NEET UG 2026: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ!

ಬಡತನ ಮತ್ತು ಸೌಲಭ್ಯಗಳ ಕೊರತೆಯ ನಡುವೆಯೂ ಕೊಪ್ಪಳ ಜಿಲ್ಲೆಯ ಯುವಕನೊಬ್ಬ ನೀಟ್ (NEET) ಪರೀಕ್ಷೆಯಲ್ಲಿ ದೇಶಕ್ಕೇ ಎಸ್ ಟಿ ಕೆಟಗೇರಿಯಲ್ಲಿ 694ನೇ ರ್ಯಾಂಕ್ ಪಡೆದಿದ್ದಾನೆ. ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ರಜೆಯ ದಿನಗಳಲ್ಲಿ ಹಗಲಲ್ಲಿ ಕುರಿ ಕಾಯುತ್ತಾ, ಸಗಣಿ ಬಳಿಯುತ್ತಾ ಕಡು ಬಡತನದಲ್ಲೇ ಓದಿದ ಈ ಹಳ್ಳಿ ಹೈದ ಪುಟ್ಟರಾಜು ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಈತನ ಕಠಿಣ ಪರಿಶ್ರಮ, ಛಲ ಮತ್ತು ಯಶಸ್ಸು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.

NEET UG 2026: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ!
ಪುಟ್ಟರಾಜ್ ಭೀಮನೂರ
Edited By:

Updated on: Jul 18, 2026 | 1:43 PM

ಕೊಪ್ಪಳ: ಕಠಿಣ ಪರಿಶ್ರಮ ಮತ್ತು ಛಲವೊಂದಿದ್ದರೆ ಎಂತಹ ಬಡತನವೂ ಸಾಧನೆಗೆ ಅಡ್ಡಿಯಾಗಲ್ಲ ಎಂಬುದನ್ನು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಹಗಲಲ್ಲಿ ಕುರಿ ಕಾಯುತ್ತಾ, ಸಗಣಿ ಬಳಿಯುತ್ತಾ ಕಡು ಬಡತನದಲ್ಲೇ ಓದಿದ ಈ ಹಳ್ಳಿ ಹೈದ ಪುಟ್ಟರಾಜ್ ಭೀಮನೂರ ನೀಟ್ (NEET) ಪರೀಕ್ಷೆಯಲ್ಲಿ ದೇಶಕ್ಕೇ ಅದ್ಭುತ ರ್ಯಾಂಕ್ ಪಡೆಯುವ ಮೂಲಕ ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ.

ಕೊಪ್ಪಳ ತಾಲೂಕಿನ ನಿವಾಸಿಯಾದ ಪುಟ್ಟರಾಜ್ ಭೀಮನೂರ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವನು. ಇವರ ತಂದೆ ತಾಯಿ ಇಂದಿಗೂ ದಿನಗೂಲಿಗಾಗಿ ಕೃಷಿ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ಸ್ವಂತ ಸೂರಿಲ್ಲದೆ ಊರು ಬಿಟ್ಟು ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಬಡತನದ ಬೇಗೆಯ ನಡುವೆಯೂ ಮಗನ ಓದಿಗೆ ಪೋಷಕರು ಶಕ್ತಿ ಮೀರಿ ಪ್ರೋತ್ಸಾಹ ನೀಡಿದ್ದು, ಇದೀಗಾ ಮಗನ ಸಾಧನೆಯಿಂದ ಈ ಪುಟ್ಟ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ

ರಜೆಯಲ್ಲಿ ಕುರಿ ಕಾಯುತ್ತಲೇ ಸಾಗುತ್ತಿತ್ತು ಅಧ್ಯಯನ:

ಗಂಗಾವತಿಯ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದ ಪುಟ್ಟರಾಜುಗೆ ವೈದ್ಯೆಯಾಗಬೇಕೆಂಬ ಬಲವಾದ ಕನಸಿತ್ತು. ಕಾಲೇಜಿಗೆ ರಜೆ ಸಿಕ್ಕಾಗಲೆಲ್ಲಾ ಮನೆಗೆ ಬಂದು ಸುಮ್ಮನೆ ಕುಳಿತುಕೊಳ್ಳದೆ, ಪೋಷಕರಿಗೆ ಆಸರೆಯಾಗಲು ಕುರಿ ಕಾಯುವ ಮತ್ತು ಸಗಣಿ ಬಳಿಯುವ ಕೆಲಸ ಮಾಡುತ್ತಿದ್ದನು. ಕುರಿ ಮೇಯಿಸಲು ಹೋದಾಗಲೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದ ಈತನ ದೃಢ ಸಂಕಲ್ಪವೇ ಇಂದು ಈತನನ್ನು ಯಶಸ್ಸಿನ ಶಿಖರಕ್ಕೇರಿಸಿದೆ.

YouTube video player

ಒಂದು ವರ್ಷದ ತಪಸ್ಸಿಗೆ ಸಿಕ್ಕಿತು ಪ್ರತಿಫಲ:

ಪಿಯುಸಿ ಮುಗಿದ ಬಳಿಕ ಡಾಕ್ಟರ್ ಆಗುವ ಹಂಬಲದಿಂದ ಪುಟ್ಟರಾಜ್ ಒಂದು ವರ್ಷ ಕಾಲ ‘ಲಾಂಗ್ ಟರ್ಮ್’ (Long Term Coaching) ಕೋಚಿಂಗ್ ಪಡೆದು ಕಠಿಣ ಅಭ್ಯಾಸ ನಡೆಸಿದ್ದನು. ದಿನದ ಬಹುಪಾಲು ಸಮಯವನ್ನು ಓದಿಗಾಗಿಯೇ ಮೀಸಲಿಟ್ಟ ಈತನ ಶ್ರಮ ವ್ಯರ್ಥವಾಗಲಿಲ್ಲ. ಇದೀಗ ಪ್ರಕಟಗೊಂಡಿರುವ ನೀಟ್ ಫಲಿತಾಂಶದಲ್ಲಿ ಪುಟ್ಟರಾಜ್ ಎಸ್‌ಟಿ (ST) ಕೆಟಗೇರಿಯಲ್ಲಿ ದೇಶಕ್ಕೇ 694ನೇ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾನೆ.

ಕುರಿ ಕಾಯುವ ಹುಡುಗ ಈಗ ದೇಶ ಮೆಚ್ಚುವ ರ್ಯಾಂಕ್ ಗಳಿಸಿ, ಡಾಕ್ಟರ್ ಆಗ ಹೊರಟಿರುವುದು ಇಡೀ ಕೊಪ್ಪಳ ಜಿಲ್ಲೆಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಸೌಲಭ್ಯಗಳ ಕೊರತೆಯ ನಡುವೆಯೂ ಕೇವಲ ಸ್ವಪ್ರಯತ್ನ ಮತ್ತು ನಿರಂತರ ಅಭ್ಯಾಸದಿಂದ ಪುಟ್ಟರಾಜ್ ಈ ಮೈಲಿಗಲ್ಲು ತಲುಪಿದ್ದಾನೆ. ವೈದ್ಯನಾಗಿ ಸಮಾಜದ ಸೇವೆ ಮಾಡಬೇಕೆಂಬ ಈ ಹಳ್ಳಿ ಹೈದನ ಕನಸು ನನಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Sat, 18 July 26

Follow Us