟಾಗುತ್ತದೆ. ಆದರೆ, ಮಾರ್ಚ್​ನಿಂದ ಸೆಪ್ಟೆಂಬರ್ ವರಗೆ ಏಳು ತಿಂಗಳ ಪೈಕಿ ಕೇವಲ ಎರಡು ತಿಂಗಳ ಕಮಿಷನ್ ಮಾತ್ರ ನೀಡಿದ್ದು, ಐದು ತಿಂಗಳ ಕಮಿಷನ್ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ ಪಡಿತರದಾರರಿಗೆ ಈ ಕೆವೈಸಿ ಮಾಡಿಸಿದ ಹಣವನ್ನೂ ನೀಡಿಲ್ಲ. ಜೊತೆಗೆ ಗೋಡೌನ್​ನಿಂದ ಪಡಿತರ ಧಾನ್ಯಗಳನ್ನು ಸಾಗಾಟ ಮಾಡಿದ ಹಣವನ್ನು ಕೂಡಾ ನೀಡಿಲ್ಲ ಎಂಬ ಆರೋಪವಿದೆ.

ಸರ್ಕಾರ ನೀಡುವ ಕಮಿಷನ್ ಹಣದಲ್ಲಿಯೇ ಅಂಗಡಿ ಬಾಡಿಗೆ, ಕಂಪ್ಯೂಟರ್ ಕೆಲಸ ಮಾಡಿದ ಸಿಬ್ಬಂದಿಗೆ ವೇತನ, ಅಂಗಡಿಯಲ್ಲಿ ಕೆಲಸ ಮಾಡುವ ಜನರಿಗೆ ವೇತನ ನೀಡಬೇಕು. ಉಳಿದ ಹಣದಲ್ಲಿ ತಾವು ಕೂಡಾ ಸಂಸಾರ ನಡೆಸುತ್ತೇವೆ. ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಇದೇ ಕೆಲಸವನ್ನು ನೆಚ್ಚಿಕೊಂಡು ಜೀವನ ಮಾಡುತ್ತಿರುವ ಸಾವಿರಾರು ಪಡಿತರ ಹೇಳುತ್ತಿದ್ದಾರೆ.

ನೇರ ನಗದು ವರ್ಗಾವಣೆಯೂ ಇಲ್ಲ!

ತಮಗೆ ಸರ್ಕಾರದಿಂದ ಐದು ಕಿಲೋ ಅಕ್ಕಿ ಬದಲಾಗಿ ನೇರ ವರ್ಗಾವಣೆ ಮೂಲಕ ಬರಬೇಕಿರುವ ಹಣ ಕೂಡ ಬರುತ್ತಿಲ್ಲ ಎಂದು ಅನೇಕ ಪಡಿತರದಾರರು ಆರೋಪಿಸಿದ್ದಾರೆ. ಪ್ರತಿಯೊಬ್ಬರಿಗೆ 170 ರೂಪಾಯಿ ಹಣವನ್ನು ಅಕೌಂಟ್​ಗೆ ವರ್ಗಾವಣೆ ಮಾಡುವ ಬದಲು, ಪಡಿತರ ಅಂಗಡಿಯಲ್ಲಿಯೇ ಅಡುಗೆ ಎಣ್ಣೆ, ಕಡ್ಲೆಬೇಳೆ, ಉಪ್ಪು ಸೇರಿದಂತೆ ಕೆಲ ವಸ್ತುಗಳನ್ನು ನೀಡಿದರೆ ಅನಕೂಲವಾಗುತ್ತದೆ ಎಂದು ಅವರು ಹೇಳುತ್ತಿದ್ದಾರೆ.

ಈ ಹಿಂದೆ ಪಡಿತರ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಕೆಲ ಆಹಾರ ದಾನ್ಯಗಳನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಬಂದ್ ಮಾಡಲಾಗಿದೆ. ಹೊರಗಡೆ ಹೆಚ್ಚಿನ ದರ ಇರುವುದರಿಂದ, ಪಡಿತರ ಅಂಗಡಿಯಲ್ಲಿಯೇ ತಮಗೆ ಕಡಿಮೆ ದರದಲ್ಲಿ ಅಡುಗೆ ಎಣ್ಣೆ ಸೇರಿದಂತೆ ಕೆಲ ಗೃಹಪಯೋಗಿ ಆಹಾರ ಧಾನ್ಯಗಳನ್ನು ನೀಡಬೇಕು ಅಂತ ಅನೇಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ‘ಕೈ’ಕೊಟ್ಟ ಗೃಹಲಕ್ಷ್ಮಿ…ಕಾದು ಕುಳಿತ ಫಲಾನುಭವಿಗಳು ಕಂಗಾಲು

ತಮಗೆ ಆದಷ್ಟು ಬೇಗನೆ ಕಮಿಷನ್ ಹಣವನ್ನು ಹಾಕಬೇಕು. ಇಲ್ಲದೇ ಇದ್ದರೆ ಮುಂದಿನ ತಿಂಗಳಿಂದ ತಾವು ಪಡಿತರ ವಿತರಣೆ ಮಾಡದೇ ಇರಲು ನಿರ್ಧಾರ ಮಾಡುವುದಾಗಿ ವಿತರಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಆದಷ್ಟು ಬೇಗನೆ ಪಡಿತರ ವಿತರಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ