
ಕೊಪ್ಪಳ, ಅಕ್ಟೋಬರ್ 28: ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನ ಕೊಂದು (Murder) ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದ ಘಟನೆಗೆ ಸ್ಫೋಟಕ ತಿರುವು ಸಿಕ್ಕಿದೆ. ಕುಟುಂಬ ಕಲಹದಿಂದಾಗಿ ಮಹಿಳೆ ಈ ನಿರ್ಧಾರ ಮಾಡಿರಬಹುದೆಂದು ಮೊದಲು ಶಂಕಿಸಲಾಗಿತ್ತಾದರೂ ಪೊಲೀಸ್ ತನಿಖೆ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಕರಾಳ ಮುಖ ಇರುವುದು ಬಟಾಬಯಲಾಗಿದ್ದು, ತಾಯಿಯ ತಪ್ಪಿಗೆ ಅಮಾಯಕ ಇಬ್ಬರು ಮಕ್ಕಳೂ ಬಲಿಯಾಗಿರುವ ಆರೋಪ ಕೇಳಿಬಂದಿದೆ.
ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದ ವೇಳೆ ಮಕ್ಕಳಾದ ರಮೇಶ್(4) ಮತ್ತು ಜಾನವಿ(2) ಅವರನ್ನು ಕೊಂದು ತಾಯಿ ಲಕ್ಷ್ಮವ್ವ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬಗ್ಗೆ ಹಲವು ಅನುಮಾನಗಳ ಜೊತೆ ಪೊಲೀಸರು ತನಿಖೆ ಆರಂಭಿಸಿದ್ದ ವೇಳೆ ಮೃತ ಲಕ್ಷ್ಮವ್ವಳ ತಾಯಿ ಬಸಮ್ಮ ನೀಡಿದ ದೂರು ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಮಗಳು ಮತ್ತು ಮೊಮ್ಮಕ್ಕಳ ಸಾವಿಗೆ ಅದೇ ಗ್ರಾಮದ ಬೀರಪ್ಪ ಎಂಬಾತನೇ ಕಾರಣ ಎಂಬ ಬಗ್ಗೆ ದೂರಲ್ಲಿ ತಿಳಿಸಲಾಗಿದೆ. ದೂರಿನ ಪ್ರಕಾರ, ಲಕ್ಷ್ಮವ್ವ ಮತ್ತು ಬೀರಪ್ಪ ಅನೈತಿಕ ಸಂಬಂಧ ಹೊಂದಿದ್ದರು. ಇದರಿಂದಾಗಿ ಲಕ್ಷ್ಮವ್ವಳಿಗೆ ಗಂಡ-ಮಕ್ಕಳನ್ನು ಬಿಟ್ಟು ಬಾ ಎಂದು ಬೀರಪ್ಪ ಪದೇ ಪದೇ ಒತ್ತಡ ಹಾಕುತ್ತಿದ್ದ. ಈ ಬಗ್ಗೆ ಬ್ಲಾಕ್ಮೇಲ್ ಕೂಡ ಮಾಡುತ್ತಿದ್ದ ಎನ್ನಲಾಗಿದೆ. ಬೀರಪ್ಪನ ಕಿರುಕುಳದಿಂದ ಬೇಸತ್ತಿದ್ದ ಲಕ್ಷ್ಮವ್ವ ಮನನೊಂದು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಅಂತಾ ಆಕೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ: ತುತ್ತು ಹಾಕಿದ ಕೈಯಲ್ಲೇ ನೇಣು ಬಿಗಿದ ಹೆತ್ತ ಕರುಳು
ಆರೋಪಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕುಕನೂರು ಪೊಲೀಸರು ಬೀರಪ್ಪನನ್ನು ಬಂಧಿಸಿದ್ದಾರೆ. IPC 103(1), 108, 351(2)(3), BNS2023 -3(1) ಹಾಗೂ SC ST ಆ್ಯಕ್ಟ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಿದ್ದರೂ ಲಕ್ಷ್ಮವ್ವ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕೇವಲ ಬೀರಪ್ಪನ ಒತ್ತಡ ಮಾತ್ರ ಕಾರಣವಾ? ಅಥವಾ ಈ ಮರ್ಡರ್ ಮತ್ತು ಸಾವಿನ ಒಳಮರ್ಮ ಬೇರೆ ಏನಾದರೂ ಇದೆಯಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:09 pm, Tue, 28 October 25