ಬೆಂಗಳೂರಿನಿಂದ ಪುರಿ ಜಗನ್ನಾಥ್​ಗೆ KSRTC ಬಸ್ ಸೇವೆ, ಎಂದಿನಿಂದ? ಟಿಕೆಟ್ ಎಷ್ಟು?

ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯಕ್ಕೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಆರ್​​ಟಿಸಿ ಮುಂದಾಗಿದೆ. ಹೌದು..ಬೆಂಗಳೂರಿನಿಂದ ಒಡಿಶಾ ರಾಜ್ಯದ ಮೂರು ನಗರಗಳಿಗೆ ಶೀಘ್ರವೇ KSRTC ಬಸ್ ಸಂಚಾರ ಆರಂಭವಾಗಲಿದೆ.

ಬೆಂಗಳೂರಿನಿಂದ ಪುರಿ ಜಗನ್ನಾಥ್​ಗೆ  KSRTC ಬಸ್ ಸೇವೆ, ಎಂದಿನಿಂದ? ಟಿಕೆಟ್ ಎಷ್ಟು?
ಅಂಬಾರಿ ಉತ್ಸವ ಬಸ್

Updated on: Sep 19, 2024 | 10:19 PM

ಬೆಂಗಳೂರು, (ಸೆಪ್ಟೆಂಬರ್ 19): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಒಡಿಶಾ ರಾಜ್ಯದ ಪುರಿ, ಭುವನೇಶ್ವರ ಮತ್ತು ಕಟಕ್ ನಗರಗಳಿಗೆ ಬೆಂಗಳೂರಿನಿಂದ ಬಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಸ್‌ ಸೇವೆಗಳಿಗೆ ಇರುವ ಬೇಡಿಕೆ ಗಮನಿಸಿರುವ ನಿಗಮ, ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಸ್ಲೀಪರ್‌ ಬಸ್‌ಗಳನ್ನು ಬಳಕೆ ಮಾಡಲಾಗುತ್ತದೆ.

ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್‌ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಈ ಪ್ರಯೋಗ ಯಶಸ್ವಿಯಾದರೆ ಗುಜರಾತ್ ರಾಜ್ಯದ ಕೆಲವು ನಗರಗಳಿಗೆ ಸಹ ಬಸ್ ಸಂಪರ್ಕವನ್ನು ಕಲ್ಪಿಸಲು ಕೆಎಸ್ಆರ್‌ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಸದ್ಯ ಕೆಎಸ್ಆರ್‌ಟಿಸಿ ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ ನಡುವೆ ಐಷಾರಾಮಿ ಬಸ್ ಸೇವೆ ಒದಗಿಸುತ್ತಿದೆ. ಈ ಮಾರ್ಗದ ಬಸ್‌ಗಳು ಸುಮಾರು 1000 ಕಿ. ಮೀ. ಸಂಚಾರ ನಡೆಸುತ್ತಿವೆ. ಆದರೆ ಒಡಿಶಾ ರಾಜ್ಯದ ಮೂರು ಪ್ರಮುಖ ನಗರಗಳು ಇದಕ್ಕಿಂತ ದೂರ ಇದೆ. ಆದರೆ ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿದೆ.

ಸಾರಿಗೆ ಸಚಿವರ ಸ್ಪಷ್ಟನೆ

ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯಕ್ಕೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಆರ್​​ಟಿಸಿಗೆ ಹೆಚ್ಚು ಒತ್ತಾಯ ಮತ್ತು ಮನವಿ ಕೇಳಿ ಬಂದಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಕೆಎಸ್​ಆರ್​​ಟಿಸಿಯ ಉದ್ದದ ಮಾರ್ಗವಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲು ಹೊಸ ಯುರೋಪಿಯನ್ ಶೈಲಿಯ, ಹವಾನಿಯಂತ್ರಿತ ಸ್ಲೀಪರ್ ಅಂಬಾರಿ ಉತ್ಸವ್ ಬಸ್‌ಗಳನ್ನು ನಿಯೋಜಿಸಲು ಯೋಜಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟಿಕೆಟ್ ದರ ಎಷ್ಟು?

ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್‌ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಹೀಗಾಗಿ ಟಿಕೆಟ್​ ದರ ಎಷ್ಟು ನಿಗದಿ ಮಾಡಬೇಕು? ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯ ಒದಗಿಸಬೇಕೆಂಬುವುದನ್ನು ನಿಗಮವು ಚಿಂತನೆ ನಡೆಸಿದೆ. ಎಲ್ಲಾ ಓಕೆ ಆದ ಬಳಿಕ ಟಿಕೆಟ್​​ ದರ ಸೇರಿದಂತೆ ಇನ್ನಿತರ ಮಾಹಿತಿಯನ್ನ ಹಂಚಿಕೊಳ್ಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us