3ನೇ ಪತ್ನಿ ಕೊಲೆ: 23 ವರ್ಷದ ಬಳಿಕ ಸಿಕ್ಕ 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆ

ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾದ ವೃದ್ಧನೊಬ್ಬ ಕೊನೆಯ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ, ಶವವನ್ನು ಬಸ್​​ನಲ್ಲಿ ಲಗೇಜ್ ಎಂದು ಕಳುಹಿಸಿ ವಿಕೃತಿ ಮೆರೆದಿದ್ದ. ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನ23 ವರ್ಷಗಳ ಬಳಿಕ ಬಂಧಿಸುವಲ್ಲಿ ಗಂಗಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ 77 ವರ್ಷದ ಆರೋಪಿ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ.

3ನೇ ಪತ್ನಿ ಕೊಲೆ: 23 ವರ್ಷದ ಬಳಿಕ ಸಿಕ್ಕ 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆ
ಆರೋಪಿ ಹುಸೇನಪ್ಪ
Edited By:

Updated on: Jun 27, 2025 | 9:15 PM

ಕೊಪ್ಪಳ, (ಜೂನ್ 27): ಮೂರನೇ ಪತ್ನಿಯನ್ನು ಕೊಲೆಗೈದು 23 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ಪೊಲೀಸರು (Gangavathi Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು (Raihcur) ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಾಲದಾಳ ಗ್ರಾಮದ 75 ವರ್ಷದ ವೃದ್ಧ ಹನುಮಂತ ಹುಸೇನಪ್ಪ ಬಂಧಿತ ವ್ಯಕ್ತಿಯಾಗಿದ್ದು, ಗೋಣಿ ಚೀಲದಲ್ಲಿ ಶವವನ್ನು ತುಂಬಿ ಬಸ್ಸಿನಲ್ಲಿ ಕಳುಹಿಸಿದ್ದ ಆರೋಪಿಯನ್ನು ಅಂತಿಮವಾಗಿ ಸ್ವಗ್ರಾಮದಲ್ಲಿ ಬಂಧಿಸಿ ಕೋರ್ಟ್​ ಗೆ ಒಪ್ಪಿಸಿದ್ದಾರೆ. ಇದೀಗ ಗಂಗಾವತಿ 1ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು,​ 75 ವರ್ಷದ ಹನುಮಂತ ಹುಸೇನಪ್ಪನಿಗೆ 15 ಸಾವಿರ ರೂಪಾಯಿ ದಂಡ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ಇಂದು (ಜೂನ್ 27) ಆದೇಶ ಹೊರಡಿಸಿದೆ.

23 ವರ್ಷಗಳ ಹಿಂದೆ ಶೀಲ ಶಂಕಿಸಿ 3ನೇ ಪತ್ನಿಯನ್ನು ಕೊಲೆಗೈದಿದ್ದ. ಬಳಿಕ ಶವವನ್ನು ಲಗೇಜ್‌ ಎಂದು ಬಸ್‌ನಲ್ಲಿ ಪಾರ್ಸಲ್‌ ಕಳಿಸಿದ್ದ. ನಂತರ ಹನುಮಂತಪ್ಪ ಬೇರೆ ಬೇರೆ ಸ್ಥಳಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ.ಅಂತಿಮವಾಗಿ 23 ವರ್ಷಗಳ ಬಳಿ ಹನುಮಂತಪ್ಪ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ತಮ್ಮ ಹಾಲದಾಳ ಗ್ರಾಮದಲ್ಲೇ ಸಿಕ್ಕಿಬಿದ್ದಿದ್ದು, ಇದೀಗ ಇಳಿವಯಸ್ಸಿನಲ್ಲೇ ಜೈಲುಪಾಲಾಗಿದ್ದಾನೆ.

ಇದನ್ನೂ ಓದಿ: ಕೊಪ್ಪಳ: ಮೂರನೇ ಪತ್ನಿಯ ಕೊಲೆ ಮಾಡಿ ಬಸ್​ನಲ್ಲಿ ಲಗೇಜ್ ಎಂದು‌ ಕಳುಹಿಸಿ ಪರಾರಿಯಾಗಿದ್ದ ವೃದ್ಧ 23 ವರ್ಷಗಳ ಬಳಿಕ ಅರೆಸ್ಟ್

ಪ್ರಾಥಮಿಕ ಆರೋಗ್ಯ ‌ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿದ್ದ ಹುಸೇನಪ್ಪನ ಮೊದಲ ಪತ್ನಿ ತೀರಿಕೊಂಡಿದ್ದರು. ಅದಾದ ನಂತರ ಆತ, ಎರಡನೇ ವಿವಾಹವಾಗಿದ್ದ. ಆಕೆ ಜಗಳವಾಡಿ ಪತಿಯನ್ನು ತೊರೆದು ಹೋಗಿದ್ದಳು. ನಂತರ, ಸರ್ಕಾರಿ ನೌಕರ ಎಂದು ಹೇಳಿಕೊಂಡು ಕೊಪ್ಪಳ ‌ತಾಲೂಕಿನ‌ ಇಂದರಗಿ ನಿವಾಸಿ ರೇಣುಕಮ್ಮರನ್ನು ಮೂರನೇ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಗಾವತಿಯ‌ ಲಕ್ಷ್ಮೀ ಕ್ಯಾಂಪ್‌ನಲ್ಲಿ ಪತ್ನಿ ಜೊತೆ ವಾಸ ಮಾಡತಿದ್ದ. ಆದ್ರೆ, 2002 ರಲ್ಲಿ ಆಕೆಯ ಮೇಲಿನ ಅನುಮಾನದಿಂದ ಮೂರನೇ ಹೆಂಡತಿಯನ್ನು ಕೊಚ್ಚಿ‌ ಕೊಲೆ ಮಾಡಿದ್ದ. ಬಳಿಕ ಹುಸೇನಪ್ಪ, ಶವವನ್ನು ಲಗೇಜ್ ಎಂದು‌ ಕಂಪ್ಲಿ ಬಸ್ಸಿನಲ್ಲಿ ಕಳುಹಿಸಿದ್ದ. ಆ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ನಂತರ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ಆರೋಪಿಯನ್ನು ಪತ್ತೆಹೆಚ್ಚಿ ಬಂಧಿಸಲು ಸಾಧ್ಯವಾಗಿರಲಿಲ್ಲ.

ಇದರ ಮಧ್ಯೆ ಆರು ತಿಂಗಳ ಹಿಂದೆ ಆರೋಪಿ ಸ್ವಗ್ರಾಮ ಹಾಲದಾಳಕ್ಕೆ ಬಂದಿರುವ ಬಗ್ಗೆ ಗಂಗಾವತಿ ಪೊಲೀಸರಿಗೆ ಖಚಿತ ಸುಳಿವು ದೊರೆತಿತ್ತು. ಅದರ ಆಧಾರದಲ್ಲಿ ಪೊಲೀಸರು ಆರೋಪಿಯ ಜಾಡು ಹಿಡಿದಿದ್ದು, ಆತನ ಚಲನವಲನಗಳನ್ನು ಗಮನಿಸುತ್ತಿದ್ದರು. ಅಂತಿಮವಾಗಿ ಹನುಮಂತಪ್ಪ ಹಾಲದಾಳದಲ್ಲಿ ಇದ್ದಾನೆ ಎನ್ನುವುದು ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಗಂಗಾವತಿ ಪೊಲೀಸರು ಸಹ ಗ್ರಾಮಕ್ಕೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ 23 ವರ್ಷ ಹಳೆಯ ಕೊಲೆ ಪ್ರಕರಣವೊಂದನ್ನು ಗಂಗಾವತಿ ಪೊಲೀಸರು ಬಯಲಿಗೆಳೆದಂತಾಗಿದೆ.

Loading...
Unable to load recommendations.
Follow Us