ಚುನಾವಣಾ ಆಯೋಗದ ನಿರ್ಲಕ್ಷ್ಯ; ಮಧ್ಯಪ್ರದೇಶದಲ್ಲಿ ಕರ್ನಾಟಕದ 4 ಸಾವಿರ ಹೋಮ್​ಗಾರ್ಡ್​ಗಳ ಪರದಾಟ

| Updated By: Rakesh Nayak Manchi

Updated on: Nov 21, 2023 | 6:50 PM

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕರ್ತವ್ಯಕ್ಕಾಗಿ ಕರ್ನಾಟಕದಿಂದ ನಾಲ್ಕು ಸಾವಿರ ಹೋಮ್​ಗಾರ್ಡ್​ಗಳನ್ನು ಕಳುಹಿಸಿಕೊಡಲಾಗಿತ್ತು. ಚುನಾವಣೆ 17 ರಂದು ಮುಕ್ತಾಯಗೊಂಡಿದ್ದು, 19 ರಂದು ರಾಜ್ಯಕ್ಕೆ ವಾಪಸ್ ಆಗಬೇಕಿತ್ತು. ಆದರೆ ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಹೋಮ್​ಗಾರ್ಡ್​ಗಳು ಮಧ್ಯಪ್ರದೇಶದಲ್ಲಿ ಪರದಾಡುವಂತಾಗಿದೆ.

ಚುನಾವಣಾ ಆಯೋಗದ ನಿರ್ಲಕ್ಷ್ಯ; ಮಧ್ಯಪ್ರದೇಶದಲ್ಲಿ ಕರ್ನಾಟಕದ 4 ಸಾವಿರ ಹೋಮ್​ಗಾರ್ಡ್​ಗಳ ಪರದಾಟ
ಮಧ್ಯಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ಹೋಗಿದ್ದ ಕರ್ನಾಟಕದ 4 ಸಾವಿರ ಹೋಮ್​ಗಾರ್ಡ್​ಗಳ ಪರದಾಟ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ನ.21: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Elections 2023) ಕರ್ತವ್ಯಕ್ಕಾಗಿ ಕರ್ನಾಟಕದಿಂದ ನಾಲ್ಕು ಸಾವಿರ ಹೋಮ್​ಗಾರ್ಡ್​ಗಳನ್ನು (Home Guards) ಕಳುಹಿಸಿಕೊಡಲಾಗಿತ್ತು. ಚುನಾವಣೆ 17 ರಂದು ಮುಕ್ತಾಯಗೊಂಡಿದ್ದು, 19 ರಂದು ಹೋಮ್​ಗಾರ್ಡ್​ಗಳು ರಾಜ್ಯಕ್ಕೆ ವಾಪಸ್ ಆಗಬೇಕಿತ್ತು. ಆದರೆ ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಮಂಡ್ಯ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೋಮ್​ಗಾರ್ಡ್​ಗಳು ಮಧ್ಯಪ್ರದೇಶದಲ್ಲಿ ಪರದಾಡುವಂತಾಗಿದೆ.

ಮಧ್ಯಪ್ರದೇಶ ಚುನಾವಣಾ ಕರ್ತವ್ಯಕ್ಕೆ ರಾಜ್ಯದಿಂದ ಕಳುಹಿಸಲಾಗಿದ್ದ 4 ಸಾವಿರ ಹೋಮ್​ಗಾರ್ಡ್ಸ್​ಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಕರ್ನಾಟಕಕ್ಕೆ ಮರಳಲು ರೈಲು ಟಿಕೆಟ್ ಬುಕ್ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ: ಪಿಯೂಷ್ ಗೋಯಲ್

ಅದೇ ರೀತಿ, ಬಳ್ಳಾರಿ ಜಿಲ್ಲೆಯ 400 ಕ್ಕೂ ಅಧಿಕ ಹೋಮ್​ಗಾರ್ಡ್​ಗಳು ಮಧ್ಯಪ್ರದೇಶದಲ್ಲಿ ಪರದಾಡುತ್ತಿದ್ದಾರೆ. ಚುನಾವಣೆ ಮುಗಿದರು ರಾಜ್ಯಕ್ಕೆ ಕಳುಹಿಸಿಕೊಟ್ಟಿಲ್ಲ. ಮೂರು ದಿನಗಳಿಂದ ಇಲ್ಲಿ ಪರದಾಡುತ್ತಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಮ್ಮನ್ನು ವಾಪಸ್ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ, ರಾಮನರಗ ಜಿಲ್ಲೆಯ 150ಕ್ಕೂ ಹೆಚ್ಚು ಹೋಮ್​ಗಾರ್ಡ್ ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಇವರೆಲ್ಲರೂ ರಾಯಸೇನಾ ಜಿಲ್ಲೆಯಲ್ಲಿ ಇದ್ದು, ವಿಧಾನಸಭಾ ಚುನಾವಣೆ ಮುಗಿದು 3 ದಿನ ಕಳೆದರೂ ವಾಪಸ್ ಕಳಿಸಿಲ್ಲ. ಕೂಡಲೇ ರೈಲಿನ ವ್ಯವಸ್ಥೆ ಮಾಡಿ ರಾಜ್ಯಕ್ಕೆ ಕಳುಹಿಸುವಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮೈಸೂರು, ಬೆಳಗಾವಿ, ರಾಯಚೂರು, ಬೆಳ್ತಂಗಡಿ, ಕಲಗುರಗಿ ಜಿಲ್ಲೆಗಳಿಂದಲೂ ಹೋಮ್​ಗಾರ್ಡ್​​ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿತ್ತು. ಸದ್ಯ ನಾಲ್ಕು ಸಾವಿರ ಹೋಮ್​ಗಾರ್ಡ್​​ಗಳು ಮಧ್ಯಪ್ರದೇಶದಲ್ಲೇ ಪರದಾಡುವಂತಾಗಿದ್ದು, ಕೂಡಲೇ ಕರ್ನಾಟಕಕ್ಕೆ ಮರಳಲು ರೈಲಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ