ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ, ದಲಿತರ ಕಟಿಂಗ್​ಗೆ ನಿರಾಕರಣೆ, ಹೋಟೆಲ್​​ನಲ್ಲಿ ತಟ್ಟೆ ನೀಡದ ಸಿಬ್ಬಂದಿ

Untouchability in Halavarthy, Koppal: ಕೊಪ್ಪಳದ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವ ಬಗ್ಗೆ ತಿಳಿದುಬಂದಿದೆ. ದಲಿತರ ಕಟಿಂಗ್​ಗೆ ನಿರಾಕರಣೆ ಮಾಡುವುದು, ಹೋಟೆಲ್​ಗಳಲ್ಲಿ ತಟ್ಟೆ ನೀಡದಿರುವುದು ಇತ್ಯಾದಿ ಬೆಳಕಿಗೆ ಬಂದಿದ್ದು ಇದೀಗ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತರು ಆಗ್ರಹಿಸಿದ್ದಾರೆ.

ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ, ದಲಿತರ ಕಟಿಂಗ್​ಗೆ ನಿರಾಕರಣೆ, ಹೋಟೆಲ್​​ನಲ್ಲಿ ತಟ್ಟೆ ನೀಡದ ಸಿಬ್ಬಂದಿ
ಹಾಲವರ್ತಿ ಗ್ರಾಮ
Edited By:

Updated on: Feb 15, 2024 | 12:02 PM

ಕೊಪ್ಪಳ, ಫೆಬ್ರವರಿ 15: ಕೊಪ್ಪಳ (Koppal) ತಾಲೂಕಿನ ಹಾಲವರ್ತಿ (Halavarthy) ಗ್ರಾಮದಲ್ಲಿ ಅಸ್ಪಶ್ಯತೆ (Untouchability) ಇನ್ನೂ ಜೀವಂತವಾಗಿರುವುದು ತಿಳಿದುಬಂದಿದೆ. ದಲಿತರಿಗೆ ಹೊಟೇಲ್ ಮತ್ತು ಕ್ಷೌರದ ಆಂಗಡಿಯಲ್ಲಿ ಪ್ರವೇಶಕ್ಕೆ ನಿರಾಕರಿಸುತ್ತಿರುವುದು ಕಂಡುಬಂದಿದೆ. ದಲಿತರಿಗೆ ಪ್ರತ್ಯೇಕ ಪ್ಲೇಟ್, ತಟ್ಟೆ ಇಟ್ಟು ಅಸ್ಪಶ್ಯರಂತೆ ಕಾಣುವುದು ಗೊತ್ತಾಗಿದ್ದು, ಅವರು ಪ್ರಶ್ನಿಸಿದರೆ ಹೋಟೆಲ್​​​ ಅಥವಾ ಅಂಗಡಿಯವರು ಉಪಾಹಾರ ಖಾಲಿ ಎಂಬ ನೆಪ ಹೇಳುತ್ತಿದ್ದಾರೆ.

ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ನಿಮಗೆ ಕ್ಷೌರ ಮಾಡಿದರೆ ನಮಗೆ ಬೇರೆಯವರು ಬೈಯ್ಯುತ್ತಾರೆ ಎಂದು ಕ್ಷೌರಿಕರು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮದ ಕೆಲ ಮೇಲ್ವರ್ಗದವರು ಅಸ್ಪಶ್ಯತೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಸ್ಪಶ್ಯತೆ ವಿರುದ್ಧ ಗ್ರಾಮದ ದಲಿತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋಟೆಲ್ ಮತ್ತು ಕ್ಷೌರದಂಗಡಿಯವರನ್ನು ಪ್ರಶ್ನಿಸಿದರೆ ಅಂಗಡಿ ಬಂದ್ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅಸ್ಪಶ್ಯತೆ ಆಚರಿಸುವವರ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಸದ್ಯ ಅಸ್ಪೃಶ್ಯತೆ ವಿಚಾರವಾಗಿ ಹೋಟೆಲ್ ಮಾಲೀಕ ಸಂಜೀವಪ್ಪ, ಕಟಿಂಗ್ ಶಾಪ್​​​ನ ವೆಂಕೋಬ ಸೇರಿದಂತೆ ಮೂವರ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲೇನಿದೆ?

ಬುಧವಾರ ಬೆಳಿಗ್ಗೆ ಸುಮಾರು 8.30ಕ್ಕೆ ದೂರುದಾರರು ಅವರ ಮಗಳಾದ 3 ವರ್ಷದ ಅರ್ಚನಾಗೆ ಕಟಿಂಗ್ ಮಾಡಿಸಲೆಂದು ಯಂಕೋಬ ಹಡಪದ ಎಂಬವರ ಕಟಿಂಗ್ ಶಾಪ್​​ಗೆ ಹೋಗಿದ್ದಾರೆ. ಆಗ ಅವರು, ನಿಮ್ಮ ಮಾದಿಗ ಜಾತಿಯ ಜನರಿಗೆ ಕಟಿಂಗ್ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲೇ ಇದ್ದ ಯಂಕೋಬನ ಚಿಕ್ಕಪ್ಪ ಅಂಜಿನಪ್ಪ ಕೂಡಾ ನಾವು ಊರಲ್ಲಿ ನಿಮ್ಮವರಿಗೆ ಕಟಿಂಗ್ ಮಾಡುವುದಿಲ್ಲ. ಬೇಕಿದ್ದರೇ ನಿಮ್ಮ ಜನಾಂಗಕ್ಕೆ ಅಂತಾ ಪ್ರತ್ಯೇಕ ಕೊಠಡಿ ಮಾಡಿಕೊಳ್ಳಿರಿ ಎಂದಿದ್ದಾರೆ ಎಂಬುದಾಗಿ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕಂದಾಯ ಅರಣ್ಯ ಭೂಮಿ ಒತ್ತುವರಿ ಆರೋಪ, ರೆಸಾರ್ಟ್ ಮಾಲೀಕರ ಜೊತೆ ಜಿಲ್ಲಾಧಿಕಾರಿ ಶಾಮೀಲು -ಸಿಬಿಐಗೆ ದೂರು

ಮದ್ಯಾಹ್ನ 2.30 ರ ಸುಮಾರಿಗೆ ದೂರುದಾರರು ಮತ್ತು ಅವರ ಗೆಳೆಯ ರಾಘವೇಂದ್ರ ಹೊಸಮನಿ ಗ್ರಾಮದ ಸಂಜಿವಪ್ಪ ಗುಳದಳ್ಳಿ ಇವರ ಹೊಟೇಲ್​ಗೆ ಊಟಕ್ಕೆಂದು ತೆರಳಿದ್ದಾರೆ. ಆಗ ಹೋಟೆಲ್ ಮಾಲೀಕ ಸಂಜೀವಪ್ಪ, ಪ್ಲೇಟಿನಲ್ಲಿ ಕೊಡದೇ ಒಂದು ಹಾಳೆಯಲ್ಲಿ ಹಾಕಿಕೊಟ್ಟಿದ್ದಾರೆ. ವಿಚಾರಿಸಿದಾಗ, ‘ನಿಮ್ಮ ಮಾದಿಗ ಜನಾಂಗದವರಿಗೆ ಪ್ಲೇಟ್ ಕೊಡುವುದಿಲ್ಲ’ ಎಂದು ಹೇಳಿ ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ಅಸ್ಪೃಶ್ಯತೆ ಆಚರಣೆ ಮಾಡಿದ ಇವರೆಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us