Koppal News: ನರೇಗಾ ಯೋಜನೆಯಡಿ ಪ್ರವಾಸಿಗರಿಗಾಗಿ ನಿರ್ಮಾಣವಾಯಿತು ಹೈಟೆಕ್ ಉದ್ಯಾನವನ

ಪ್ರವಾಸಿಗರನ್ನ ಸೆಳೆಯಲು ಹಾಗೂ ವಿಶ್ರಾಂತಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯ 40 ಲಕ್ಷ ರೂ ಅನುದಾನದಲ್ಲಿ ಆನೆಗೊಂದಿ ಗ್ರಾಮದ ಹೊರವಲಯದ ತಳವಾರಘಟ್ಟದ ಬಳಿ ಹೈಟೆಕ್ ಉದ್ಯಾನವನ ನಿರ್ಮಾಣ ಮಾಡಲಾಗಿದೆ.

Koppal News: ನರೇಗಾ ಯೋಜನೆಯಡಿ ಪ್ರವಾಸಿಗರಿಗಾಗಿ ನಿರ್ಮಾಣವಾಯಿತು ಹೈಟೆಕ್ ಉದ್ಯಾನವನ
ಹೈಟೆಕ್ ಉದ್ಯಾನವನ
Edited By:

Updated on: Jul 22, 2023 | 5:28 PM

ಕೊಪ್ಪಳ, ಜುಲೈ 22: ವಿಜಯನಗರ ಕಾಲದ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಆನೆಗೊಂದಿ ಗ್ರಾಮಕ್ಕೆ ಸ್ಥಳೀಯ ಜಿಲ್ಲೆಯ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರನ್ನ ಸೆಳೆಯಲು ಹಾಗೂ ವಿಶ್ರಾಂತಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯ (Nrega Scheme) ಅನುದಾನದಲ್ಲಿ ಹೈಟೆಕ್ ಉದ್ಯಾನವನ ನಿರ್ಮಾಣ ಮಾಡಲಾಗಿದೆ.

ಹೌದು ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮ, ಐತಿಹಾಸಿಕ ವಿಜಯನಗರದ ಪೂರ್ವದಿಂದಲೂ ಇರುವ ನವಬೃಂದಾವನ ಗಡ್ಡೆ, ವಿಜಯ ಕಾಲದ ರಂಗನಾಥಸ್ವಾಮಿ ದೇವಸ್ಥಾನ, ಗಗನ ಮಹಲ್, 64 ಕಂಬಗಳ ಸಾಲು ಮಂಟಪ, ಆದಿಶಕ್ತಿ ದುರ್ಗಾದೇವಿ ದೇವಸ್ಥಾನ, ಆನೆಗೊಂದಿ ಕೋಟೆ ಹಾಗೂ ಸಮೀಪದಲ್ಲಿಯೇ ಹನುಮ‌ ಜನಿಸಿ ಸ್ಥಳವೆಂದೆ ಖ್ಯಾತಿ ಪಡೆದ ಅಂಜನಾದ್ರಿ ಪರ್ವತ, ಪಂಪಾಸರೋವರ, ಋಷಿಮುಖ ಪರ್ವತ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳು ಇವೆ.

ಇದನ್ನೂ ಓದಿ: ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು

ಇವುಗಳನ್ನು ವೀಕ್ಷಣೆ ಮಾಡಲು ಸ್ಥಳೀಯ ಜಿಲ್ಲೆಯ ಪ್ರವಾಸಿಗರ ಸೇರಿದಂತೆ ನಾನಾ ರಾಜ್ಯಗಳಿಂದ, ವಿದೇಶಗಳಿಂದ ಪ್ರವಾಸಿಗರ ಆಗಮಿಸುತ್ತಾರೆ. ಇಂತಹ ಪ್ರವಾಸಿಗರನ್ನು ಸೆಳೆಯಬೇಕು ಎನ್ನುವ ಉದ್ದೇಶದಿಂದ ಹಾಗೂ ಪ್ರವಾಸಿಗರ ವಿಶ್ರಾಂತಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಹಾತ್ಮಾ ಗಾಂಧಿಜಿ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಂಡು ಹೈಟೆಕ್ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ.

ಒಂದು ಎಕರೆ ವಿಸ್ತೀರ್ಣ

ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಚರಂಡಿ ಸ್ಪಚ್ಛತೆ, ಕೆರೆ ಹೂಳೆತ್ತುವುದು ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ಆದರೆ ನರೇಗಾ ಯೋಜನೆ ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರವಾಸಿ ಸ್ಥಳವಾಗಿರುವ ಆನೆಗೊಂದಿಯಲ್ಲಿ ಹೈಟೆಕ್ ಉದ್ಯಾನವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಆನೆಗೊಂದಿ ಗ್ರಾಮದ ಹೊರವಲಯದಲ್ಲಿ ಇರುವ ತಳವಾರಘಟ್ಟದ ಬಳಿಯಲ್ಲಿ ವಿಶಾಲವಾಗಿ ಇರುವ ಒಂದು ಎಕರೆ ವಿಸ್ತೀರ್ಣದಲ್ಲಿ ಉದ್ಯಾನವನ ಸಿದ್ಧಗೊಂಡಿದೆ. ನರೇಗಾ ಯೋಜನೆಯ ಒಟ್ಟು 40 ಲಕ್ಷ ರೂಗಳ ಅನುದಾನವನ್ನು ಬಳಕೆ ಮಾಡಿಕೊಂಡು, ಯೋಜನೆಯ ಕೂಲಿ ಆಳುಗಳಿಗೆ ಕೆಲಸ ನೀಡುವ ಮೂಲಕ ವ್ಯವಸ್ಥಿತವಾಗಿ ಹೈಟೆಕ್ ಉದ್ಯಾನವನ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಧಾರವಾಡ: ಹಜ್ ಯಾತ್ರೆ ತಪ್ಪಿಸಿದ್ದಕ್ಕೆ ಅಲ್-ಹುದೆಬಿಯಾ ಟ್ರಾವೆಲ್ಸ್‌ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಉದ್ಯಾನವನದಲ್ಲಿ ಏನೇನಿದೆ

ತುಂಗಭದ್ರಾ ನದಿಯ ಪಕ್ಕದಲ್ಲಿಯೇ ಇರುವ ಉದ್ಯಾನವನಕ್ಕೆ ಪ್ರವಾಸಿಗರು ಭೇಟಿ ನೀಡಿದರೆ ಯಾವುದೇ ರೀತಿಯ ಕೊರತೆಯಾಗದಂತೆ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಸಂಜೆ ವೇಳೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗಾಗಿ ವಾಯುವಿಹಾರಕ್ಕಾಗಿ ವಾಕಿಂಗ್ ಟ್ರ್ಯಾಕ್, ಕುಳಿತುಕೊಂಡು ವಿಶ್ರಾಂತಿ ಪಡೆಯಲು ಚೇರ್‌ಗಳು, ಸಭೆ ನಡೆಸಲು ಉದ್ಯಾನವನ ಮದ್ಯೆದಲ್ಲಿ ಚಿಕ್ಕದಾದ ಕುಟೀರ, ಉದ್ಯಾನವನದಲ್ಲಿ ರಾತ್ರಿ ವೇಳೆಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ಲೈಟ್‌ಗಳ ಅಳವಡಿಕೆ, ಮಕ್ಕಳಿಗಾಗಿ ಜೋಕಾಲಿ, ಜಾರುಬಂಡೆ, ಉಯ್ಯಾಲೆ ಸೇರಿದಂತೆ ನಾನಾ ಉಪಕರಣಗಳನ್ನು ಉದ್ಯಾನವನದಲ್ಲಿ ಅಳವಡಿಸಲಾಗಿದೆ.

ಪ್ರವಾಸಿಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಂಡು ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಒಟ್ಟು 40 ಲಕ್ಷ ರೂಗಳ ಅನದಾನವನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ವಾಕಿಂಗ್ ಟ್ರಾಕ್, ಮಕ್ಕಳ ಆಟಿಕೆ ಸಾಮಾನುಗಳನ್ನು ಸಹ ಅಳವಡಿಸಲಾಗಿದೆ ಎಂದು ಗಂಗಾವತಿ ಇಒ ಮಹಾಂತಗೌಡ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us