ಮಂಡ್ಯದಲ್ಲಿ ಮುಂದುವರೆದ ಕಾವೇರಿ ಕಿಚ್ಚು; ಅನ್ನದಾತನ ವಿಭಿನ್ನ ರೀತಿ ಹೋರಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2023 | 6:02 PM

ಮಂಡ್ಯದಲ್ಲಿ ಕಾವೇರಿ ಕಿಚ್ಚು ಆರುವ ಲಕ್ಷಣ ಕಾಣುತ್ತಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ನಡೆಯುತ್ತಲೇ ಇದೆ. ಅದರಂತೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಮುಂದುವರೆದಿದ್ದು, ಹಲವಾರು ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸರ್ಕಾರ ಮಾತ್ರ ಈವರೆಗೆ ಯಾವುದೇ ತೀರ್ಮಾನ ಮಾಡದೆ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯದಲ್ಲಿ ಮುಂದುವರೆದ ಕಾವೇರಿ ಕಿಚ್ಚು; ಅನ್ನದಾತನ ವಿಭಿನ್ನ ರೀತಿ ಹೋರಾಟ
ಕಾವೇರಿಗಾಗಿ ವಿಭಿನ್ನ ಹೋರಾಟ ನಡೆಸಿದ ಪ್ರತಿಭಟನಕಾರರು
Follow us on

ಮಂಡ್ಯ, ಅ.08: ಸಕ್ಕರೆ ನಗರಿ ಮಂಡ್ಯ(Mandya)ದಲ್ಲಿ ಕಾವೇರಿ(Cauvery) ಕಿಚ್ಚು ತಣ್ಣಗಾಗುತ್ತಿಲ್ಲ. ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಅನ್ನದಾತರು ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅದರಂತೆ ಇವತ್ತು ಕೂಡ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಮುಂದುವರೆದಿದ್ದು, ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದವು. ಈ ವೇಳೆ ಇಂದು ಕುಂಭ ಕರ್ಣನ ವೇಷ ಧರಿಸಿ ಅಣಕು ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಕುಂಭಕರ್ಣನ ರೀತಿ ನಿದ್ರಿಸುತ್ತಿದ್ದು, ಎಷ್ಟೇ ಹೋರಾಟ ನಡೆಸಿದರೂ ನಿದ್ರಾವಸ್ಥೆಯಲ್ಲಿದ್ದಾರೆ. ನಮ್ಮ ಕೂಗು ಅವರಿಗೆ ಕೇಳಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಚಪ್ಪಲಿ ಏಟು

ಇನ್ನು ಕರುನಾಡ ವಿಜಯಸೇನೆ ಸಂಘಟನೆ ವತಿಯಿಂದ ಇವತ್ತು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಕೂಡ ನಡೆದಿದ್ದು, ಮಂಡ್ಯದ ಸಿಲ್ವರ್ ಜ್ಯಬಿಲಿ ಪಾರ್ಕ್​ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಮೈಸೂರು ಬೆಂಗಳೂರು ಹೆದ್ದಾರಿ ತಡೆದು, ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದರು. ಇದೇ ವೇಳೆ ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ಕಾವೇರಿ ನಿವಾಸದ ಬಳಿ ಜನಜಂಗುಳಿ ನಿಯಂತ್ರಿಸದ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ರೇಗಿದ ಸಿಎಂ ಸಿದ್ದರಾಮಯ್ಯ

ಅಲ್ಲದೆ ಬರ ಜಿಲ್ಲೆಯ ಚಿತ್ರದುರ್ಗದಿಂದ ಟ್ಯಾಂಕರ್​ನಲ್ಲಿ ಮಂಡ್ಯ ರೈತರಿಗೆ ನೀರು ತರುವ ಮೂಲಕ ಮಂಡ್ಯ ಸಂಪೂರ್ಣ ಬರದಿಂದ ಕೂಡಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ನಂತರ ಹಿತ ರಕ್ಷಣಾ ಸಮಿತಿ ಧರಣಿವರೆಗೂ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ದ ಘೋಷಣೆ ಕೂಗಿದರಲ್ಲದೆ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಮಂಡ್ಯದಲ್ಲಿ ಸದ್ಯಕ್ಕೆ ಕಾವೇರಿ ಹೋರಾಟ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಹೋರಾಟದ ಕಾವು ಹೆಚ್ಚಾಗುತ್ತಿದೆ. ಸರ್ಕಾರ ಇದೇ ರೀತಿ ಮೌನ ವಹಿಸಿದ್ದೇ ಆದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Sun, 8 October 23