Om Birla: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಶ್ರಮಿಸಿದ ಕನ್ನಡಿಗರಿಗೆ ನಾನು ಕೃತಜ್ಞ: ವಿಧಾನಮಂಡಲದಲ್ಲಿ ಓಂ ಬಿರ್ಲಾ

ಕರ್ನಾಟಕಕ್ಕೆ ಬರುವ ಹಲವರು ಇಲ್ಲಿನ ವಿಧಾನಸೌಧ ನೋಡುತ್ತಾರೆ. ಇಂಥ ಕಟ್ಟಡವನ್ನು ಸಾಕಾರಗೊಳಿಸಿದವರನ್ನು ನೆನೆಯುತ್ತೇನೆ ಎಂದರು.

Om Birla: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಶ್ರಮಿಸಿದ ಕನ್ನಡಿಗರಿಗೆ ನಾನು ಕೃತಜ್ಞ: ವಿಧಾನಮಂಡಲದಲ್ಲಿ ಓಂ ಬಿರ್ಲಾ
ಕರ್ನಾಟಕ ವಿಧಾನಸಭೆಯಲ್ಲಿ ಮಾತನಾಡುತ್ತಿರುವ ಓಂ ಬಿರ್ಲಾ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 24, 2021 | 4:11 PM

ಬೆಂಗಳೂರು: ಕರ್ನಾಟಕದ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಮಾತನಾಡಿದರು. ಕರ್ನಾಟಕ ವಿಧಾನಸಭೆ, ಪರಿಷತ್ ಸದಸ್ಯರ ಭೇಟಿ ಸಂತಸ ತಂದಿದೆ. ವಿಧಾನಸೌಧ ನಿರ್ಮಿಸಿದ ಕೆಂಗಲ್​ ಹನುಮಂತಯ್ಯಗೆ ಧನ್ಯವಾದ ಅರ್ಪಿಸುತ್ತೇನೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಸ್ಮರಿಸುತ್ತೇನೆ ಎಂದು ಮಾತು ಆರಂಭಿಸಿದರು. ಬಸವೇಶ್ವರರ ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಬುನಾದಿಯಾಯಿತು ಎಂದು ನೆನಪಿಸಿಕೊಂಡರು.

ಹಿರಿಯ ಶಾಸಕ ಯಡಿಯೂರಪ್ಪ ಅವರನ್ನು ಗೌರವಿಸಿದ್ದು ಹೆಮ್ಮೆಯ ವಿಷಯ. ಕರ್ನಾಟಕದ ರೈತರ ಅಭಿವೃದ್ಧಿಗಾಗಿ ಯಡಿಯೂರಪ್ಪ ನಿರಂತರ ಶ್ರಮಿಸಿದರು. ಕರ್ನಾಟಕಕ್ಕೆ ಬರುವ ಹಲವರು ಇಲ್ಲಿನ ವಿಧಾನಸೌಧ ನೋಡುತ್ತಾರೆ. ಇಂಥ ಕಟ್ಟಡವನ್ನು ಸಾಕಾರಗೊಳಿಸಿದವರನ್ನು ನೆನೆಯುತ್ತೇನೆ ಎಂದರು. ಇಂದು ಇಡೀ ವಿಶ್ವ ಸಂಸದೀಯ ಪ್ರಜಾಪ್ರಭುತ್ವದ ಅಡಿಯಲ್ಲಿ ಸರ್ಕಾರ ನಿರ್ವಹಿಸಲು ಬಯಸುತ್ತಿದೆ. ಚರ್ಚೆ, ಸಂವಾದಗಳೇ ಸಂಸದೀಯ ಪ್ರಜಾಪ್ರಭುತ್ವದ ಜೀವಾಳ. ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಚುನಾಯಿತ ಪ್ರತಿನಿಧಿಗಳು ಚರ್ಚೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ. ಜನಹಿತ, ಜನಕಲ್ಯಾಣಕ್ಕೆ ಜನಪ್ರತಿನಿಧಿಗಳು ಒತ್ತು ನೀಡಬೇಕು. ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಗೌರವ ಸಿಗುತ್ತದೆ. ಜನರ ಸಮಸ್ಯೆಗಳ ಬಗ್ಗೆ ಸದನಗಳಲ್ಲಿ ಚರ್ಚೆ ಆಗಬೇಕು. ಜನರ ಸಾಮಾಜಿಕ, ಆರ್ಥಿಕ ಉನ್ನತಿಗೆ ಶ್ರಮಿಸಬೇಕು. ಸದನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಲಾಪಗಳು ನಡೆಯುತ್ತಿಲ್ಲ. ಇದು ಬೇಸರದ ಸಂಗತಿ. ಚರ್ಚೆಗಳಲ್ಲಿ ಎಲ್ಲರೂ ಸೌಜನ್ಯ, ಗೌರವ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಾವೀಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿದ್ದೇವೆ. ಪ್ರತಿಯೊಬ್ಬರೂ ನವಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಅರ್ಥಪೂರ್ಣ ಚರ್ಚೆ, ಸಂವಾದಗಳ ಮೂಲಕ ಪ್ರಜಾಪ್ರಭುತ್ವದ ಆಶಯ ಪೂರೈಸಬೇಕು. ಜನರ ಆಶಯ, ನಿರೀಕ್ಷೆಗಳನ್ನು ಜನಪ್ರತಿನಿಧಿಗಳು ಪೂರೈಸಬೇಕು. ನಮ್ಮದು ವಿಭಿನ್ನ ಸಿದ್ಧಾಂತ, ವೈವಿಧ್ಯತೆ ಮೈಗೂಡಿರುವ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಮೂಲಕ ಸಾಮೂಹಿಕವಾಗಿ ಜನರ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.

ಕರ್ನಾಟಕದ ವಿಧಾನಸೌಧ ಕಟ್ಟಡವು ಪ್ರಜಾಪ್ರಭುತ್ವದ ವಿಶಿಷ್ಟ ಸಂಕೇತ. ವಿಧಾನಸೌಧ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಮೇಲೆ ಪ್ರಜಾಪ್ರಭುತ್ವದ ಮೌಲ್ಯ ಅಳವಡಿಸಿಕೊಳ್ಳುವಲ್ಲಿ ಸ್ಫೂರ್ತಿಯಾಗಿದೆ. ಬಸವಣ್ಣನವರು ಆರಂಭಿಸಿದ್ದ ಅನುಭವ ಮಂಟಪವು ಜನಪ್ರತಿನಿಧಿಗಳ ಸಂಸತ್ತಿನ ಪ್ರತಿಬಿಂಬ. ರಾಣಿ ಚೆನ್ನಮ್ಮನ ಮಹಾನ್ ತ್ಯಾಗ ನಮಗೆ ಸ್ಫೂರ್ತಿ ಎಂದರು.

ಏಳು ದಶಕದಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹೆಚ್ಚು ಜವಾಬ್ದಾರಿಯುತಗೊಳಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಚಿಂತನೆ ನಡೆಸಬೇಕಿದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಜನರಿಗೆ ಇನ್ನಷ್ಟು ಉತ್ತರದಾಯಿನ್ನಾಗಿಸುವುದು ಹೇಗೆ ಎಂದು ಪರಿಶೀಲಿಸಬೇಕಿದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ. ಚುನಾಯಿತ ಪ್ರತಿನಿಧಿಗಳು ಸಂವೇದನಾಶೀಲರಾದಾಗ ಮಾತ್ರ ಶಾಸಕಾಂಗದ ಪ್ರತಿಷ್ಠೆ ಹೆಚ್ಚಿಸಬಹುದು. ದೇಶಕ್ಕಾಗಿ ನೀತಿಗಳು ಮತ್ತು ಕಾನೂನು ರೂಪಿಸುವ ಜವಾಬ್ದಾರಿ ಶಾಸಕಾಂಗಗಳ ಹೆಗಲ ಮೇಲಿದೆ ಎಂದು ನುಡಿದರು.

ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚನಾತ್ಮಕ ಚರ್ಚೆಗಳು ಶಾಸಕಾಂಗದ ಚೌಕಟ್ಟಿನೊಳಗೆ ನಡೆಯುವುದನ್ನು ನಾವೆಲ್ಲರೂ ಖಾತ್ರಿಪಡಿಸಿಕೊಳ್ಳಬೇಕು. ಕಾನೂನಿನ ಬಗ್ಗೆ ಸಮಗ್ರ ಚರ್ಚೆ ಮತ್ತು ಚಿಂತನ ಮಂಥನ ನಮ್ಮ ಜವಾಬ್ದಾರಿ. ಈ ಪ್ರಕ್ರಿಯೆಯಲ್ಲಿ ಶಾಸಕರ ಸಕ್ರಿಯ ಭಾಗವಹಿಸುವಿಕೆ ಇರಬೇಕು ಎಂದು ಅವರು ಹೇಳಿದರು.

ಶಾಸಕಾಂಗವು ಹೆಚ್ಚು ಅರಿವು ಹೊಂದಿರುವ ಸಂಸ್ಥೆಯಾಗುವುದು ಮಾತ್ರವಲ್ಲ, ಶ್ರದ್ಧೆ, ಪ್ರಾಮಾಣಿಕತೆ ಹೊಂದಿರುವ ಜವಾಬ್ದಾರಿಯುತ ಸಂಸ್ಥೆಯೂ ಆಗಿರಬೇಕು. ಶಾಸಕಾಂಗಗಳು ರೂಪಿಸುವ ಕಾನೂನು ಪರಿಣಾಮಕಾರಿ ಮತ್ತು ಸಮರ್ಥವಾಗಿರಬೇಕು. ಆದರೆ ಸದನಗಳಲ್ಲಿ ಅಗತ್ಯ ಪ್ರಮಾಣದ ಚರ್ಚೆ, ಶಾಸಕರ ಭಾಗವಹಿಸುವಿಕೆ ನಡೆಯುತ್ತಿಲ್ಲ ಇದು ಕಳವಳಕಾರಿ ಸಂಗತಿ. ಸದನಗಳಲ್ಲಿ ಗಂಭೀರ ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ. ಕಾನೂನು ರಚನೆಯಲ್ಲಿ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಸದನದ ಅಮೂಲ್ಯ ಸಮಯ ವ್ಯರ್ಥ ಆಗದಂತೆ ನೋಡಿಕೊಳ್ಳಬೇಕಿದೆ. ಶಿಸ್ತು, ಸೌಜನ್ಯ, ಸಂಯಮದಿಂದ‌ ಶಾಸಕರು ವರ್ತಿಸಬೇಕು. ಸದಸ್ಯರು ಉತ್ತಮ ನಡವಳಿಕೆ, ಸಭ್ಯತೆ, ಪ್ರಬುದ್ಧತೆ, ಔದಾರ್ಯ ಹೊಂದಿರಬೇಕು. ಪ್ರತಿಭಟನೆ ಸದನದ ಘನತೆಗೆ ಅನುಗುಣವಾಗಿ ಇರಬೇಕು. ಸಂಸತ್ತಿನ ನಿಯಮಗಳಿಗನುಸಾರ ಪ್ರತಿಭಟನೆಗಳಿರಬೇಕು ಎಂದು ಸಲಹೆ ಮಾಡಿದರು.

ಕನ್ನಡದಲ್ಲಿ ಭಾಷಣ ಮಾಡುವಂತೆ ಸದನದಲ್ಲಿ ಮಳವಳ್ಳಿ ಶಾಸಕ ಡಾ. ಅನ್ನದಾನಿ ಕನ್ನಡ ಬಾವುಟ ಪ್ರದರ್ಶಿಸಿ ಒತ್ತಾಯಿಸಿದರು. ಜೆಡಿಎಸ್ ಸದಸ್ಯರು ಬೆಂಬಲಿಸಿದರು. ಸ್ಪೀಕರ್ ಕಾಗೇರಿ ಮನವಿ ಮೇರೆಗೆ ಅನ್ನದಾನಿ ಪ್ರತಿಭಟನೆ ಕೈಬಿಟ್ಟರು.

(Lok Sabha Speaker Om Birla in Karnataka Vidhana Soudha Speaks about Importance of Discussion in Democracy)

ಇದನ್ನೂ ಓದಿ: ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೊರೊನಾ ಬಿಕ್ಕಟ್ಟು: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

Published On - 3:54 pm, Fri, 24 September 21